

ಬೆಂಗಳೂರು: ರಾಜ್ಯ ಸರ್ಕಾರ ಸೆಪ್ಟೆಂಬರ್ 22ರಿಂದ ಆರಂಭಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ("ಜಾತಿ ಗಣತಿ" ಎಂದೇ ವ್ಯಾಪಕವಾಗಿ ಕರೆಯಲಾಗುತ್ತಿದೆ)ಯ ಮನೆ ಮನೆ ಗಣತಿ ಶುಕ್ರವಾರ ಮುಕ್ತಾಯವಾಗಿದ್ದು, ಆನ್ಲೈನ್ ಮೂಲಕ ಮಾಹಿತಿ ಒದಗಿಸಲು ನವೆಂಬರ್ ೧೦ ರವರೆಗೂ ಅವಕಾಶ ನೀಡಲಾಗಿದೆ.
ರಾಜ್ಯಾದ್ಯಂತ ಈವರೆಗೆ ಶೇ.97.51(ಜಿಬಿಎ ಹೊರತುಪಡಿಸಿ)ರಷ್ಟು ಸಮೀಕ್ಷೆ ನಡೆದಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.
ರಾಜ್ಯದ ಜನಸಂಖ್ಯೆ 6.85 ಕೋಟಿಗೆ ಹೆಚ್ಚಳ
ರಾಜ್ಯಾದ್ಯಂತ ಇದುವರೆಗೆ 6,13,83,908 ಜನರನ್ನು ಈ ಸಮೀಕ್ಷೆ ಒಳಗೊಂಡಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.
ಆಯೋಗವು ಹಂಚಿಕೊಂಡ ಸಂಕ್ಷಿಪ್ತ ಮಾಹಿತಿಯ ಪ್ರಕಾರ, ಕರ್ನಾಟಕದ ಅಂದಾಜು ಜನಸಂಖ್ಯೆ 6,85,38,000 ಆಗಿದ್ದರೆ, ಅಕ್ಟೋಬರ್ 31ರ ವೇಳೆಗೆ ಸಮೀಕ್ಷೆ ಮಾಡಲಾದ ಜನಸಂಖ್ಯೆ 6,13,83,908 ಆಗಿದೆ.
ಒಟ್ಟು 4,22,258 ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, 34,49,681 ಮನೆಗಳು ಖಾಲಿ ಇದ್ದು ಅಥವಾ ಬೀಗ ಹಾಕಲ್ಪಟ್ಟಿವೆ ಎಂದು ಆಯೋಗ ತಿಳಿಸಿದೆ.
ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷೆಯು ಅಕ್ಟೋಬರ್ 7 ರಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆಯಲ್ಲಿ ಸರ್ಕಾರವು ಸಮೀಕ್ಷೆಯ ಅವಧಿಯನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಿತ್ತು.
ಇಂದು ಮನೆ ಮನೆ ಗಣತಿ ಕಾರ್ಯವನ್ನು ಮುಕ್ತಾಯಗೊಳಿಸಿದ್ದು, ಆನ್ ಲೈನ್ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಲು ನವೆಂಬರ್ 10ರ ವರೆಗೆ ಅವಕಾಶ ನೀಡಲಾಗಿದೆ. https://kscbcselfdeclaration.karnataka.gov.in ಲಿಂಕ್ ಬಳಸಿ "ಆನ್ಲೈನ್ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಬಹುದು ಎಂದು ಆಯೋಗ ತಿಳಿಸಿದೆ.
ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದವರು ಮತ್ತು ಗಣತಿದಾರರು ತಮ್ಮ ಮನೆಗಳಿಗೆ ಭೇಟಿ ನೀಡಿದಾಗ ಲಭ್ಯವಿಲ್ಲದವರು ಆನ್ಲೈನ್ ವೇದಿಕೆಯ ಮೂಲಕ ತಮ್ಮ ಮಾಹಿತಿಯನ್ನು ದಾಖಲಿಸಲು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಆಯೋಗ ಹೇಳಿದೆ.
ಆಯೋಗದ ಸಹಾಯವಾಣಿ ಸಂಖ್ಯೆ 80507 70004 ಮೂಲಕ ಜನರು ಸಮೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಜಾತಿ ಗಣತಿ ಅವಧಿ ವಿಸ್ತರಣೆ ಇಲ್ಲ
ಜಾತಿ ಗಣತಿ ಮುಕ್ತಾಯವಾಗಿದ್ದು, ಸಮೀಕ್ಷೆಯ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಶೇ.48.32 ಸಮೀಕ್ಷೆ ಮುಗಿದಿದೆ. ಇದಕ್ಕೆ ಕೆಲವು ತಾಂತ್ರಿಕ ಕಾರಣಗಳು ಕಂಡುಬಂದಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ಬಹುತೇಕರು ಹೊರ ಜಿಲ್ಲೆಯಿಂದ ಬಂದವರು ಆಗಿದ್ದು, ಸ್ವಂತ ಊರಿನಲ್ಲಿ ಮಾಹಿತಿ ಕೊಟ್ಟಿದ್ದಾರೆ ಎಂದರು.
Advertisement