

ಬೆಂಗಳೂರು: ಕೆಲಸಕ್ಕೆ ನಿಯಮಿತವಾಗಿ ಹಾಜರಾಗದ ವಿಚಾರಕ್ಕೆ ಎಚ್ಚರಿಕೆ ನೀಡಿದ ಮೇಲಾಧಿಕಾರಿಯನ್ನು ವೆಲ್ಡರ್ ಒಬ್ಬ ಇರಿದು ಹತ್ಯೆ ಮಾಡಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಯಾದಗಿರಿ ಮೂಲದ ಹನುಮಂತ ಅಲಿಯಾಸ್ ಅಜಯ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತ ಪೀಣ್ಯ ಪ್ರದೇಶದ ಕಾರ್ಖಾನೆಯಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಇನ್ನು ಮೃತನನ್ನು ರಾಹುಲ್ (30) ಎಂದು ಗುರುತಿಸಲಾಗಿದೆ. ಘಟನೆ ಸೋಮವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ನಡೆದಿದೆ.
ಪ್ಲಾಸ್ಟಿಕ್ ಫರ್ನಿಚರ್ ತಯಾರಿಕಾ ಕಾರ್ಖಾನೆಯಲ್ಲಿ ಮೇಲ್ವಿಚಾರಕರಾಗಿದ್ದ ರಾಹುಲ್, ಕಚ್ಚಾ ವಸ್ತುಗಳನ್ನು ಇಳಿಸುವ ಕೆಲಸ ನೋಡಿಕೊಳ್ಳುತ್ತಿದ್ದ ವೇಳೆ, ಆರೋಪಿ ಅಜಯ್ ಚಾಕು ಹಿಡಿದು ಬೆನ್ನಟ್ಟಿ ಇರಿದು ಕೊಂದಿದ್ದಾನೆ.
ಹನುಮಂತ ಅಜಯ್ ರಾಹುಲ್ ಮೇಲೆ 10ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಹುಲ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ರಾಹುಲ್ ಕರಿಹೋಬನಹಳ್ಳಿ ಪ್ರದೇಶದ ಬೃಂದಾವನನಗರ ನಿವಾಸಿಯಾಗಿದ್ದು, ಕುಟುಂಬ ಮೂಲ ಉತ್ತರ ಪ್ರದೇಶವಾಗಿದೆ. ರಾಹುಲ್ ಅವರ ಸಹೋದರ ರೋಹಿತ್ ನೀಡಿದ ದೂರಿನ ಆಧಾರದಲ್ಲಿ ರಾಜಗೋಪಾಲ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯು ಕಳೆದ ಏಳು ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಕಾರ್ಖಾನೆ ಆವರಣದಲ್ಲೇ ವಾಸಿಸುತ್ತಿದ್ದ. ಸುಮಾರು 20 ದಿನಗಳ ಹಿಂದೆ ಕೆಲಸಕ್ಕೆ ನಿಯಮಿತವಾಗಿ ಬಾರದ ಕಾರಣ ರಾಹುಲ್ ಎಚ್ಚರಿಕೆ ನೀಡಿದ್ದ. ಇದರಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
Advertisement