

ಬೆಂಗಳೂರು: ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹಾಗೂ ಈಗಿನ ಗ್ರೇಟರ್ ಬೆಂಗಳೂರು ಅಥಾರಿಟಿ (GBA)ಯ ಮಹತ್ವಾಕಾಂಕ್ಷೆಯ 179 ಕೋಟಿ ರೂಪಾಯಿ ವೆಚ್ಚದ K-100 ಜಲಮಾರ್ಗ-ವಾಕ್ವೇ ಯೋಜನೆ (ಮೆಜೆಸ್ಟಿಕ್ನ ಶಾಂತಲಾ ಸಿಲ್ಕ್ಸ್ನಿಂದ ಬಿಟಿಎಂ ವಿಧಾನಸಭಾ ಕ್ಷೇತ್ರದ ಕೊರಮಂಗಲವರೆಗೆ) ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರೂ, ಇದೀಗ ಅದು BWSSB ಕಾರಣದಿಂದ ದುರ್ವಾಸನೆಯ ಕೊಳಚೆಗುಂಡಿ (cesspool) ಆಗಿ ಪರಿವರ್ತನೆಯಾಗಿದೆ ಎಂದು ಆರೋಪಗಳು ಕೇಳಿಬಂದಿವೆ.
ಸುಮಾರು 12 ಕಿ.ಮೀ ವ್ಯಾಪ್ತಿಯ ಈ ಯೋಜನೆಯ ಮಾರ್ಗದ ಸುತ್ತ ಇರುವ ನಿವಾಸಿಗಳು ದುರ್ವಾಸನೆ ಮತ್ತು ಸೊಳ್ಳೆಗಳ ಕಾಟದಿಂದ ಬಳಲುತ್ತಿದ್ದಾರೆ. ಶುದ್ಧೀಕರಿಸಿದ ನೀರು ಹರಿಯಬೇಕಿದ್ದ ಈ ಜಲಮಾರ್ಗವನ್ನು 2025 ಜನವರಿಯಲ್ಲಿ ಉದ್ಘಾಟಿಸಬೇಕಾಗಿತ್ತು, ಆದರೆ 2026ರ ಏಪ್ರಿಲ್ ಆದರೂ ಕಾರ್ಯರೂಪಕ್ಕೆ ಬಂದಿಲ್ಲ.
ವಿಲ್ಸನ್ ಗಾರ್ಡನ್ನ BTS ರಸ್ತೆಯ ಬಳಿ ಈ ಜಲಮಾರ್ಗದ ಪಕ್ಕದಲ್ಲೇ ಹೂವಿನ ಮಳಿಗೆ ಹೊಂದಿರುವ ಭಾಸ್ಕರ್ ಬಾಬು, ಇಲ್ಲಿ ನಾವು ದುರ್ವಾಸನೆ ತುಂಬಿದ ಗಾಳಿಯನ್ನೇ ಉಸಿರಾಡಬೇಕಿದೆ. ಸಂಜೆ ಆಗುತ್ತಿದ್ದಂತೆಯೇ ಸೊಳ್ಳೆಗಳು ಕಾಡಲು ಆರಂಭಿಸುತ್ತವೆ. ಅಂಗಡಿ ಮುಚ್ಚುವವರೆಗೂ ಕಚ್ಚಿಸಿಕೊಂಡೇ ಇರಬೇಕು ಎಂದು ಕಷ್ಟ ಹೇಳಿಕೊಂಡರು.
ವಿನಾಯಕನಗರದ ನಿವಾಸಿ ಸಲ್ಮಾ, ಮನೆಯಲ್ಲಿ ವಯೋವೃದ್ಧರು ಇದ್ದಾರೆ. ಅವರಿಗೆ ಹಲವು ಆರೋಗ್ಯ ಸಮಸ್ಯೆಗಳಿವೆ. ಈ ಪರಿಸ್ಥಿತಿಯಿಂದ ಸೋಂಕು, ಅಲರ್ಜಿ ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಆತಂಕವಾಗಿದೆ. ಕಾಲುವೆಯಲ್ಲಿ ಮಲಿನ ನೀರು ಹರಿಯುತ್ತಿದೆ. ಜನರು ಕಸ ಎಸೆಯುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಅಧಿಕಾರಿಗಳು ತಕ್ಷಣ ಕಾಲುವೆಯನ್ನು ಸ್ವಚ್ಛಗೊಳಿಸಿ, ಮಲಿನ ನೀರಿನ ಹರಿವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
GBA ಯ ಮಳೆನೀರು ಕಾಲುವೆ ವಿಭಾಗದ ಎಂಜಿನಿಯರ್ಗಳು ಸ್ಥಳ ಪರಿಶೀಲನೆ ನಡೆಸಿದ್ದು, ಬೆಂಗಳೂರು ಜಲಮಂಡಳಿ (BWSSB) ಅಧಿಕಾರಿಗಳು ಎಸ್ ಆರ್ ನಗರದಲ್ಲಿನ ವೈಟ್-ಟಾಪ್ ರಸ್ತೆ ಕತ್ತರಿಸಲು ಅನುಮತಿ ನೀಡುವಂತೆ GBA ಯನ್ನು ಕೋರಿದ್ದಾರೆ.
K-100 ಯೋಜನೆ ಅಂತಿಮ ಹಂತದಲ್ಲಿದೆ. ಈಜೀಪುರ ಭಾಗದಲ್ಲಿ ರಕ್ಷಣಾ ಇಲಾಖೆ ಕಾಲುವೆಯನ್ನು ವಶದಲ್ಲಿಟ್ಟುಕೊಂಡು ಕಾಮಗಾರಿಗೆ ಅಡಚಣೆ ತಂದಿತ್ತು. ಈಗ ಅನುಮತಿ ಸಿಕ್ಕಿದ್ದು, ಕೆಲವು ವಾರಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು GBA ಯೋಜನಾ ಘಟಕದ ಎಂಜಿನಿಯರ್ ಹೇಳುತ್ತಾರೆ. ಜಲಮಂಡಳಿ ಮಲಿನ ನೀರಿನ ಹರಿವು ತಡೆದಿದ್ದರೆ, ಜಲಮಾರ್ಗ ಮಾಲಿನ್ಯರಹಿತವಾಗಿರುತ್ತಿತ್ತು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಡಬ್ಲ್ಯುಎಸ್ ಎಸ್ ಬಿ, ಎಸ್ ಪಿ ರಸ್ತೆಯಿಂದ ಮಾತ್ರ ಈ ಯೋಜನೆ ತೆರೆದಿದೆ. ಚಿಕ್ಕಪೇಟೆಯಿಂದ ಮೆಜೆಸ್ಟಿಕ್ವರೆಗೆ ಕಾಲುವೆಯ ಮೇಲ್ಮೈ ಮುಚ್ಚಲಾಗಿದೆ, ಅಲ್ಲಿ ಮಣ್ಣಿನ ಸಂಗ್ರಹ (silt) ಇರಬಹುದು. ಎಸ್ ಆರ್ ನಗರ ಭಾಗದ 500 ಮೀಟರ್ ಪ್ರದೇಶದಲ್ಲಿ ಅನೇಕ ಮನೆಗಳ ಸಂಪರ್ಕಗಳಿಂದ ಮಲಿನ ನೀರು ಹರಿಯುತ್ತಿರುವ ಸಾಧ್ಯತೆ ಇದೆ. ಆ ಭಾಗದ ರಸ್ತೆಯನ್ನು ಕತ್ತರಿಸಲು ಅವಕಾಶ ನೀಡಿದರೆ, ಸಮಸ್ಯೆಯನ್ನು ಸರಿಪಡಿಸಬಹುದು ಎಂದು ತಿಳಿಸಿದೆ.
ಕಳೆದ ವಾರ GBA ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಜಲಮಾರ್ಗವನ್ನು ಪರಿಶೀಲಿಸಿ, ಕಾಲುವೆಗೆ ಮಲಿನ ನೀರು ಸೇರುವ ಸಮಸ್ಯೆಯನ್ನು ತಕ್ಷಣ ಸರಿಪಡಿಸುವಂತೆ ಸೂಚಿಸಿದ್ದರು.
179 ಕೋಟಿ ವೆಚ್ಚದ ಈ ಸುಂದರ ವಾಕ್ವೇ ಯೋಜನೆಗೆ, ಮಲಿನ ನೀರು ಹರಿಯುತ್ತಿರುವುದರಿಂದ ಉದ್ದೇಶವೇ ವಿಫಲವಾಗುತ್ತಿದೆ ಎಂದು ನಿವೃತ್ತ ಎಂಜಿನಿಯರ್ ಒಬ್ಬರು ಹೇಳುತ್ತಾರೆ.
Advertisement