

ಉಡುಪಿ: ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆತನ ಪತ್ನಿ ಸೌಮ್ಯ ಸುದೀಪ್ ಜೊತೆಗೆ ಎರಡನೇ ಮದುವೆಯಾಗಿದ್ದು, ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆಂದು ಆತನ ತಂದೆ ದಾಮೋದರ ಶೆಟ್ಟಿ ಕೇಸ್ ದಾಖಲಿಸಿದ್ದರು.
ಸೌಮ್ಯ ಮೇಲಿನ ಆರೋಪಗಳು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆ ಕಾರ್ಕಳ ನಗರ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪತಿಗೆ ಬೆದರಿಕೆ ಹಾಕಿದ್ದ ಸೌಮ್ಯ
ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮೂಲದ ಸುದೀಪ್ ರೈ ಫೆಬ್ರವರಿ 17ರಂದು ಕಾರ್ಕಳ ಮೂಲದ ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಸುದೀಪ್ ರೈ ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿರುವ ಪತ್ನಿಯ ಮನೆಯಲ್ಲಿ ವಾಸವಾಗಿದ್ದರು. ಮಾರ್ಚ್ 17ರಂದು ತಾಯಿಯೊಂದಿಗೆ ಕಾರಿನಲ್ಲಿ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ವೇಳೆ, ಸೌಮ್ಯ ಶೆಟ್ಟಿ ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾಳೆಂದು ಸುದೀಪ್ ಅವರ ಪೋಷಕರು ಆರೋಪಿಸಿದ್ದರು.
ಈ ಘಟನೆಯ ಬಳಿಕ ಮಾರ್ಚ್ 22ರಂದು ಸುದೀಪ್ ರೈ ಅವರು ವಿಷ ಸೇವಿಸಿರುವುದಾಗಿ ಸೌಮ್ಯ ಶೆಟ್ಟಿ ಸಂಬಂಧಿಕರಿಗೆ ಕರೆಮಾಡಿ ತಿಳಿಸಿದ್ದಳು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಮೃತಪಟ್ಟಿದ್ದರು.
ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಸುದೀಪ್ ತಂದೆ ಸೌಮ್ಯಳೇ ಮಗನಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಳು ಎಂದು ದೂರು ನೀಡಿದ್ದರು.
Advertisement