

ದಾವಣಗೆರೆ: ಮಕ್ಕಳ ಮೇಲೆ ದೌರ್ಜನ್ಯ ಮತ್ತು ಕಿರುಕುಳಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹರಿಹರದಲ್ಲಿರುವ ವೀರಶೈವ ಪಂಚಮಸಾಲಿ ಗುರುಪೀಠಕ್ಕೆ ಮಕ್ಕಳ ಕಲ್ಯಾಣ ಸಮಿತಿ (CWC) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಪೀಠದ ಮುಖ್ಯಸ್ಥರಾದ ವಚನಾನಂದ ಸ್ವಾಮೀಜಿಗಳನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ದಾವಣಗೆರೆ ಮಕ್ಕಳ ಕಲ್ಯಾಣ ಸಮಿತಿಗೆ ಬಂದಿದ್ದ ಮಕ್ಕಳ ದೂರುಗಳ ಆಧಾರದ ಮೇಲೆ ಸಿಡಬ್ಲ್ಯೂಸಿ ಅಧ್ಯಕ್ಷೆ ಮಂಜುಳಾ ಮಹೇಶ್ ನೇತೃತ್ವದ ತಂಡ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಂಡದಲ್ಲಿ ಮಹಿಳಾ ಸಿಬ್ಬಂದಿ, ಪುರುಷ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದ್ದರು.
ಪರಿಶೀಲನೆ ವೇಳೆ ಮಕ್ಕಳ ವಾಸಸ್ಥಳ, ಓದುವ ವ್ಯವಸ್ಥೆ, ನಿದ್ರಿಸುವ ಸ್ಥಳ ಮತ್ತು ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಜೊತೆಗೆ ಮಕ್ಕಳ ಸ್ನೇಹಿತರು ಹಾಗೂ ಮಠದ ಆಡಳಿತ ಮಂಡಳಿಯವರ ಜೊತೆಗೂ ಅಧಿಕಾರಿಗಳು ಮಾತುಕತೆ ನಡೆಸಿದರು.
ಮಠದ ಕಾನೂನು ಸಲಹೆಗಾರ ಪ್ರಕಾಶ್ ಪಾಟೀಲ್ ಅವರು ಮಾತನಾಡಿ, ಇದು ಹಾಸ್ಟೆಲ್ ಅಲ್ಲ, ಮಕ್ಕಳ ಆರೈಕೆ ಕೇಂದ್ರವಾಗಿದ್ದು, ಬಡ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಅಗತ್ಯ ಅನುಮತಿ ಪಡೆಯದೆ ಹಾಸ್ಟೆಲ್ ನಡೆಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಮಕ್ಕಳ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದಿರುವುದನ್ನು ಗಮನಿಸಿದ ಸಮಿತಿ, ಮಠದ ನಿರ್ವಹಣೆಯ ಕುರಿತು ಕಿಡಿಕಾರಿದೆ ಎಂದು ತಿಳಿದುಬಂದಿದೆ. ಇದು ನಿಯಮ ಉಲ್ಲಂಘನೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳಿಂದ ಬಂದ ದೂರುಗಳ ಕುರಿತು ಸ್ಪಷ್ಟ ಮಾಹಿತಿ ಪಡೆಯಲು ಮೂರು ಮಕ್ಕಳಿಗೆ ಕೌನ್ಸೆಲಿಂಗ್ ನಡೆಸಲಾಗಿದ್ದು, ಅದರ ವರದಿ ಸೋಮವಾರದೊಳಗೆ ಸಿಗುವ ನಿರೀಕ್ಷೆಯಿದೆ. ವರದಿ ಬಂದ ನಂತರ ಆರೋಪಗಳ ಸ್ವರೂಪ ಸ್ಪಷ್ಟವಾಗಲಿದೆ ಎಂದು ಸಿಡಬ್ಲ್ಯೂಸಿ ಅಧ್ಯಕ್ಷೆ ಮಂಜುಳಾ ಅವರು ಹೇಳಿದ್ದಾರೆ.
ಈ ಪ್ರಕರಣ ಜುವೆನೈಲ್ ಜಸ್ಟಿಸ್ ಕಾಯ್ದೆಯ ಅಡಿಯಲ್ಲಿ ಬರುತ್ತಿರುವುದರಿಂದ ಕೆಲವು ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಮುಂದಿನ ಹಂತದಲ್ಲಿ ಚಾಲಕರು ಮತ್ತು ಟ್ರಸ್ಟಿಗಳನ್ನು ಕೂಡ ವಿಚಾರಣೆಗೊಳಪಡಿಸಲಾಗುವುದು ಎಂದು ಸಿಡಬ್ಲ್ಯೂಸಿ ಸದಸ್ಯ ನಾಗರಾಜ್ ನಾಯಕ್ ಅವರು ಹೇಳಿದ್ದಾರೆ
Advertisement