ಅಬ್ಬಬ್ಬಾ ಏನ್ ಬಿಸಿಲು: ಬೆಂಗಳೂರಲ್ಲಿ ತಾಪಮಾನ ಸಾಮಾನ್ಯಕ್ಕಿಂತ 3 ಡಿಗ್ರಿ ಹೆಚ್ಚಳ!

ತೀವ್ರ ತಾಪಮಾನ, ಬಿಸಿಲಿನಿಂದ ಬೆಂದು ಹೋಗಿರುವ ಬೆಂಗಳೂರು ನಿವಾಸಿಗಳು ತಂಪಾಗಲು ಇನ್ನೂ ಒಂದು ವಾರ ಕಾಯಬೇಕಾಗಬಹುದು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ನಿನ್ನೆ ಮಂಗಳವಾರವೂ ತೀವ್ರ ಬಿಸಿಲಿನ ತಾಪ ಮುಂದುವರಿದು, ಗರಿಷ್ಠ ತಾಪಮಾನ ಸುಮಾರು 36.5 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಯಿತು. ಇದು ಏಪ್ರಿಲ್ ಮಧ್ಯಭಾಗದ ಸಾಮಾನ್ಯ ಮಟ್ಟಕ್ಕಿಂತ ಸುಮಾರು 2.3 ಡಿಗ್ರಿ ಹೆಚ್ಚಾಗಿದೆ.

ತೀವ್ರ ತಾಪಮಾನ, ಬಿಸಿಲಿನಿಂದ ಬೆಂದು ಹೋಗಿರುವ ಬೆಂಗಳೂರು ನಿವಾಸಿಗಳು ತಂಪಾಗಲು ಇನ್ನೂ ಒಂದು ವಾರ ಕಾಯಬೇಕಾಗಬಹುದು. ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ನಾಲ್ಕು ದಿನಗಳವರೆಗೆ ಬೆಂಗಳೂರು ಸುತ್ತಮುತ್ತ ಶುಭ್ರ ಆಕಾಶ ಮತ್ತು ಉಷ್ಣಾಂಶ ಹೆಚ್ಚಾಗಿಯೇ ಇರುತ್ತದೆ ಎಂದು ಮುನ್ಸೂಚನೆ ನೀಡಿದೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ತಾಪಮಾನ 36.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, HAL ವಿಮಾನ ನಿಲ್ದಾಣದಲ್ಲಿ 36.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎರಡೂ ಕೇಂದ್ರಗಳಲ್ಲಿ ಋತುಮಾನ ಸರಾಸರಿಗಿಂತ ಸುಮಾರು 2 ರಿಂದ 3 ಡಿಗ್ರಿ ಹೆಚ್ಚಾಗಿದೆ.

ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಸಿಎಸ್ ಪಾಟೀಲ್, ಇನ್ನೂ ಒಂದು ವಾರ ಬಿಸಿಯ ತೀವ್ರತೆ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ತಾಪಮಾನವು 36 ರಿಂದ 37 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ರಾಜ್ಯದ ಕರಾವಳಿ ಹಾಗೂ ಉತ್ತರ ಭಾಗಗಳಲ್ಲಿ ತಾಪಮಾನವು 40 ರಿಂದ 42 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹೇಳಿದರು.

ಏಪ್ರಿಲ್ ಮಧ್ಯಭಾಗದಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನ 2023-24ರಲ್ಲಿ 39.4 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಮಧ್ಯ ಭಾರತದಲ್ಲಿ ಉಂಟಾಗಿರುವ ಬಲವಾದ ಚಂಡಮಾರುತ ವಿರುದ್ಧ ಚಲನವಲನವು ಈ ಪರಿಸ್ಥಿತಿಗೆ ಕಾರಣವಾಗಿದೆ. ದಿನದಷ್ಟೇ ಅಲ್ಲ, ರಾತ್ರಿ ಸಮಯದಲ್ಲಿಯೂ ಉಷ್ಣಾಂಶ ಹೆಚ್ಚಾಗಿರಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಸಿಗಾಳಿ ತೀವ್ರವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ 41.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬೀದರ್ ನಲ್ಲಿ 41.6 ಮತ್ತು ರಾಯಚೂರಿನಲ್ಲಿ 41.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Representational image
ಬಿಸಿಲು, ಉಷ್ಣ ಅಲೆ ನಡುವೆ ಅಕಾಲಿಕ ಮಳೆ: ಹಲವು ಕಡೆ ಅವಾಂತರ, ಹಾನಿ, ವೃದ್ಧೆ ಬಲಿ

ಭಾರತೀಯ ಹವಾಮಾನ ಇಲಾಖೆ ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಭಾಗಗಳಿಗೆ ಮುಂದಿನ ಐದು ದಿನಗಳವರೆಗೆ ಬಿಸಿ ಮತ್ತು ತೇವಾಂಶ ಹೆಚ್ಚಿರುವ ಕುರಿತು ಎಚ್ಚರಿಕೆ ನೀಡಿದೆ.

ತಾಪಮಾನ ನಡುವೆಯೂ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾದ ಘಟನೆಗಳೂ ಕಂಡುಬಂದಿವೆ. ಸೋಮವಾರ ಬೆಳಗ್ಗೆಯವರೆಗೆ ಕಳೆದ 24 ಗಂಟೆಗಳಲ್ಲಿ ಧಾರವಾಡದಲ್ಲಿ 12.6 ಮಿಮೀ ಮಳೆಯಾಗಿದ್ದು, ಶಿವಮೊಗ್ಗದಲ್ಲಿ 8.8 ಮಿಮೀ ಮಳೆಯಾಗಿದೆ.

ಮುಂದಿನ ವಾರದ ಮುನ್ಸೂಚನೆಯ ಪ್ರಕಾರ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಕೆಲವೆಡೆ ಲಘು ಮಳೆಯೊಂದಿಗೆ ಗುಡುಗು-ಮಿಂಚು ಹಾಗೂ ಗಂಟೆಗೆ 30 ರಿಂದ 40 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಈ ವಾರ ಒಣಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು IMD ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com