

ಹುಬ್ಬಳ್ಳಿ: ಮೊಬೈಲ್ನಲ್ಲಿ ಆನ್ಲೈನ್ ಗೇಮ್ ಆಡುತ್ತಿದ್ದ 14 ವರ್ಷದ ಬಾಲಕ ಸಮರ್ಥ ಪಟಿಕೆ, ಪೋಷಕರ ಹಿತವಚನ ಸಹಿಸದೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗೇರಿಯ ಉದಯನಗರದ ನಿವಾಸಿ ಸಮರ್ಥ್ ಕಳೆದ ಕೆಲವು ದಿನಗಳಿಂದ ‘ಫ್ರೀಫೈರ್’ಆನ್ಲೈನ್ ಗೇಮ್ಗಳಿಗೆ ವಿಪರೀತ ಅಡಿಕ್ಟ್ ಆಗಿದ್ದ. ರಾತ್ರಿ ಸತತವಾಗಿ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬುದ್ಧಿವಾದ ಹೇಳಿದ್ದಾರೆ. ‘ಮೊಬೈಲ್ ಸಾಕು ಮಾಡು, ಓದಿಕೊಳ್ಳುವ ಕಡೆ ಗಮನ ಕೊಡು’ ಎಂದು ಹೇಳಿ ಆತನ ಕೈಲಿದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ.
ಇದರಿಂದ ತೀವ್ರವಾಗಿ ನೊಂದ ಸಮರ್ಥ್, ತಕ್ಷಣ ತನ್ನ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ಸುಮಾರು 15-20 ನಿಮಿಷಗಳಾದರೂ ಬಾಲಕ ಹೊರಬಾರದಿದ್ದಾಗ ಆತಂಕಗೊಂಡ ತಂದೆ, ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಈ ವೇಳೆ ಮಗ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ತಕ್ಷಣ ಬಾಗಿಲು ಮುರಿದು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ, ಪೋಷಕರು ತಮ್ಮ ಮಕ್ಕಳ ಮೊಬೈಲ್ ವ್ಯಸನದ ಬಗ್ಗೆ ನಿಗಾ ಇಡುವಂತೆ ತಿಳಿಸಿದ್ದಾರೆ. ಮಕ್ಕಳಲ್ಲಿ ಮೊಬೈಲ್ ವ್ಯಸನ ಬಿಡಿಸಲು ಪೋಷಕರು ಶಿಕ್ಷಕರು ಮತ್ತು ತಜ್ಞರನ್ನು ಸಂಪರ್ಕಿಸಬೇಕು ಎಂದು ಅವರು ಸೂಚಿಸಿದರು.
ಪೋಷಕರು ಮೊದಲು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಮೊಬೈಲ್ ಫೋನ್ ನೀಡುತ್ತಾರೆ, ಊಟ ಮಾಡಿಸಲು ಅಥವಾ ಓದಿಗಾಗಿ, ಯಾವುದೋ ಕಾರಣಕ್ಕೆ ಮೊಬೈಲ್ ನೀಡುತ್ತಾರೆ. ಇದರಿಂದ ಮಕ್ಕಳಿಗೆ ಮೊಬೈಲ್ ನೋಡುವುದು ಚಟವಾಗುತ್ತದೆ. ಈ ಹವ್ಯಾಸ ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ. ಆದ್ದರಿಂದ ಪೋಷಕರು ಹಠಾತ್ತನೆ ಹಿಂತೆಗೆದುಕೊಳ್ಳದೆ, ತಜ್ಞರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
Advertisement