

ಮಂಗಳೂರು: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಮೆರವಣಿಗೆಯ ವೇಳೆ ಪಾದಚಾರಿ ಸೇತುವೆ ಕುಸಿದು ಎಂಟು ಮಂದಿಗೆ ಗಾಯಗೊಂಡಿದ್ದಾರೆ. ಶುಕ್ರವಾರ ತಡರಾತ್ರಿ ಮೂಡುಬಿದಿರೆ ತಾಲ್ಲೂಕಿನ ಹೊಸಬೆಟ್ಟು ಬಳಿ 'ಧರ್ಮನೇಮ' ಆಚರಣೆಯ ಸಿದ್ಧತೆಯ ಭಾಗವಾಗಿ ಭಕ್ತರು ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.
ಅಧಿಕಾರಿಗಳ ಪ್ರಕಾರ, ಸನದ್ಗುಡ್ಡೆ ಪಡಿಹೊಡಿಬೆಟ್ಟು ದೇವಾಲಯದಿಂದ ಪ್ರಾರಂಭವಾಗಿ ತಕೋಡೆ ಬರ್ಕೆಯಲ್ಲಿರುವ ನಿವಾಸದ ಕಡೆಗೆ ಸಾಗುತ್ತಿದ್ದ ಮೆರವಣಿಗೆಯಲ್ಲಿ ಸುಮಾರು 25 ಜನರು ಭಾಗವಹಿಸಿದ್ದರು. ಸಾಂಪ್ರದಾಯಿಕ ಸಂಗೀತ ವಾದ್ಯಗಳೊಂದಿಗೆ ಗುಂಪು ಕಿರಿದಾದ ಪಾದಚಾರಿ ಸೇತುವೆಯನ್ನು ದಾಟುತ್ತಿದ್ದಾಗ ಅಪಘಾತ ಸಂಭವಿಸಿತ್ತು.
ಪಲ್ಲಕ್ಕಿ ಹೊತ್ತು ತೆರಳುತ್ತಿದ್ದಾಗ ಸುಮಾರು 10 ಅಡಿ ಆಳದ ಕಂದಕಕ್ಕೆ ಬಿದ್ದಿದ್ದರು. ಹರೀಶ್ ಎಂಬುವರ ಎರಡೂ ಕಾಲುಗಳು ಮುರಿದಿದ್ದು ಮಾರೂರಿನ ಸುನಿಲ್ ಶೆಟ್ಟಿಗೆ ಗಂಭೀರ ಗಾಯಗಳಾಗಿವೆ. ಇತರ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದು ಚಿಕಿತ್ಸೆಗಾಗಿ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪಾದಚಾರಿ ಸೇತುವೆಯನ್ನು ಸುಮಾರು ಐದು ದಶಕಗಳ ಹಿಂದೆ ನಿರ್ಮಿಸಲಾಗಿದ್ದು, ಅದು ದುರ್ಬಲ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದರು.
Advertisement