

ಮೈಸೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಈ ನಡುವೆ ಚಾಮರಾಜನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಳೆಗಾಗಿ ಪಾರಂಪರಿಕ ನಂಬಿಕೆಗಳತ್ತ ಮುಖ ಮಾಡುತ್ತಿದ್ದಾರೆ.
ವಿಶೇಷವಾಗಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕೆಂಪಯ್ಯನಟ್ಟಿ ಗ್ರಾಮದಲ್ಲಿನ ಗ್ರಾಮಸ್ಥರು ‘ಕಪ್ಪೆ ಪೂಜೆ’ ನಡೆಸಿ ಮಳೆಯಿಗಾಗಿ ಪ್ರಾರ್ಥಿಸಿದ್ದಾರೆ.
ಮಕ್ಕಳೇ ಮುಖ್ಯ ಪಾತ್ರವಹಿಸುವ ಈ ಆಚರಣೆಯಲ್ಲಿ, ಕಪ್ಪೆಗಳನ್ನು ಬೇವಿನ ಎಲೆಗಳಿಂದ ಅಲಂಕರಿಸಿದ ಬುಟ್ಟಿಯಲ್ಲಿ ಇಟ್ಟು ತಲೆಯ ಮೇಲೆ ಹೊತ್ತು ಗ್ರಾಮ ಸುತ್ತುವಂತೆ ಮಾಡಲಾಗಿದೆ. ಇದು ಈ ಪ್ರದೇಶದ ಜಾನಪದ ಮತ್ತು ನಂಬಿಕೆಯಲ್ಲಿ ಬೇರೂರಿರುವ ಆಚರಣೆಯಾಗಿದೆ.
ಈ ಆಚರಣೆಯ ಭಾಗವಾಗಿ, ಚಿಕ್ಕ ಮಕ್ಕಳು ತಮ್ಮ ತಲೆಯ ಮೇಲೆ ಬೇವಿನ ಎಲೆಗಳಿಂದ ಅಲಂಕರಿಸಲ್ಪಟ್ಟ ಬುಟ್ಟಿಯೊಳಗೆ ಕಪ್ಪೆಗಳನ್ನು ಹೊತ್ತುಕೊಂಡು, "ಬಾ ಬಾ ಮಳೆರಾಯ" ಎಂದು ಸಾಂಪ್ರದಾಯಿಕ ಮಳೆ-ಪ್ರಾರ್ಥನಾ ಹಾಡುಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಗ್ರಾಮ ಸುತ್ತಿದ್ದಾರೆ.
ಈ ವರ್ಷ ಬೇಸಿಗೆ ಹೆಚ್ಚು ತೀವ್ರವಾಗಿದ್ದು, ಕೆರೆ-ಕೊಳಗಳು ಒಣಗಿಬಿಟ್ಟಿವೆ. ಪಶುಗಳಿಗೆ ನೀರು ಮತ್ತು ಮೇವು ಎರಡರ ಕೊರತೆಯೂ ಉಂಟಾಗಿದೆ. ಮಳೆ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿರುವ ಜನರು ಪರಂಪರೆಯಿಂದ ಬಂದಿರುವ ನಂಬಿಕೆಗಳನ್ನು ಆಶ್ರಯಿಸಿ ಇಂತಹ ಆಚರಣೆಗಳನ್ನು ಕೈಗೊಳ್ಳುತ್ತಿದ್ದಾರೆ.
ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ನಿಂತು ಮಕ್ಕಳ ತಲೆಯ ಮೇಲೆ ನೀರು ಸುರಿದು ಆಶೀರ್ವದಿಸುವ ಮೂಲಕ ಈ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಚಾಮರಾಜನಗರ ಹಾಗೂ ಮಂಡ್ಯ ಭಾಗಗಳಲ್ಲಿ ಈ ರೀತಿಯ ಕಪ್ಪೆ ಪೂಜೆ ಅಥವಾ ಕಪ್ಪೆಗಳ ಮದುವೆ ಆಚರಣೆಗಳನ್ನು ನಡೆಸಲಾಗುತ್ತದೆ. ಮಳೆರಾಯನನ್ನು ಸಂತೋಷಪಡಿಸಲು ಇಂತಹ ವಿಧಿಗಳು ಸಹಕಾರಿಯಾಗುತ್ತವೆ ಎಂಬ ನಂಬಿಕೆ ಗ್ರಾಮೀಣ ಪ್ರದೇಶಗಳಲ್ಲಿ ಇದೆ.
ಪೂಜೆ ಮುಗಿದ ಬಳಿಕ ಕಪ್ಪೆಗಳನ್ನು ಮತ್ತೆ ಸುರಕ್ಷಿತವಾಗಿ ಪ್ರಕೃತಿಯಲ್ಲೇ ಬಿಡಲಾಗಿದ್ದು, ಬೇಗನೆ ಮಳೆ ಸುರಿಯಲಿ ಎಂಬ ಆಶಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
Advertisement