

ಬೆಂಗಳೂರು: ಬೇಸಿಗೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಯಾಣಕ್ಕೂ ಮುನ್ನ ನಿಮ್ಮ ಗಮ್ಯಸ್ಥಾನದ ಹವಾಮಾನ ಮಾಹಿತಿ ಪರಿಶೀಲಿಸುವುದು ಅತ್ಯಂತ ಅಗತ್ಯ ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.
ಈ ವರ್ಷ ದೇಶದ ವಿವಿಧ ಭಾಗಗಳಲ್ಲಿ ಹವಾಮಾನದಲ್ಲಿ ಭಾರೀ ವ್ಯತ್ಯಾಸಗಳು ಕಂಡು ಬಂದಿದೆ. ಒಂದೇ ಸಮಯದಲ್ಲಿ ವಿಭಿನ್ನ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಬೇರೆ-ಬೇರೆ ವಾತಾವರಣ ಅನುಭವವಾಗುತ್ತಿದೆ.
ಈ ಬದಲಾವಣೆಗಳು ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆ ಕ್ರಮಗಳು ಅತ್ಯಂತ ಮುಖ್ಯ ಎಂದು ಐಎಂಡಿ ತಿಳಿಸಿದೆ.
ಐಎಂಡಿ ಮಹಾನಿರ್ದೇಶಕ ಮೃತ್ತ್ಯುಂಜಯ ಮೊಹಾಪಾತ್ರ ಅವರು ಮಾತನಾಡಿ, ಭಾರತದಲ್ಲಿ ಈ ಬಾರಿ ಹವಾಮಾನ ಮಾದರಿಗಳು ನಿರಂತರವಾಗಿ ಬದಲಾಗುತ್ತಿವೆ. ಉದಾಹರಣೆಗೆ, ಈಶಾನ್ಯ ರಾಜ್ಯಗಳಲ್ಲಿ ತಂಪಾದ ಹವಾಮಾನ ಮತ್ತು ಮಳೆಯ ವಾತಾವರಣವಿದ್ದರೆ, ಮಧ್ಯ ಹಾಗೂ ದಕ್ಷಿಣ ಭಾರತದಲ್ಲಿ ತೀವ್ರ ಬಿಸಿಲು ಮತ್ತು ಒಣಗಾಳಿ ಜನರನ್ನು ಕಂಗೆಡಿಸುತ್ತಿದೆ. ಇನ್ನೊಂದೆಡೆ, ಉತ್ತರಪಶ್ಚಿಮ ಭಾಗಗಳಲ್ಲಿ ಕೆಲವೊಮ್ಮೆ ಮಳೆಯ ಜೊತೆಗೆ ಚಳಿ ವಾತಾವರಣವೂ ಕಾಣಿಸಿಕೊಂಡಿದೆ. ಈ ರೀತಿಯ ಬದಲಾವಣೆ, ಒಂದೇ ಪ್ರಯಾಣದಲ್ಲಿ ವಿಭಿನ್ನ ಹವಾಮಾನ ಅನುಭವಿಸುವ ಪರಿಸ್ಥಿತಿಯನ್ನು ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲವು ರಾಜ್ಯಗಳಿಗೆ ಹೀಟ್ವೇವ್ ಎಚ್ಚರಿಕೆ ನೀಡಲಾಗಿದ್ದರೂ, ಮುಂದಿನ ಕೆಲವು ದಿನಗಳಲ್ಲಿ ಮಳೆಯ ಸಾಧ್ಯತೆ ಇರುವುದರಿಂದ ಹವಾಮಾನದಲ್ಲಿ ಬದಲಾವಣೆ ಸಂಭವಿಸುವ ನಿರೀಕ್ಷೆಯಿದೆ. ಆದರೂ, ತಾಪಮಾನಗಳು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಇರುವುದರಿಂದ, ಹೀಟ್ ಸ್ಟ್ರೋಕ್ (heat stroke), ದೇಹದ ನೀರಿನ ಕೊರತೆ (dehydration), ಹಾಗೂ ತೀವ್ರ ದೌರ್ಬಲ್ಯ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ ವೃದ್ಧರು, ಮಕ್ಕಳು ಮತ್ತು ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ.
ಐಎಂಡಿ ವೆಬ್ಸೈಟ್ನಲ್ಲಿ ಮುಂದಿನ ಏಳು ದಿನಗಳ ಹವಾಮಾನ ಮಾಹಿತಿ ಹಾಗೂ ಎಚ್ಚರಿಕೆಗಳನ್ನು ಐಎಂಡಿ ವೆಬ್ಸೈಟ್ನಲ್ಲಿ ನಿರಂತರವಾಗಿ ನೀಡಲಾಗುತ್ತಿದೆ. ತಾಪಮಾನ, ಮಳೆಯ ಸಾಧ್ಯತೆ, ಗಾಳಿಯ ವೇಗ ಸೇರಿದಂತೆ ಹಲವು ವಿವರಗಳು ಲಭ್ಯವಿದೆ. ಪ್ರಯಾಣಿಕರು ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕು. ಅಗತ್ಯವಿದ್ದರೆ, ಸ್ಥಳೀಯ ಹವಾಮಾನ ಕಚೇರಿಗಳನ್ನು ಸಂಪರ್ಕಿಸುವುದೂ ಸೂಕ್ತವೆಂದು ಸೂಚಿಸಲಾಗಿದೆ.
ಈ ವರ್ಷ ಪಶ್ಚಿಮ ಅಲೆಗಳ ಪರಿಣಾಮದಿಂದ ಉತ್ತರಪಶ್ಚಿಮ ಮತ್ತು ಈಶಾನ್ಯ ಭಾರತದಲ್ಲಿ ಉತ್ತಮ ಮಳೆಯಾಗಿದೆ. ಆದರೆ, ದಕ್ಷಿಣ ಮತ್ತು ಮಧ್ಯಭಾರತದಲ್ಲಿ ತಾಪಮಾನಗಳು ಸಾಮಾನ್ಯಕ್ಕಿಂತ ಹೆಚ್ಚಾಗಿ ದಾಖಲಾಗುತ್ತಿವೆ. ಮೇ ತಿಂಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಹೆಚ್ಚು ಜಾಗರೂಕರಾಗಿರಬೇಕು ಎಂದು ಐಎಂಡಿ ತಿಳಿಸಿದೆ.
ಐಎಂಡಿ-ಬೆಂಗಳೂರು ನಿರ್ದೇಶಕ ಎನ್ ಪುವಿಯರಸನ್ ಮಾತನಾಡಿ, ಕರ್ನಾಟಕದ ಪರಿಸ್ಥಿತಿಯೂ ವಿಭಿನ್ನವಾಗಿಲ್ಲ. ಹೀಟ್ವೇವ್ ಅಧಿಕೃತವಾಗಿ ಘೋಷಿಸಲ್ಪಡದಿದ್ದರೂ, ಹೆಚ್ಚಿನ ತಾಪಮಾನ ಮತ್ತು ತೇವಾಂಶದಿಂದ ಜನರು ಅಸಹನೀಯ ಅನುಭವವನ್ನು ಎದುರಿಸುತ್ತಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಹಾಗೂ ಗಾಳಿಯ ಸಾಧ್ಯತೆಯೂ ಇದೆ. ಇದರೊಂದಿಗೆ, ಬಿಸಿಲಿನ ತೀವ್ರತೆಯೂ ಮುಂದುವರಿಯುತ್ತಿರುವುದರಿಂದ, ಆರೋಗ್ಯದ ದೃಷ್ಟಿಯಿಂದ ಜಾಗ್ರತೆ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಮುಂದಿನ ಎರಡು ದಿನಗಳ ಕಾಲ ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ, ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ವಿಜಯಪುರ, ಯಾದಗಿರಿ ಮತ್ತು ದಕ್ಷಿಣ ಕನ್ನಡದಲ್ಲಿ ಐಎಂಡಿ ಹಳದಿ ಅಲರ್ಟ್ ಘೋಷಿಸಿದೆ.
ಐಎಂಡಿ ಮಾಹಿತಿ ಪ್ರಕಾರ, ಸೋಮವಾರ ಕಲಬುರ್ಗಿಯಲ್ಲಿ ಗರಿಷ್ಠ 42.6 ಡಿಗ್ರಿ ಸೆಲ್ಸಿಯಸ್, ಸಾಮಾನ್ಯಕ್ಕಿಂತ 1.3 ಡಿಗ್ರಿ ಸೆಲ್ಸಿಯಸ್, ಬೀದರ್ನಲ್ಲಿ 42.4 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್), ರಾಯಚೂರಿನಲ್ಲಿ 41 ಡಿಗ್ರಿ ಸೆಲ್ಸಿಯಸ್, ತಿಡಗುಂದಿಯಲ್ಲಿ 40.3 ಡಿಗ್ರಿ ಸೆಲ್ಸಿಯಸ್ ಮತ್ತು ವಿಜಯಪುರ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ತಿಳಿದುಬಂದಿದೆ.
Advertisement