ಬೆಂಗಳೂರು 'ಗ್ಯಾಸ್ ಚೇಂಬರ್' ಆಗದಂತೆ ತಡೆಯಲು ಹಸಿರು ಹೊದಿಕೆ ಹೆಚ್ಚಳ ಅನಿವಾರ್ಯ: ಅರಣ್ಯ ಸಚಿವ ಈಶ್ವರ ಖಂಡ್ರೆ

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಅಸರ್ ಸೋಷಿಯಲ್ ಇಂಪ್ಯಾಕ್ಟ್ ಅಡ್ವೈಸರ್ ಸಂಸ್ಥೆಯ ಸಹಯೋಗದಲ್ಲಿ ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಬೆಂಗಳೂರಿನಲ್ಲಿ ತಾಪಮಾನ ವೈಪರೀತ್ಯ ಹಾಗೂ ಅದರ ಪರಿಣಾಮಗಳ ಕುರಿತು ಮಾಧ್ಯಮ ಕಾರ್ಯಾಗಾರದಲ್ಲಿ ಪಾಲ್ಗೊಂಡ ಸಚಿವ ಈಶ್ವರ ಖಂಡ್ರೆ
Eshwar Khandre
ಅರಣ್ಯ ಸಚಿವ ಈಶ್ವರ ಖಂಡ್ರೆ
Updated on

ಬೆಂಗಳೂರು: ವೈಜ್ಞಾನಿಕವಾಗಿ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಶೇ. 33 ರಷ್ಟು ಹಸಿರು ಹೊದಿಕೆ ಇದ್ದಾಗ ಮಾತ್ರ ಆರೋಗ್ಯಕರ ನಗರವನ್ನು ಕಟ್ಟಲು ಸಾಧ್ಯ. ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕ್ಷೀಣಿಸುತ್ತಿದ್ದು, 1.40 ಕೋಟಿ ಜನಸಂಖ್ಯೆ ಇರುವ ಬೆಂಗಳೂರು ನಗರದಲ್ಲಿ ಕನಿಷ್ಠ 10 ಕೋಟಿ ಮರಗಳನ್ನು ಪೋಷಿಸುವ ಅಗತ್ಯವಿದೆ ಎಂದು ಅರಣ್ಯ, ಪರಿಸರ ಜಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಬಿ ಖಂಡ್ರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಅಸರ್ ಸೋಷಿಯಲ್ ಇಂಪ್ಯಾಕ್ಟ್ ಅಡ್ವೈಸರ್ ಸಂಸ್ಥೆಯ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೇ. 33 ರಷ್ಟು ಹಸಿರು ಹೊದಿಕೆ ಇದ್ದಾಗ ಮಾತ್ರ ಆರೋಗ್ಯಕರ ನಗರವನ್ನು ಕಟ್ಟಲು ಸಾಧ್ಯ. ಒಬ್ಬ ಮನಷ್ಯನಿಗೆ ಉತ್ತಮ ಆಮ್ಲಜನಕ ದೊರಕಲು ಕನಿಷ್ಠ 7 ಮರಗಳು ಇರಬೇಕು ಎಂದು ವಿಜ್ಞಾನ ಪ್ರತಿಪಾದಿಸುತ್ತದೆ ಎಂದರು.

ಬೆಂಗಳೂರಿನ ಪರಿಸರದಲ್ಲಾಗುತ್ತಿರುವ ಬದಲಾವಣೆ ಹಾಗೂ ಅರಣ್ಯ ಇಲಾಖೆಯ ಮುಂದಿನ ಯೋಜನೆಗಳ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು ಒಂದು ಕಾಲದಲ್ಲಿ 'ನಿವೃತ್ತರ ಸ್ವರ್ಗ' ಹಾಗೂ 'ಹವಾನಿಯಂತ್ರಿತ ನಗರ' ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು ಇಂದು ಕಾಂಕ್ರೀಟ್ ಜಂಗಲ್ ಆಗಿ ಮಾರ್ಪಡುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಬೆಂಗಳೂರು ಇದೇ ರೀತಿಯ ಬೆಳವಣಿಗೆ ಹಾಗೂ ವಾಹನ ದಟ್ಟಣೆ ಹೆಚ್ಚಿಸಿಕೊಂಡಲ್ಲಿ ನವದೆಹಲಿಯಂತೆ 'ಗ್ಯಾಸ್ ಚೇಂಬರ್' ಆಗುವುದನ್ನು ತಪ್ಪಿಸಲು ಹಸಿರು ಹೊದಿಕೆಯನ್ನು ಹೆಚ್ಚಿಸುವ ತತ್ ಕ್ಷಣದ ಅಗತ್ಯವಿದೆ ಎಂದು ಹೇಳಿದರು.

ಗತವೈಭವದ ಮರುಸ್ಥಾಪನೆ:ಕೆಂಪೇಗೌಡರು ನಿರ್ಮಿಸಿದ ಹಸಿರು ಬೆಂಗಳೂರನ್ನು ಮರಳಿ ಪಡೆಯಲು ಅರಣ್ಯ ಇಲಾಖೆ ಬದ್ಧವಾಗಿದೆ. ನಗರದ ಸುತ್ತಮುತ್ತಲ ಹಸಿರು ಹೊದಿಕೆಯನ್ನು ಮರುಸ್ಥಾಪಿಸಲು ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮಾಲಿನ್ಯ ಮತ್ತು ಕೆರೆಗಳ ಅವನತಿ: ಬೆಂಗಳೂರಿನಲ್ಲಿದ್ದ ಸುಮಾರು 250 ಕೆರೆಗಳಲ್ಲಿ ಹಲವು ಅಭಿವೃದ್ಧಿಯಲ್ಲಿ ಮಾಯವಾಗಿದ್ದು, ಇನ್ನೂ ಕೆಲವು ಇಂದು ತ್ಯಾಜ್ಯ ನೀರು ಸೇರಿ ಕಲುಷಿತಗೊಂಡಿವೆ. ಇದರಿಂದ ಜಲ ಮತ್ತು ವಾಯು ಮಾಲಿನ್ಯ ಉಂಟಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಂಚಾರ ದಟ್ಟಣೆ ಮತ್ತು ವಾಹನಗಳ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯಿಂದ ತಾಪಮಾನ ಏರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

11 ಕೋಟಿ ಸಸಿಗಳ ನಾಟಿ:

ಅರಣ್ಯ ಇಲಾಖೆಯ ಸಾಧನೆಯನ್ನು ಹಂಚಿಕೊಂಡ ಸಚಿವರು, "ಕಳೆದ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ ಸುಮಾರು 11 ಕೋಟಿ ಸಸಿಗಳನ್ನು ನೆಡಲಾಗಿದೆ. ಇವುಗಳಲ್ಲಿ ಎಷ್ಟು ಸಸಿಗಳು ಬದುಕುಳಿದಿವೆ ಎಂಬುದರ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ, ಆ ವರದಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಅಪ್ಲೋಡ್ ಮಾಡಲು ಸೂಚನೆ ನೀಡಿದ್ದೇನೆ," ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ‘ಶ್ವಾಸ ತಾಣ’ಗಳ ರಕ್ಷಣೆಗೆ ಅರಣ್ಯ ಇಲಾಖೆ ಮೆಗಾ ಪ್ಲಾನ್ ರೂಪಿಸಿದ್ದು, ನಗರದ ಆಯಕಟ್ಟಿನ ಪ್ರದೇಶಗಳಾದ ಕಾಡುಗೋಡಿ ಮತ್ತು ತುರಹಳ್ಳಿ ಭಾಗದಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸುಮಾರು ₹10,000 ಕೋಟಿ ಮೌಲ್ಯದ ಅರಣ್ಯ ಭೂಮಿಯನ್ನು ಮರುವಶಪಡಿಸಿಕೊಳ್ಳಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕುಸಿಯುತ್ತಿರುವ ಹಸಿರು ಹೊದಿಕೆಯನ್ನು ಹೆಚ್ಚಿಸಲು ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳಲು ಕರ್ನಾಟಕ ಅರಣ್ಯ ಇಲಾಖೆ ಐತಿಹಾಸಿಕ ಹೆಜ್ಜೆ ಇರಿಸಿದೆ ಎಂದರು.

ಮರುವಶವಾದ ಭೂಮಿಯಲ್ಲಿ 'ನೆಡುತೋಪು'ಗಳ ನಿರ್ಮಾಣ: ಕೇವಲ ಒತ್ತುವರಿ ತೆರವು ಮಾಡುವುದಷ್ಟೇ ಅಲ್ಲದೆ, ಭೂಗಳ್ಳರು ಮತ್ತೆ ಅತಿಕ್ರಮಣ ಮಾಡದಂತೆ ತಡೆಯಲು ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ. ಮರುವಶಪಡಿಸಿಕೊಂಡ ಜಾಗಕ್ಕೆ ತಕ್ಷಣವೇ ಕಾಂಪೌಂಡ್ ನಿರ್ಮಿಸಿ, ಸಾವಿರಾರು ಸಸಿಗಳನ್ನು ನೆಡುವ ಮೂಲಕ ಆ ಪ್ರದೇಶಗಳನ್ನು 'ನೆಡುತೋಪು' (Urban Forests)ಗಳನ್ನಾಗಿ ಪರಿವರ್ತಿಸಲಾಗುವುದು. ಇದು ನಗರದ ಜನತೆಗೆ ಶುದ್ಧ ಗಾಳಿ ನೀಡುವ ನೈಸರ್ಗಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಬೆಂಗಳೂರಿಗೆ ಸಿಗಲಿದೆ ಮತ್ತೊಂದು 'ಲಾಲ್ ಬಾಗ್: ನಗರದ ಹಸಿರು ವಿಸ್ತೀರ್ಣ ಹೆಚ್ಚಿಸುವ ಸಲುವಾಗಿ ಬೆಂಗಳೂರು ಉತ್ತರ ತಾಲೂಕಿನ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ 'ವಿಶ್ವಗುರು ಬಸವಣ್ಣನವರ ಬೃಹತ್ ಜೈವಿಕ ಉದ್ಯಾನವನ' ತಲೆ ಎತ್ತಲಿದೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ EMPRI ಸಂಸ್ಥೆ ರೂಪಿಸಿರುವ ‘ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ’ಗೆ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಎದುರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತರಬೇತಿ ಮತ್ತು ಅನುಷ್ಠಾನ ಪ್ರಕ್ರಿಯೆಗಳು ಶೀಘ್ರವೇ ಆರಂಭವಾಗಲಿವೆ. ವೃಕ್ಷೋ ರಕ್ಷಿತಃ ರಕ್ಷಿತಃ" ಎಂಬ ಧ್ಯೇಯದೊಂದಿಗೆ ಬೆಂಗಳೂರಿನ ಕೆರೆಗಳ ಪುನರ್ನಿರ್ಮಾಣ ಮತ್ತು ನಗರದ ಹಸಿರು ವಲಯವನ್ನು ವಿಸ್ತರಿಸುವುದೇ ನಮ್ಮ ಅಂತಿಮ ಗುರಿಯಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ ಮಾತನಾಡಿ, ಬದಲಾಗುತ್ತಿರುವ ಬೆಂಗಳೂರು ನಗರದಲ್ಲಾಗುತ್ತಿರುವ ಪರಿಸರ ಬದಲಾವಣೆ ಹಾಗೂ ಹೆಚ್ಚುತ್ತಿರುವ ಶಾಖದ ಕುರಿತು ವರದಿ ಮಾಡಿ ಸರ್ಕಾರದ ಗಮನ ಸೆಳೆಯುವ ಕರ್ತವ್ಯ ನಿರ್ವಹಿಸುವ ಮಾಧ್ಯಮಗಳು ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಜವಬ್ಧಾರಿಯಿಂದ ಇಂತಹ ವಿನೂತನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Eshwar Khandre
ಗಿಡಗಳ ನೆಡಿ, ಮರಗಳ ದತ್ತು ಪಡೆಯಿರಿ, ಹಸಿರು ಹೊದಿಕೆ ರಕ್ಷಿಸಿ: DCM ಡಿ.ಕೆ ಶಿವಕುಮಾರ್

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಎಂ ಎಸ್ ದಿವಾಕರ್ , ಮಾತನಾಡಿ ಪರಿಸರ ವೈಪರೀತ್ಯಗಳು ಸಾಮಾನ್ಯವಾಗಿ ಸಂಭವಿಸುತ್ತಲೇ ಇರುತ್ತವೆ. ಪ್ರಸ್ತುತ ತಂತ್ರಜ್ಞಾನ ಹಾಗೂ ಮಾಧ್ಯಮ ಸಂವಹನದ ಪರಿಣಾಮ ಹೆಚ್ಚು ಸುದ್ದಿಯಾಗುತ್ತಿದೆ. ಇತಿಹಾಸ ತೆಗೆದು ನೋಡಿದಾಗ ಹಲವಾರು ದಾಖಲೆಗಳನ್ನು ಗಮನಿಸಬಹುದಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com