‘Aero India’ ಭೂಮಿ ಹಿಂತಿರುಗಿಸಿ ಇಲ್ಲವೇ, ಪರ್ಯಾಯ ಜಾಗ ನೀಡಿ: IAFಗೆ ಸಚಿವ ಖಂಡ್ರೆ ಆಗ್ರಹ

ಜರಕಬಂಡೆ ಕಾವಲ್‌ನಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) 444 ಎಕರೆಗೂ ಹೆಚ್ಚು ಭೂಮಿಯನ್ನು ನೀಡಲಾಗಿತ್ತು. ಆದರೆ 2017ರಲ್ಲಿ ಸ್ಥಳೀಯ ಜಿಲ್ಲಾಧಿಕಾರಿ ಆ ಮಂಜೂರಾತಿಯನ್ನು ರದ್ದುಪಡಿಸಿದ್ದರು. ಅರಣ್ಯ ಇಲಾಖೆಯು ಅದನ್ನು ಮರಳಿ ಪಡೆಯಲು ಆಗಿನಿಂದ ಪ್ರಯತ್ನಿಸುತ್ತಿದೆ.
Eshwar khandre
ಅರಣ್ಯ ಸಚಿವ ಈಶ್ವರ್ ಖಂಡ್ರೆ
Updated on

ಬೆಂಗಳೂರು: ಯಲಹಂಕ ವಾಯುಪಡೆಯ ನೆಲೆಯಲ್ಲಿ ನಡೆಯುವ ‘ಏರೋ ಇಂಡಿಯಾ’ ಕಾರ್ಯಕ್ರಮಕ್ಕೆ ಬಳಸುತ್ತಿರುವ ಭೂಮಿ ಗಂಟಿಗಾನಹಳ್ಳಿ ಸಂರಕ್ಷಿತ ಅರಣ್ಯದ ಭಾಗವಾಗಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಅವರು ತಿಳಿಸಿದ್ದು, ಭೂಮಿಯನ್ನು ಹಿಂತಿರುಗಿಸುವಂತೆ ಅಥವಾ ಪರ್ಯಾಯ ಜಾಗ ಒದಗಿಸುವಂತೆ ಭಾರತೀಯ ವಾಯುಪಡೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಅಸರ್ ಸಾಮಾಜಿಕ ಪರಿಣಾಮ ಸಲಹೆಗಾರರು ನಗರದಲ್ಲಿ ಆಯೋಜಿಸಿದ್ದ 'ಬೆಂಗಳೂರಿನ ಮೇಲೆ ತೀವ್ರ ಶಾಖ ಮತ್ತು ಅದರ ಪರಿಣಾಮ' ಎಂಬ ಕಾರ್ಯಾಗಾರದಲ್ಲಿ ಸಚಿವರು ಮಾತನಾಡಿದರು.

ಜರಕಬಂಡೆ ಕಾವಲ್‌ನಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) 444 ಎಕರೆಗೂ ಹೆಚ್ಚು ಭೂಮಿಯನ್ನು ನೀಡಲಾಗಿತ್ತು. ಆದರೆ 2017ರಲ್ಲಿ ಸ್ಥಳೀಯ ಜಿಲ್ಲಾಧಿಕಾರಿ ಆ ಮಂಜೂರಾತಿಯನ್ನು ರದ್ದುಪಡಿಸಿದ್ದರು. ಅರಣ್ಯ ಇಲಾಖೆಯು ಅದನ್ನು ಮರಳಿ ಪಡೆಯಲು ಆಗಿನಿಂದ ಪ್ರಯತ್ನಿಸುತ್ತಿದೆ. ಅರಣ್ಯವಾಗಿ ಘೋಷಿಸಲ್ಪಟ್ಟ ಭೂಮಿ ಎಂದಿಗೂ ಅರಣ್ಯವಾಗಿಯೇ ಉಳಿಯಬೇಕು ಎಂಬ ನಿಯಮವಿದೆ ಎಂದು ತಿಳಿಸಿದ್ದಾರೆ.

“ಈ ಭೂಮಿಯನ್ನು ಹಿಂತಿರುಗಿಸಬೇಕು ಅಥವಾ ಸಮಾನ ಪ್ರಮಾಣದ ಪರ್ಯಾಯ ಭೂಮಿಯನ್ನು ನೀಡಬೇಕು ಎಂದು ಐಎಎಫ್‌ಗೆ ತಿಳಿಸಲಾಗಿದೆ. HMT ಅಡಿಯಲ್ಲಿರುವ ಪೀಣ್ಯ ತೋಟದ ವಿಷಯದಲ್ಲೂ ಇದೇ ರೀತಿ ಆಗಿದೆ. ನಾವು ಈಗ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಇಲ್ಲಿಯವರೆಗೆ, 10,000 ಕೋಟಿ ರೂ. ಮೌಲ್ಯದ ಅತಿಕ್ರಮಣಗೊಂಡ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.

Eshwar khandre
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ: ಗಂಟೆಗಟ್ಟಲೇ ಟ್ರಾಫಿಕ್ ನಲ್ಲಿ ಸಿಲುಕಿ ಸವಾರರು ಹೈರಾಣ!

ರಾಜ್ಯಾದ್ಯಂತ ಅಂತಹ ಭೂಮಿಯನ್ನು ಮರಳಿ ಪಡೆಯುವ ಪ್ರಯತ್ನಗಳು ನಡೆಯುತ್ತಿದ್ದು, ಹಸಿರು ಹೊದಿಕೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅರಣ್ಯ ಭೂಮಿಯನ್ನು ಗುರುತಿಸುವ ಸಮೀಕ್ಷೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಕೆರೆಗಳು ಮತ್ತು ನೀರಿನ ಮೂಲಗಳ ಕುಸಿತದ ಬಗ್ಗೆ ಮಾತನಾಡಿ, ಶುದ್ಧೀಕರಣಗೊಂಡ ನೀರಿನ ಪರಿಣಾಮವನ್ನು ಕೃಷಿ, ಪಶುಸಂಗೋಪನೆ ಮತ್ತು ಜನರ ಮೇಲೆ ಅಧ್ಯಯನ ಮಾಡಲು ಐಐಎಸ್‌ಸಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು. ಈಗಿನ ವರದಿಗಳ ಪ್ರಕಾರ ಹೆಚ್ಚಿನ ಮಾಲಿನ್ಯ ಕಂಡುಬಂದಿಲ್ಲವಾದರೂ, ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎಂದು ಅವರು ತಿಳಿಸಿದರು.

ನಗರದಲ್ಲಿ ಅನೇಕ ಕೆರೆಗಳು ಅತಿಕ್ರಮಣಕ್ಕೊಳಗಾಗಿ, ಅಲ್ಲಿ ಎತ್ತರದ ಕಟ್ಟಡಗಳು ನಿರ್ಮಾಣವಾಗುತ್ತಿರುವುದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಸರಿಯಾದ ಯೋಜನೆ ಅಗತ್ಯವಿದೆ ಎಂದು ಹೇಳಿದರು.

ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆ ಬದಿಗಳು ಮತ್ತು ಹೆದ್ದಾರಿಗಳ ಬಳಿ ಮರಗಳನ್ನು ನೆಡುವ ಕಾರ್ಯಕ್ಕೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com