

ಬೆಂಗಳೂರು: ಅಕ್ರಮ ವಲಸೆ ಮತ್ತು ಮಾದಕ ದ್ರವ್ಯ ಪ್ರಕರಣಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, 2026ರಲ್ಲಿ ಇದೂವರೆಗೆ 427 ಮಂದಿ ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಜಾರಿಯಲ್ಲಿರುವ ಕಠಿಣ ಕ್ರಮಗಳಿಂದ ಗಡಿಪಾರು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.
ಈ ವರ್ಷ ಗಡಿಪಾರು ಮಾಡಲಾದವರಲ್ಲಿ 286 ಮಂದಿ ಬಾಂಗ್ಲಾದೇಶದ ನಾಗರಿಕರಾಗಿದ್ದು, ಇವರಲ್ಲಿ ಹಲವರನ್ನು ಭೂ ಮಾರ್ಗದ ಬದಲು ವಿಮಾನ ಮಾರ್ಗದ ಮೂಲಕ ವಾಪಸ್ ಕಳುಹಿಸಲಾಗಿದೆ ಎಂದು ತಿಳಿಸಿದರು.
2025ರಲ್ಲಿ ಒಟ್ಟು 401 ವಿದೇಶಿ ಪ್ರಜೆಗಳನ್ನು ಗುರುತಿಸಿ ಗಡಿಪಾರು ಮಾಡಲಾಗಿದ್ದು, 2024ರಲ್ಲಿ 339 ಮಂದಿಯನ್ನು ವಾಪಸ್ ಕಳುಹಿಸಲಾಗಿದೆ.
ಒಟ್ಟು ಪ್ರಕರಣಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಪ್ರಕರಣಗಳು ಮಾದಕ ದ್ರವ್ಯ ಕಾಯ್ದೆ (NDPS Act) ಸಂಬಂಧಿತವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿದ ವಿದೇಶಿಗರನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ದೇಶದಲ್ಲೇ ಇರಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಈಗ ಕೆಲವು ಪ್ರಕರಣಗಳಲ್ಲಿ ದೀರ್ಘಕಾಲದ ಕ್ರಿಮಿನಲ್ ಮೊಕದ್ದಮೆಗಳನ್ನು ಮುಂದುವರಿಸದೆಯೇ, ಆಯಾ ರಾಯಭಾರ ಕಚೇರಿಗಳ ಸಮನ್ವಯದೊಂದಿಗೆ, ಬಂಧನದ ನಂತರ ಅಂತಹ ವ್ಯಕ್ತಿಗಳನ್ನು ಗಡೀಪಾರು ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
Advertisement