

ವಿಜಯಪುರ: ಸಚಿವ ಸ್ಥಾನ ಸಿಗದಿರುವುದಕ್ಕಿಂತ ವರಿಷ್ಠರು ಕೊಟ್ಟ ಮಾತು ಉಳಿಸಿಕೊಳ್ಳದಿರುವುದರ ಬಗ್ಗೆ ನೋವಾಗಿತ್ತು. ಹೀಗಾಗಿ ರಾಜೀನಾಮೆ ಕೊಟ್ಟಿದ್ದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆದರೆ, ನನ್ನನ್ನು ಶಾಸಕನನ್ನಾಗಿ ಮಾಡಿದ್ದು ಕ್ಷೇತ್ರದ ಜನತೆ. ಅವರೇ ನನಗೆ ಹೈಕಮಾಂಡ್. ಅವರ ಭಾವನೆಗಳನ್ನು ಗೌರವಿಸಿ ಶಾಸಕನಾಗಿ ಕೆಲಸ ಮಾಡುತ್ತೇನೆ. ಇನ್ನು ಮುಂದೆ ಯಾವುದೇ ಹುದ್ದೆಗಾಗಿ ಯಾರ ಮನೆಗೂ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.
60 ಜನ ಆಕಾಂಕ್ಷಿಗಳಿದ್ದಾಗ ಎಲ್ಲರಿಗೂ ಅವಕಾಶ ಕೊಡೋದು ಅಸಾಧ್ಯ ಎಂಬುದು ನನಗೂ ಗೊತ್ತು. ಆದರೆ ಕೊಟ್ಟು ಮಾತು ಉಳಿಸಿಕೊಳ್ಳಿ ಎಂದು ವರಿಷ್ಠರ ಗಮನಕ್ಕೆ ತಂದಿದ್ದೆ. ಸಚಿವರಾಗುವವರ ಪಟ್ಟಿ ಬಿಡುಗಡೆಯಾಗುವ ತನಕವೂ ನನಗೆ ಅವಕಾಶ ಕೊಡುವುದಾಗಿ ತಿಳಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ನನ್ನ ಹೆಸರು ಬಿಟ್ಟು ಹೋಗಿದ್ದರಿಂದ ರಾಜೀನಾಮೆ ಕೊಟ್ಟಿದ್ದೆ ಎಂದರು.
ರಾಜ್ಯದ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ಸೇರಿದಂತೆ ಅನೇಕ ನಾಯಕರು ನನ್ನ ಮನೆಗೆ ಬಂದಿದ್ದರು. ನನ್ನನ್ನು ಕೈಬಿಟ್ಟಿದ್ದರ ಬಗ್ಗೆ ವಿವರಣೆ ನೀಡಿದ್ದಾರೆ. ಆದರೆ, ಕಾರಣವನ್ನು ನಾನೀಗ ಬಹಿರಂಗಪಡಿಸಲ್ಲ ಎಂದಿದ್ದಾರೆ.
ಮಠಾಧೀಶರು, ಸಾಹಿತಿಗಳು, ಅನೇಕ ಶಾಸಕರು ವಿಕೋಪಕ್ಕೆ ಹೋಗೋದು ಬೇಡ ಎಂದು ಸಲಹೆ ನೀಡಿದರು. ಅಲ್ಲದೆ, ಕ್ಷೇತ್ರದ ಜನರೇ ನನ್ನ ಮೂಲ ಮಾಲೀಕರು, ಅವರ ಭಾವನೆಗಳ ವಿರುದ್ಧ ನಡೆದುಕೊಳ್ಳಬಾರದೆಂದು ರಾಜೀನಾಮೆ ಹಿಂಪಡೆದುಕೊಂಡೆ,'' ಎಂದು ವಿವರಿಸಿದರು.
ನಮ್ಮ ವೈಯಕ್ತಿಕ ವಿಚಾರಗಳಿಗಿಂತ ಪಕ್ಷ ದೊಡ್ಡದು. ಎಲ್ಲ ಸ್ಥಾನಮಾನಕ್ಕಿಂತ ನನ್ನ ಸುದೀರ್ಘ ರಾಜಕಾರಣಕ್ಕೆ ಅವಕಾಶ ಕೊಟ್ಟ ಕ್ಷೇತ್ರದ ಜನ ದೊಡ್ಡವರು. ಕಷ್ಟದ ದಿನಗಳಲ್ಲಿ ಕಾಂಗ್ರೆಸ್ ಕಟ್ಟಿದ ಕುಟುಂಬ ನಮ್ಮದು. ಮುಂದೆಯೂ ಕಾಂಗ್ರೆಸ್ನಲ್ಲೇ ಇರುತ್ತೇನೆ. ಮನಸ್ಸಿಗೆ ಬಂದಂತೆ ಪಕ್ಷನಿಷ್ಠೆ ಬದಲಾಯಿಸುವ ಜಾಯಮಾನ ನನ್ನದಲ್ಲ,'' ಎಂದು ಹೇಳಿದ್ದಾರೆ.