

ಬೆಂಗಳೂರು: ನಗರದಲ್ಲಿ ‘ತ್ಯಾಜ್ಯ ಮುಕ್ತ ಅಭಿಯಾನ’ಕ್ಕೆ ವೇಗ ದೊರೆಯುತ್ತಿರುವ ಬೆನ್ನಲ್ಲೇ, ಸ್ವಚ್ಛತೆ ಹಾಗೂ ತ್ಯಾಜ್ಯ ತೆರವು ಕಾರ್ಯಗಳನ್ನು ಕೈಗೊಳ್ಳದ ಸರ್ಕಾರಿ ಇಲಾಖೆಗಳ ವಿರುದ್ಧ ನೋಟಿಸ್ ಜಾರಿ ಮಾಡುವಂತೆ ಐದು ನಗರ ಪಾಲಿಕೆಗಳ ಆಯುಕ್ತರಿಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಅಭಿಯಾನದ ಕುರಿತು ನಡೆದ ವರ್ಚುವಲ್ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ನಗರದ ಎಲ್ಲ ಸರ್ಕಾರಿ ಕಚೇರಿಗಳು ತಮ್ಮ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು ಎಂದು ಹೇಳಿದರು.
ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಆಗಸ್ಟ್ 1ರಿಂದ ಆಗಸ್ಟ್ 6ರವರೆಗೆ ನಗರದ 453 ಸಾರ್ವಜನಿಕ ಸ್ಥಳಗಳಿಂದ 10,056 ಟನ್ ನಿರ್ಮಾಣ ಮತ್ತು ಕೆಡವುವಿಕೆ (C&D) ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದರು.
ಸರ್ಕಾರಿ ಇಲಾಖೆಗಳು ಕೈಗೊಂಡಿರುವ ಸ್ವಚ್ಛತಾ ಅಭಿಯಾನಗಳ ವಿವರಗಳನ್ನು ಸಂಗ್ರಹಿಸುವಂತೆ ಹಾಗೂ ಅಭಿಯಾನದಡಿ ಸಾಧಿಸಿರುವ ಪ್ರಗತಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರೆಯುವಂತೆ ನೋಡಿಕೊಳ್ಳಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಎಷ್ಟೇ ಸಣ್ಣ ಸಮಸ್ಯೆಯಾಗಿದ್ದರೂ, ಇಲಾಖೆಗಳ ನಡುವೆ ಉತ್ತಮ ಸಮನ್ವಯದ ಮೂಲಕ ಅದನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಹೇಳಿದರು.
ಮಳೆಗಾಲದಲ್ಲೂ ನಿಗದಿತ ಕ್ವಾರಿ ಸ್ಥಳಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ನಿರ್ಮಾಣ ಮತ್ತು ಕೆಡವುವಿಕೆ ತ್ಯಾಜ್ಯವನ್ನು ಸರ್ಕಾರ ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ವಿಲೇವಾರಿ ಮಾಡಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಸ್ವಚ್ಛಗೊಳಿಸಿರುವ ಸ್ಥಳಗಳಲ್ಲಿ ಮತ್ತೆ ಅಕ್ರಮವಾಗಿ ತ್ಯಾಜ್ಯ ಸುರಿಯದಂತೆ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಿಗದಿತ C&D ತ್ಯಾಜ್ಯ ವಿಲೇವಾರಿ ಸ್ಥಳಗಳಲ್ಲಿ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಮಾರ್ಷಲ್ಗಳನ್ನು ನಿಯೋಜಿಸಲಾಗಿದೆ. ಅವರಿಗೆ ಆಶ್ರಯ, ಕುಡಿಯುವ ನೀರು ಮತ್ತು ಆಹಾರದ ವ್ಯವಸ್ಥೆ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಟಿಪ್ಪರ್ ಲಾರಿಗಳು ಸ್ಥಳಕ್ಕೆ ಆಗಮಿಸುವ ಮತ್ತು ಅಲ್ಲಿಂದ ನಿರ್ಗಮಿಸುವ ವಿವರಗಳನ್ನು ಸರಿಯಾಗಿ ದಾಖಲಿಸುವಂತೆಯೂ ಅವರು ಸೂಚಿಸಿದರು.
ಪ್ರಸ್ತುತ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ C&D ತ್ಯಾಜ್ಯ ತೆರವು ಕಾರ್ಯಾಚರಣೆಗೆ 54 ಟಿಪ್ಪರ್ ಲಾರಿಗಳು ಮತ್ತು 18 ಅರ್ಥ್ ಮೂವರ್ಗಳನ್ನು ನಿಯೋಜಿಸಲಾಗಿದೆ.
ಅಭಿಯಾನವನ್ನು ತ್ವರಿತಗೊಳಿಸಲು ಟಿಪ್ಪರ್ ಲಾರಿಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಹಾಗೂ ಅಗತ್ಯವಿರುವ ಕಡೆ ಹೆಚ್ಚುವರಿ ಅರ್ಥ್ ಮೂವರ್ಗಳು ಮತ್ತು ಟ್ರ್ಯಾಕ್ಟರ್ಗಳನ್ನು ಗರಿಷ್ಠವಾಗಿ ಬಳಸಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದಾದ್ಯಂತ ನಿರ್ಮಾಣ ಮತ್ತು ಕೆಡವುವಿಕೆ (C&D) ತ್ಯಾಜ್ಯವನ್ನು ಅಕ್ರಮವಾಗಿ ಸುರಿಯಲಾಗುತ್ತಿದ್ದ 3,022 ಸ್ಥಳಗಳನ್ನು ಅಧಿಕಾರಿಗಳು ಮತ್ತು ಮಾರ್ಷಲ್ಗಳು ಇದುವರೆಗೆ ಗುರುತಿಸಿದ್ದಾರೆ. ಈ ಸ್ಥಳಗಳಲ್ಲಿ ಅಂದಾಜು 59,823 ಟನ್ ತ್ಯಾಜ್ಯವಿದೆ ಎಂದು ಅಂದಾಜಿಸಲಾಗಿದೆ.
ಗುರುತಿಸಲಾಗಿರುವ ಎಲ್ಲ ಸ್ಥಳಗಳನ್ನು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು ಹಾಗೂ ಈಗಾಗಲೇ ದಾಖಲಿಸಿರುವ ಸ್ಥಳಗಳೊಂದಿಗೆ ಯಾವುದೇ ಪುನರಾವರ್ತನೆ ಆಗದಂತೆ ಖಚಿತಪಡಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ತ್ಯಾಜ್ಯ ತೆರವು ಕಾರ್ಯದಲ್ಲಿ ತೊಡಗಿರುವ ಟಿಪ್ಪರ್ ಲಾರಿಗಳ ಸಂಚಾರಕ್ಕೆ ಸಂಚಾರ ಪೊಲೀಸರು ಬೆಳಗ್ಗೆ 7ರಿಂದ 10ರವರೆಗೆ ಹಾಗೂ ಸಂಜೆ 5ರಿಂದ ರಾತ್ರಿ 9ರವರೆಗೆ ಅವಕಾಶ ನೀಡುತ್ತಿಲ್ಲ. ಇದರಿಂದ ಅಭಿಯಾನಕ್ಕೆ ಅಡಚಣೆಯಾಗುತ್ತಿದೆ.
ತ್ಯಾಜ್ಯ ಮುಕ್ತ ಅಭಿಯಾನದಲ್ಲಿ ತೊಡಗಿರುವ ವಾಹನಗಳು ಎಲ್ಲ ಸಮಯದಲ್ಲೂ ಕಾರ್ಯನಿರ್ವಹಿಸಲು ಅವಕಾಶ ನೀಡುವ ಕುರಿತು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ GBA ಮುಖ್ಯ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.