

ಖಾನಾಪುರ: ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ನಿಡಗಲ್ ಗ್ರಾಮದ ಹೊರವಲಯದ ಸಿದ್ಧನಗುಡ್ಡದ ಮೇಲಿರುವ ಸಿದ್ಧಗುಂಡ ದೇವಾಲಯದ ಶಿವಲಿಂಗ, ನಂದಿ, ತುಳಸಿಯನ್ನು ಕಿಡಿಗೇಡಿಗಳು ಶನಿವಾರ ಧ್ವಂಸಗೊಳಿಸಿದ್ದಾರೆ.
ನಿಡಗಲ್ ಗ್ರಾಮದಿಂದ 2 ಕಿಮೀ ದೂರದಲ್ಲಿ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟದ ಮೇಲೆ ಗ್ರಾಮದ ಗ್ರಾಮದೇವತೆ ಸಿದ್ಧಗುಂಡ ದೇವಸ್ಥಾನವಿದೆ. ದೇವಾಲಯದಲ್ಲಿ ಹಣ ಅಥವಾ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಟ ನಡೆಸಿ ಏನೂ ಸಿಗದೇ ಮರಳಿದ್ದಾರೆ.
ಆದರೆ ದೇವಾಲಯದ ಪವಿತ್ರ ವಿಗ್ರಹಗಳು ಮತ್ತು ಅವಶೇಷಗಳಿಗೆ ಧಕ್ಕೆ ಉಂಟುಮಾಡಿ ತೆರಳಿದ್ದಾರೆ. ಐತಿಹಾಸಿಕ ಶ್ರೀ ಸಿದ್ಧೇಶ್ವರ ದೇವಾಲಯದಲ್ಲಿ, ದುಷ್ಕರ್ಮಿಗಳು ದೇವಾಲಯದ ಆವರಣದಲ್ಲಿರುವ ಶಿವಲಿಂಗ, ನಂದಿ ವಿಗ್ರಹ, ಆಮೆ ಮತ್ತು ಬೃಂದಾವನವನ್ನು ಹಾನಿಗೊಳಿಸಿದ್ದಾರೆ.
ಸ್ಥಳಕ್ಕೆ ಖಾನಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಶ್ರಾವಣ ಮಾಸ ಆರಂಭವಾಗುವ ನಿಮಿತ್ತ ಭಾನುವಾರ ದೇವಸ್ಥಾನವನ್ನು ಸ್ವಚ್ಛಗೊಳಿಸಲು ಬಂದ ಭಕ್ತರಿಗೆ ಈ ಕೃತ್ಯ ಕಂಡುಬಂದಿದೆ. ಈ ಕೃತ್ಯಕ್ಕೆ ಕಾರಣವಾಗಿರುವವರನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಪೊಲೀಸರಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.