ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬಾರ್ ಕ್ಯಾಷಿಯರ್‌ಗೆ ಬೆದರಿಕೆ; ಇಬ್ಬರು ಉದ್ಯಮಿಗಳು, ಪ್ರಭಾವಿ ಮಹಿಳೆ ಮೇಲೆ ಕಣ್ಣಿಟ್ಟ ಪೊಲೀಸರು!

ನಟ ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 49ನೇ ಸಾಕ್ಷಿಯಾಗಿರುವ, ಬಾರ್ ಕ್ಯಾಷಿಯರ್ ಸಂದೀಪ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
Renukaswamy and Darshan
ರೇಣುಕಾಸ್ವಾಮಿ ಮತ್ತು ದರ್ಶನ್Online Desk
Updated on

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಸಾಕ್ಷಿ ಸಂದೀಪ್ ಅವರ ಅಪಹರಣ ಮತ್ತು ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆನ್ನಲಾದ ಇಬ್ಬರು ಉದ್ಯಮಿಗಳನ್ನು ಪತ್ತೆಹಚ್ಚಿದ್ದಾರೆ.

ಕಿರಣ್ ಮತ್ತು ಗೌರವ್ ಶೆಟ್ಟಿ ಎಂಬ ಉದ್ಯಮಿಗಳ ಪಾತ್ರದ ಬಗ್ಗೆ ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಪ್ರಭಾವಿ ಮಹಿಳೆಯೊಬ್ಬರ ಪಾತ್ರದ ಕುರಿತಾಗಿಯೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಕರೆ ದಾಖಲೆಗಳ ವಿಧಿವಿಜ್ಞಾನ ವಿಶ್ಲೇಷಣೆಯಿಂದ ಸಂದೀಪ್‌ಗೆ ಬೆದರಿಕೆ ಹಾಕಲಾದ ಸಮಯದಲ್ಲಿ ಕಿರಣ್ ಮತ್ತು ಗೌರವ್ ಶೆಟ್ಟಿ ಕಾನ್ಫರೆನ್ಸ್ ಕರೆಯಲ್ಲಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಸಂದೀಪ್‌ಗೆ ಬೆದರಿಕೆ ಹಾಕಲು ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಈ ಜೋಡಿಯು ಆರೋಪಿ ಪುನೀತ್‌ನನ್ನು ಬಳಸಿಕೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ನಟ ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 49ನೇ ಸಾಕ್ಷಿಯಾಗಿರುವ, ಬಾರ್ ಕ್ಯಾಷಿಯರ್ ಸಂದೀಪ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು, ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತೆಂದು ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಹಿಂದೆ ಪುನೀತ್, ಸುಹಾಸ್ ಮತ್ತು ವೇಣು ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದರು. ತನಿಖೆಯ ವೇಳೆ, ಪೊಲೀಸರು ಪುನೀತ್‌ನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡು ಅದರಿಂದ ವಾಟ್ಸಾಪ್ ಮಾಹಿತಿಯನ್ನು ಪಡೆದುಕೊಂಡರು. ನಂತರ, ಆ ಮಾಹಿತಿಯನ್ನು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಯಿತು.

Renukaswamy and Darshan
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್; ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ಆರೋಪಿ ಹಾಗೂ ಇಬ್ಬರು ಉದ್ಯಮಿಗಳ ನಡುವಿನ ಸಂವಹನವನ್ನು ಖಚಿತಪಡಿಸಿಕೊಳ್ಳಲು ಎಫ್‌ಎಸ್‌ಎಲ್ (FSL) ವರದಿಯ ಅಂಶಗಳು ತನಿಖಾಧಿಕಾರಿಗಳಿಗೆ ನೆರವಾಗಿವೆ. ಸಂದೀಪ್‌ಗೆ ಬೆದರಿಕೆಯೊಡ್ಡಿದ ಸಮಯದಲ್ಲಿ ಪುನೀತ್ ಅವರೊಂದಿಗೆ ಕಿರಣ್ ಮತ್ತು ಗೌರವ್ ಕಾನ್ಫರೆನ್ಸ್ ಕರೆಯಲ್ಲಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಭಾವಿ ಮಹಿಳೆಯೊಬ್ಬರ ಪಾತ್ರದ ಕುರಿತೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಕಿರಣ್ ಮತ್ತು ಗೌರವ್ ಶೆಟ್ಟಿ ಸಂಪರ್ಕಿಸುವ ಮುನ್ನವೇ ಆ ಮಹಿಳೆ ಪುನೀತ್ ಅವರನ್ನು ಸಂಪರ್ಕಿಸಿದ್ದರು; ಅಲ್ಲದೆ, ಆ ಇಬ್ಬರು ಉದ್ಯಮಿಗಳು ನೀಡುವ ಸೂಚನೆಗಳನ್ನು ಪಾಲಿಸುವಂತೆ ಅವರಿಗೆ ತಿಳಿಸಿದ್ದರು ಎಂದು ಹೇಳಲಾಗಿದೆ.

ಸಂದೀಪ್‌ ಅವರನ್ನು ಭಯಭೀತಗೊಳಿಸುವ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಅಥವಾ ಸಾಕ್ಷ್ಯ ನೀಡುವುದನ್ನು ತಡೆಯುವ ಪ್ರಯತ್ನದ ಭಾಗವಾಗಿ ಬೆದರಿಕೆಯೊಡ್ಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪುನೀತ್ ಅವರ ಮೊಬೈಲ್ ಫೋನ್‌ನಿಂದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡು ವಿಶ್ಲೇಷಿಸಿದ ನಂತರ ತನಿಖೆಯು ವೇಗ ಪಡೆದುಕೊಂಡಿತು. ಆರೋಪಿಗಳ ಪಾತ್ರ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರರೊಂದಿಗೆ ಅವರು ನಡೆಸಿದ ಸಂವಹನವನ್ನು ಖಚಿತಪಡಿಸಿಕೊಳ್ಳಲು ವಾಟ್ಸಾಪ್ ಡೇಟಾ ಮತ್ತು ಇತರ ವಿಧಿವಿಜ್ಞಾನ (ಫೋರೆನ್ಸಿಕ್) ಸಾಕ್ಷ್ಯಗಳು ತನಿಖಾಧಿಕಾರಿಗಳಿಗೆ ನೆರವಾಗಿವೆ ಎಂದು ವರದಿಯಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸುವ ಮೊದಲು, ಪೊಲೀಸರು ಈಗ ಹೆಚ್ಚಿನ ತಾಂತ್ರಿಕ ಮತ್ತು ವಿಧಿವಿಜ್ಞಾನ ವರದಿಗಳಿಗಾಗಿ ಕಾಯುತ್ತಿದ್ದಾರೆ.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಂದೀಪ್ ಅವರನ್ನು 49ನೇ ಸಾಕ್ಷಿಯನ್ನಾಗಿ ಪಟ್ಟಿ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಅಥವಾ ಅವರನ್ನು ಬೆದರಿಸಲು ಈ ಬೆದರಿಕೆಗಳನ್ನು ಒಡ್ಡಲಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿರುವುದರಿಂದ, ಇತ್ತೀಚಿನ ಬೆಳವಣಿಗೆಗಳು ತನಿಖೆಗೆ ಹೊಸ ಆಯಾಮವನ್ನು ನೀಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com