

ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊಪ್ಪಳದ ಗವಿಮಠದ ಶ್ರೀ ಗವಿದ್ದೇಶ್ವರ ಮಹಾಸ್ವಾಮಿಗಳು (Gavisiddeshwara Swamiji) ತೀವ್ರ ಮುಜುಗರ ಅನುಭವಿಸಿದರು. ಅಲ್ಲದೆ ಪೂಜ್ಯ ಸ್ವಾಮೀಜಿಗಳಿಗೆ ಸಾರ್ವಜನಿಕವಾಗಿ ಉಂಟಾದ ಈ ಮುಜುಗರದ ಘಟನೆ ಈಗ ಗವಿಮಠದ ಲಕ್ಷಾಂತರ ಭಕ್ತರಲ್ಲಿ ತೀವ್ರ ಬೇಸರ ತಂದಿದೆ.
ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘವು ‘ಹೀರೇದ ಸೂಗಮ್ಮ ಶಾಲೆ’ಯ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದು ಸ್ವಾಮೀಜಿಗಳು ಪ್ರವಚನ ನೀಡುತ್ತಿದ್ದಾಗ ಮೈಕ್ ಕಿರಿಕಿರಿ ಹಾಗೂ ವೇದಿಕೆಯಲ್ಲಿ ಉಂಟಾದ ಗದ್ದಲದಿಂದ ಬೇಸರಗೊಂಡ ಶ್ರೀಗಳು ತಮ್ಮ ಪ್ರವಚನವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದರು.
ಸ್ವಾಮೀಜಿ ಪ್ರವಚನ ನೀಡುತ್ತಿರುವಾಗಲೇ ವೇದಿಕೆ ಮೇಲಿದ್ದವರು ಮೈಕ್ ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಆಗಮಿಸಿದ್ದನ್ನು ಘೋಷಿಸಿದರು. ಈ ವೇಳೆ ಬೆಂಬಲಿತರ ಕೂಗಾಟ ವಾದ್ಯಮೇಳಗಳ ಸದ್ದು ಶ್ರೀಗಳಿಗೆ ಕಿರಿಕಿರಿ ಉಂಟು ಮಾಡಿತ್ತು. ಹೀಗಾಗಿ ಪ್ರವಚನವನ್ನು ಅರ್ಧಕ್ಕೆ ನಿಲ್ಲಿಸಿ ಈಶ್ವರ ಖಂಡ್ರೆ ಅವರಿಗೆ ಮಾತನಾಡಲು ಹೇಳಿ ತಮ್ಮ ಆಸನದಲ್ಲಿ ಶ್ರೀಗಳು ಕುಳಿತುಕೊಂಡರು. ಅದಾದ ಕೆಲ ನಿಮಿಷಗಳಲ್ಲೇ ಶ್ರೀಗಳು ವೇದಿಕೆಯಿಂದ ತೆರಳಿದರು.