

ಬೆಂಗಳೂರು: ವಿಧಾನಸೌಧದ ಸುತ್ತಮುತ್ತ ಸ್ವಾತಂತ್ರ್ಯ ದಿನಾಚರಣೆಯಂದು ಮೊದಲ ಬಾರಿಗೆ ಆಯೋಜಿಸಿದ್ದ ‘ಫ್ರೀಡಂ ಹಬ್ಬ’ ಭರ್ಜರಿ ಯಶಸ್ಸು ಕಂಡಿದ್ದು, ರಾಷ್ಟ್ರೀಯ ಹಬ್ಬವನ್ನು ಜನಕೇಂದ್ರಿತ ಉತ್ಸವವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು.
ಸಾವಿರಾರು ಕುಟುಂಬಗಳು, ಮಕ್ಕಳು ಹಾಗೂ ವಿವಿಧ ಸಮುದಾಯದವರು ನಗರದ ಹೃದಯಭಾಗದಲ್ಲಿ ನಡೆದ ಸಂಭ್ರಮದಲ್ಲಿ ಭಾಗವಹಿಸಿದರು. ಆದರೆ, ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಸಾರಿಗೆ ಹಾಗೂ ಜನದಟ್ಟಣೆ ನಿರ್ವಹಣೆಯಲ್ಲಿನ ಲೋಪಗಳು ಎದ್ದು ಕಾಣಿಸಿದವು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಪರಿಕಲ್ಪನೆಯಲ್ಲಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲದೊಂದಿಗೆ ‘ಫ್ರೀಡಂ ಹಬ್ಬ’ ಆಯೋಜಿಸಲಾಗಿತ್ತು.
ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ನಾಗರಿಕರನ್ನೂ ಸಕ್ರಿಯವಾಗಿ ಭಾಗಿಯಾಗಿಸುವ ಉದ್ದೇಶದಿಂದ ಹಬ್ಬವನ್ನು ರೂಪಿಸಲಾಗಿತ್ತು.
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಇತರ ರಾಜ್ಯಗಳಿಗೂ ಮಾದರಿಯಾಗಬಹುದಾದ ‘ಬೆಂಗಳೂರು ಮಾದರಿ’ ಎಂಬ ಮೆಚ್ಚುಗೆ ಕಾರ್ಯಕ್ರಮಕ್ಕೆ ವ್ಯಕ್ತವಾಗಿದೆ. ಆದರೆ, ಕಾರ್ಯಕ್ರಮ ಮುಗಿದ ಬಳಿಕ ಜನರು ತಮ್ಮ ಮನೆಗಳಿಗೆ ತೆರಳಲು ಎದುರಿಸಿದ ಸಮಸ್ಯೆಗಳು, ಕೊನೆಯ ಹಂತದ ಸಂಚಾರ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸಿವೆ.
ಕಾರ್ಯಕ್ರಮ ಮುಗಿದು ಜನರು ಹೊರಡಲು ಆರಂಭಿಸಿದಾಗ ಕನ್ನಿಂಗ್ಹ್ಯಾಮ್ ರಸ್ತೆ, ಕ್ವೀನ್ಸ್ ರಸ್ತೆ ಹಾಗೂ ವಸಂತನಗರದ ಹಲವು ಕಡೆಗಳಲ್ಲಿ ಬಿಎಂಟಿಸಿ ಬಸ್ಗಳಿಗಾಗಿ ಜನರು ಕಾದು ನಿಂತಿರುವುದು ಕಂಡುಬಂದಿತು.
ಸಾಮಾನ್ಯ ದಿನಗಳಲ್ಲಿ ಈ ನಿಲ್ದಾಣಗಳಿಗೆ ಐದುರಿಂದ ಎಂಟು ನಿಮಿಷಕ್ಕೊಮ್ಮೆ ಬಸ್ಗಳು ಬರುತ್ತವೆ. ಆದರೆ, ಶನಿವಾರ ಹಲವು ಪ್ರಯಾಣಿಕರು ಸುಮಾರು ಒಂದು ಗಂಟೆ ಕಾದರೂ, ಬಂದ ಬಸ್ಗಳು ತಾವು ತೆರಳಬೇಕಿದ್ದ ಮಾರ್ಗದ ಬಸ್ಗಳಾಗಿರಲಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ಮಾರ್ಗಗಳಲ್ಲಿ ಮಾಡಲಾಗಿದ್ದ ಬದಲಾವಣೆಗಳ ಕುರಿತು ಸ್ಪಷ್ಟ ಮಾಹಿತಿ ನೀಡದಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿತು.
ಡಾ. ಬಿ.ಆರ್. ಅಂಬೇಡ್ಕರ್ (ವಿಧಾನಸೌಧ) ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗುತ್ತದೆ ಎಂಬ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ಮುಂಚಿತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿತ್ತು. ಆದರೆ, ಫ್ರೀಡಂ ಹಬ್ಬದ ಹಿನ್ನೆಲೆಯಲ್ಲಿ ಬಸ್ಗಳ ಮಾರ್ಗಗಳಲ್ಲಿ ಮಾಡಲಾಗಿದ್ದ ಬದಲಾವಣೆಗಳ ಕುರಿತು ಬಿಎಂಟಿಸಿ ಇದೇ ರೀತಿಯ ಸಾರ್ವಜನಿಕ ಸೂಚನೆ ನೀಡಿರಲಿಲ್ಲ.
ಭವಿಷ್ಯದಲ್ಲಿ ‘ಫ್ರೀಡಂ ಹಬ್ಬ’ದಂತಹ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಪರ್ಯಾಯ ಸಾರಿಗೆ ವ್ಯವಸ್ಥೆ, ಸ್ಪಷ್ಟ ಸಾರ್ವಜನಿಕ ಮಾಹಿತಿ ಹಾಗೂ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಪರಿಣಾಮಕಾರಿ ಜನದಟ್ಟಣೆ ನಿರ್ವಹಣೆ ಅಗತ್ಯ ಎಂಬುದನ್ನು ಈ ಕಾರ್ಯಕ್ರಮದ ಅನುಭವ ಎತ್ತಿ ತೋರಿಸಿದೆ.