ಶೂಟ್ ಮಾಡೋಕೆ ಅವರೇನು ವೀರಪ್ಪನ್ ರೇಂಜ್​​​ನವರಾ, ಕಾಲಿಗೆ ಗುಂಡು ಹೊಡಿಬಹುದಿತ್ತಲ್ವಾ? ಹನೂರು ಪ್ರಕರಣದ ಬಗ್ಗೆ ಹೆಚ್​​​​ಡಿಕೆ ಕಿಡಿ

ಈ ಎನ್‌ಕೌಂಟ್‌ರ್ ಘಟನೆಯ ಹಿಂದೆ ಹಲವು ಅನುಮಾನಗಳಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನಿಖೆಯ ಪಾರದರ್ಶಕತೆಯನ್ನು ನೇರವಾಗಿ ಪ್ರಶ್ನಿಸಿದ್ದಾರೆ.
HD Kumaraswamy
ಎಚ್ ಡಿ ಕುಮಾರಸ್ವಾಮಿ
Updated on

ಬಾಗಲಕೋಟೆ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಮೂವರು ಸಾರ್ವಜನಿಕರು ಬಲಿಯಾದ ಭೀಕರ ಘಟನೆಯನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ಹನೂರಿನಲ್ಲಿ ಶೂಟೌಟ್‌ನಡೆದಿರುವುದು ಖಂಡನೀಯ. ಬೇಟೆಗೆ ಬಂದವರು ವೀರಪ್ಪನ್ ಮಟ್ಟದವರೇನು? ಅವರನ್ನು ಬಂಧಿಸಬಹುದಿತ್ತು. ಅಗತ್ಯವಿದ್ದರೆ ಕಾಲಿಗೆ ಗುಂಡು ಹಾರಿಸಿ ಹಿಡಿಯಬಹುದಿತ್ತು ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಎನ್‌ಕೌಂಟ್‌ರ್ ಘಟನೆಯ ಹಿಂದೆ ಹಲವು ಅನುಮಾನಗಳಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನಿಖೆಯ ಪಾರದರ್ಶಕತೆಯನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಅರಣ್ಯ ಪ್ರದೇಶಕ್ಕೆ ತೆರಳಿದವರು ಅಥವಾ ಬೇಟೆಗೆ ಬಂದವರು ವೀರಪ್ಪನ್ ಮಟ್ಟದ ಭೀಕರ ಅಪರಾಧಿಗಳೇನು? ಅವರನ್ನು ಜೀವಂತವಾಗಿ ಬಂಧಿಸಲು ಅರಣ್ಯ ಸಿಬ್ಬಂದಿಗೆ ಸಾಧ್ಯವಿರಲಿಲ್ಲವೇ? ಇಲಾಖೆಯ ನಿಯಮಾವಳಿಗಳ ಪ್ರಕಾರ ಅತ್ಯಗತ್ಯ ಸಂದರ್ಭ ಎದುರಾದರೆ ಕಾಲಿನ ಭಾಗಕ್ಕೆ ಗುಂಡು ಹಾರಿಸಿ ವಶಕ್ಕೆ ಪಡೆಯಬಹುದಾಗಿತ್ತು.

HD Kumaraswamy
ಚಾಮರಾಜನಗರ ಶೂಟೌಟ್‌ ಪ್ರಕರಣ: ಹನೂರು ಠಾಣೆ ಮುಂದೆ ನೂರಾರು ಮಂದಿಯಿಂದ ಪ್ರತಿಭಟನೆ, ತನಿಖೆಗೆ ಆಗ್ರಹ..!

ಆದರೆ, ಒಂದೇ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡು, ಮತ್ತೊಬ್ಬ ವ್ಯಕ್ತಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರುವುದು ಅತ್ಯಂತ ಗಂಭೀರ ಹಾಗೂ ಕಳವಳಕಾರಿ ವಿಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಬ್ಬಂದಿ ತಮ್ಮ ಆತ್ಮರಕ್ಷಣೆಗಾಗಿ ದಾಳಿ ನಡೆಸಿದ್ದಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಘಟನೆಯಲ್ಲಿ ಭಾಗಿಯಾದ ಯಾವೊಬ್ಬ ಅರಣ್ಯ ಸಿಬ್ಬಂದಿಗೂ ಸಣ್ಣ ಗಾಯವೂ ಆಗದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತದೆ. ಆದ್ದರಿಂದ, ಈ ದುರಂತದ ನೈಜ ಸತ್ಯಾಸತ್ಯತೆ ಹೊರಬರಲು ನಿಷ್ಪಕ್ಷಪಾತ ತನಿಖೆ ಅತ್ಯಗತ್ಯ ಎಂದು ಅವರು ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com