

ಬೆಂಗಳೂರು: ಕೋಗಿಲುವಿನಲ್ಲಿ ಅಕ್ರಮ ವಲಸಿಗರಿಗೆ ಮನೆ ಕೊಡುವ ಆಸಕ್ತಿ, ಗಡಿಯಲ್ಲಿ ಜೀವದ ಹಂಗು ತೊರೆದು ದೇಶ ಕಾಯ್ದ ಮಾಜಿ ಯೋಧರಿಗೆ ಒಂದು ನಿವೇಶನ ನೀಡಲು ಯಾಕಿಲ್ಲ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಒಂದೆಡೆ ಅಕ್ರಮವಾಗಿ ನೆಲೆಸಿರುವವರಿಗೆ ವಸತಿ ಕಲ್ಪಿಸುವ ಆತುರ, ಮತ್ತೊಂದೆಡೆ ದೇಶಕ್ಕಾಗಿ ಸೇವೆ ಸಲ್ಲಿಸಿದ 32,672ಕ್ಕೂ ಸೈನಿಕರು ತಮ್ಮ ಹಕ್ಕಿನ ನಿವೇಶನಕ್ಕಾಗಿ ವರ್ಷಗಳಿಂದ ಸರ್ಕಾರಿ ಕಚೇರಿಗಳ ಮೆಟ್ಟಿಲೇರುವ ದುಸ್ಥಿತಿ ಬಂದಿದೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕಣ್ಣಿನಲ್ಲಿ ಅಕ್ರಮ ವಲಸಿಗರು ‘ವಿಶೇಷ ಅತಿಥಿಗಳು’ ದೇಶ ಕಾಯ್ದ ಯೋಧರು ಮಾತ್ರ 'ಅನಾಥರು'? ಉಪ ಲೋಕಾಯುಕ್ತರ ನಿರ್ದೇಶನದ ಬಳಿಕವೂ ಕಡತಗಳು ನಿಮ್ಮ ಸರ್ಕಾರದ ಮುಂದಿವೆ. ಜಿಲ್ಲೆಗಳಲ್ಲಿ ಭೂಮಿ ಗುರುತಿಸಲಾಗಿದೆ. ಆದರೂ ಹಣಕಾಸು ಇಲಾಖೆಯ ಅನುಮೋದನೆಗೆ ಕಡತಗಳನ್ನು ತಡೆದು ಯೋಧರ ಹಕ್ಕಿಗೆ ಅಡ್ಡಿಯಾಗಿರುವುದೇಕೆ? ಎಂದು ತಪರಾಕಿ ಹಾಕಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಅವರೇ,ಯೋಧರ ನೆಮ್ಮದಿಗಿಂತ ವೋಟ್ ಬ್ಯಾಂಕ್ ರಾಜಕಾರಣವೇ ನಿಮಗೆ ಮುಖ್ಯವಾಯಿತೇ? ಅಕ್ರಮ ವಲಸಿಗರ ಬಗ್ಗೆ ತೋರುವ ‘ಉದಾರತೆ’ಯ ಒಂದು ಅಂಶವಾದರೂ ದೇಶದ ಗಡಿಯಲ್ಲಿ ನಿಂತು ಭಾರತವನ್ನು ರಕ್ಷಿಸಿದ ನಮ್ಮ ಯೋಧರ ಮೇಲೇಕಿಲ್ಲ? ಎಂದು ಅಶೋಕ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನಿಮ್ಮ ಮತ್ತು ನಿಮ್ಮ ಸಚಿವರ ಕಚೇರಿ, ನಿವಾಸ ನವೀಕರಣಕ್ಕೆ ಕೋಟಿ ಖರ್ಚು ಮಾಡಲು ಹಣವಿದೆ. ಆದರೆ ಯೋಧರಿಗೆ ನಿವೇಶನ ನೀಡಲು ಮಾತ್ರ ಕಡತ, ಅನುಮತಿ, ಹಣಕಾಸು ಇಲಾಖೆಯ ನೆಪ. ಇದು ಕೇವಲ ಆಡಳಿತಾತ್ಮಕ ವಿಳಂಬವಲ್ಲ, ದೇಶದ ಸೈನಿಕರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಘೋರ ಅಪಮಾನ. ತಕ್ಷಣವೇ ಮಾಜಿ ಯೋಧರ ನಿವೇಶನದ ಕಡತಗಳಿಗೆ ಅನುಮೋದನೆ ನೀಡಿ, ಹಂಚಿಕೆ ಪ್ರಕ್ರಿಯೆ ಆರಂಭಿಸಿ.
ಇಲ್ಲವಾದರೆ, ಯೋಧರ ಹಕ್ಕಿಗಾಗಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.