

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ನಡುವಿನ ರಹಸ್ಯ ಭೇಟಿ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ಕಾಂಗ್ರೆಸ್ ಹೈಕಮಾಂಡ್ನ ನಿಲುವಿಗೆ ವಿರುದ್ಧವಾಗಿ ನಡೆದ ಈ ಭೇಟಿ ಪಕ್ಷದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಇಬ್ಬರೂ ಇದನ್ನು ಸಾಮಾನ್ಯ ಸೌಜನ್ಯದ ಭೇಟಿ ಎಂದು ಬಣ್ಣಿಸಿದ್ದರೂ, ಕಾಂಗ್ರೆಸ್ನ ಕೆಲ ವಲಯಗಳಲ್ಲಿ ಈ ಭೇಟಿ ಅಸಮಾಧಾನಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಹಿರಿಯ (ಹೆಸರು ಬಹಿರಂಗಪಡಿಸದ) ನಾಯಕರು ಷರತ್ತಿನ ಮೇಲೆ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ಜೊತೆ ಮಾತನಾಡಿ, “ಡಿಕೆ.ಶಿವಕುಮಾರ್ ಅವರಿಗೆ ಈ ಭೇಟಿ ತಪ್ಪಿಸಬಹುದಾದ ರೀತಿಯ ಬೆಳವಣಿಗೆಯಾಗಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಪಕ್ಷದ ಇತರ ನಾಯಕರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಈ ನಡುವೆ ಅದಾನಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ.ಶಿವಕುಮಾರ್ ಅವರು, ಗೌತಮ್ ಅದಾನಿ ಅವರೇ ಭೇಟಿಗೆ ಸಮಯ ಕೇಳಿದ್ದರು. ಔಪಚಾರಿಕ ವಿಚಾರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.
ಇದು ಕೇವಲ ಸೌಜನ್ಯದ ಭೇಟಿ. ರಾಜ್ಯದಲ್ಲಿ ಅದಾನಿ ಸಮೂಹದ ಹಲವು ಯೋಜನೆಗಳು ಈಗಾಗಲೇ ನಡೆಯುತ್ತಿವೆ ಎಂದೂ ತಿಳಿಸಿದ್ದಾರೆ. ಆದರೆ, ಈ ಸ್ಪಷ್ಟನೆಯ ಹೊರತಾಗಿಯೂ ಕಾಂಗ್ರೆಸ್ ವಲಯದಲ್ಲಿ ಭೇಟಿಯ ಬಗ್ಗೆ ಅಸಮಾಧಾನಗಳು ವ್ಯಕ್ತವಾಗುತ್ತಿವೆ.
ಮುಖ್ಯಮಂತ್ರಿ ನಿವಾಸಕ್ಕೆ ಕೈಗಾರಿಕೋದ್ಯಮಿ ಗೌತಮ್ ಅದಾನಿ ಭೇಟಿ ನೀಡಿರುವುದು ಹಲವು ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಗಮನ ಸೆಳೆದಿದೆ.
ಇದೇ ವೇಳೆ, ಇದು ಇಬ್ಬರ ಮೊದಲ ಭೇಟಿಯಲ್ಲ. ಈ ಹಿಂದೆ ಕೂಡ ಶಿವಕುಮಾರ್ ಹಾಗೂ ಅದಾನಿ ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಭೇಟಿಯ ಸಮಯವೂ ಗಮನಾರ್ಹವಾಗಿದೆ. ಉತ್ತರ ಬೆಂಗಳೂರಿನ ಹೆಬ್ಬಾಳದಿಂದ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ 16.75 ಕಿ.ಮೀ ಉದ್ದದ ಅವಳಿ ಸುರಂಗ ಯೋಜನೆಗೆ ಅದಾನಿ ಸಮೂಹವು ಅತಿ ಕಡಿಮೆ ಬಿಡ್ ಸಲ್ಲಿಸಿರುವುದಾಗಿ ವರದಿಯಾಗಿದೆ.