ರಾಜ್ಯದಲ್ಲಿ ಬರಗಾಲದ ಬಿಸಿ: ಗಗನಕ್ಕೇರಿದ ಸಕ್ಕರೆ, ಈರುಳ್ಳಿ ಬೆಲೆ..!

ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಕುಂಠಿತಗೊಂಡಿರುವುದು ಮತ್ತು ನೆರೆ ರಾಜ್ಯ ಮಹಾರಾಷ್ಟ್ರದಲ್ಲೂ ಬೆಳೆ ಹಾನಿಯಾಗಿರುವುದು ಈರುಳ್ಳಿ ಅಭಾವಕ್ಕೆ ಮುಖ್ಯ ಕಾರಣವಾಗಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ತೀವ್ರ ಬರಗಾಲ ಮತ್ತು ಮುಂಗಾರು ಮಳೆಯ ಅಭಾವವು ಇದೀಗ ಜನಸಾಮಾನ್ಯರ ಮೇಲೆ ಪರಿಣಾಮ ಬೀರತೊಡಗಿದೆ. ಮಾರುಕಟ್ಟೆಯಲ್ಲಿ ಸಕ್ಕರೆ ಮತ್ತು ಈರುಳ್ಳಿ ಬೆಲೆಗಳು ದಿಢೀರ್ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಕಳೆದ ಕೆಲವು ವಾರಗಳಿಂದ ಈರುಳ್ಳಿ ಸಗಟು ದರದಲ್ಲಿ ಸರಾಸರಿ ಪ್ರತಿ ಕೆಜಿಗೆ 15 ರೂಪಾಯಿ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ ಈ ಹಿಂದೆ 20 ರಿಂದ 30 ರೂಪಾಯಿ ಇದ್ದ ಒಂದು ಕೆಜಿ ಈರುಳ್ಳಿ ಬೆಲೆ, ಇದೀಗ 40 ರಿಂದ 52 ರೂಪಾಯಿ ತಲುಪಿದೆ.

ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಕುಂಠಿತಗೊಂಡಿರುವುದು ಮತ್ತು ನೆರೆ ರಾಜ್ಯ ಮಹಾರಾಷ್ಟ್ರದಲ್ಲೂ ಬೆಳೆ ಹಾನಿಯಾಗಿರುವುದು ಈರುಳ್ಳಿ ಅಭಾವಕ್ಕೆ ಮುಖ್ಯ ಕಾರಣವಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಲಹೆಗಾರ ರಮೇಶ್‌ ಚಂದ್ರ ಲಾಹೋಟಿ ಮಾತನಾಡಿ, ಆಗಸ್ಟ್‌ ತಿಂಗಳಲ್ಲಿ ಸಕ್ಕರೆಯ ಸಗಟು ಬೆಲೆ ನಿರಂತರವಾಗಿ ಏರಿಕೆಯಾಗಿದ್ದು, ರೂ.45ರಿಂದ ಇದೀಗ ರೂ.63ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.

ಮುಂಗಾರು ಅವಧಿಯಲ್ಲಿ ಮಳೆ ಕೊರತೆಯಿಂದ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ, ಎಥೆನಾಲ್‌ ಉತ್ಪಾದನೆ ಹಾಗೂ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಕಳಪೆ ಇಳುವರಿಯಿಂದ ಪೂರೈಕೆ ಕುಸಿದಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ಬಿತ್ತನೆ ಪ್ರಮಾಣವೂ ಕಡಿಮೆಯಾಗಿರುವುದರಿಂದ ಮುಂದಿನ ವರ್ಷದ ಬೆಳೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

File photo
ಕೈಕೊಟ್ಟ ಮುಂಗಾರು: 28 ಕೋಟಿ ರೂ ವೆಚ್ಚದಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್..!

ಈರುಳ್ಳಿ ಬೆಲೆಯಲ್ಲೂ ಭಾರೀ ಏರಿಕೆ

ಕಳೆದ 20 ದಿನಗಳಲ್ಲಿ ಈರುಳ್ಳಿ ಬೆಲೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಈ ಹಿಂದೆ ಕೆ.ಜಿ.ಗೆ ರೂ.20–30ರಷ್ಟಿದ್ದ ಈರುಳ್ಳಿ ಬೆಲೆ ಇದೀಗ ರೂ.40–50ಕ್ಕೆ ತಲುಪಿದೆ.

ಕರ್ನಾಟಕದಲ್ಲಿ ಮಳೆ ಕೊರತೆ ಮತ್ತು ಬರ ಪರಿಸ್ಥಿತಿಯಿಂದ ಈರುಳ್ಳಿ ಬೆಳೆಯ ಮೇಲೆ ಪರಿಣಾಮ ಬೀರಿರುವುದೇ ಬೆಲೆ ಏರಿಕೆಗೆ ಕಾರಣ ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಬಿ. ರವಿಶಂಕರ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಈರುಳ್ಳಿಯ ಹೊಸ ಬೆಳೆ ಆಗಸ್ಟ್‌ ಅಂತ್ಯದಿಂದ ಡಿಸೆಂಬರ್‌ವರೆಗೆ ಮಾರುಕಟ್ಟೆಗೆ ಬರಬೇಕಿತ್ತು. ಆದರೆ ಮಳೆ ವಿಳಂಬವಾಗಿರುವುದರಿಂದ ಬಿತ್ತನೆ ಹಾಗೂ ಬೆಳವಣಿಗೆಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ಈ ವರ್ಷ ಮಳೆ ಕಡಿಮೆಯಾಗಿದ್ದು, ಬರದ ಸಮಸ್ಯೆ ಎದುರಾಗಿದೆ. ಮಳೆಯನ್ನೇ ಅವಲಂಬಿಸಿರುವ ರೈತರಿಗೆ ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ ಎಂದು ರವಿಶಂಕರ್ ಹೇಳಿದ್ದಾರೆ.

ಮಳೆಯನ್ನೇ ಅವಲಂಬಿಸಿದ್ದ ರೈತರ ಕೆಲವು ಪ್ರದೇಶಗಳಲ್ಲಿ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯದೆ ಹಾನಿಯಾಗಿವೆ. ಬಿತ್ತನೆ ಮಾಡಲು ಸಾಧ್ಯವಾದ ರೈತರೂ ಇಳುವರಿ ಹೇಗಿರಲಿದೆ ಎಂಬ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಮಳೆ ಸುಧಾರಿಸಿದರೆ ಬೆಳೆ ಕೊಯ್ಲಿಗೆ ಬರಲು ಸುಮಾರು ಒಂದು ತಿಂಗಳು ಬೇಕಾಗಬಹುದು. ಇಲ್ಲದಿದ್ದರೆ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಅಕ್ಕಿ ಬೆಲೆಯೂ ಏರಿಕೆ; ಗ್ರಾಹಕರಿಗೆ ಮತ್ತೊಂದು ಹೊರೆ

ಕಳೆದ ಒಂದು ತಿಂಗಳಲ್ಲಿ ಅಕ್ಕಿ ಬೆಲೆ ಕೂಡ ಗಣನೀಯವಾಗಿ ಏರಿಕೆಯಾಗಿದ್ದು, ರಾಜ್ಯದ ಗ್ರಾಹಕರಿಗೆ ಮತ್ತೊಂದು ಹೊರೆ ಎದುರಾಗಿದೆ.

26 ಕೆ.ಜಿ. ಕಚ್ಚಾ ಅಕ್ಕಿ ಚೀಲದ ಬೆಲೆ ರೂ.260ರಷ್ಟು ಏರಿಕೆಯಾಗಿದ್ದು, ರೂ.1,664ರಿಂದ ರೂ.1,924ಕ್ಕೆ ತಲುಪಿದೆ. ಬಹುತೇಕ ಎಲ್ಲ ಬಗೆಯ ಅಕ್ಕಿಯ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ.

ಸಾಮಾನ್ಯವಾಗಿ ಹೆಚ್ಚು ಬಳಕೆಯಾಗುವ ಸೀರೆ ಅಕ್ಕಿಯ ಬೆಲೆ ಕೂಡ ಕೇವಲ 30 ದಿನಗಳಲ್ಲಿ 26 ಕೆ.ಜಿ. ಚೀಲಕ್ಕೆ ರೂ.250ರಿಂದ ರೂ.300ರವರೆಗೆ ಹೆಚ್ಚಾಗಿದೆ.

ಶಿವಮೊಗ್ಗದ ನಿವಾಸಿ ಜ್ಯೋತಿ ಮಾತನಾಡಿ, ಸಕ್ಕರೆಗೆ ಹೋಲಿಸಿದರೆ ಅಕ್ಕಿಯ ಬಳಕೆ ಹೆಚ್ಚು. ಸಣ್ಣ ಕುಟುಂಬಕ್ಕೂ ತಿಂಗಳಿಗೆ ಕನಿಷ್ಠ 15 ಕೆ.ಜಿ. ಅಕ್ಕಿ ಬೇಕಾಗುತ್ತದೆ. ಕಳೆದ 5–6 ತಿಂಗಳಿಂದ ಅಗತ್ಯ ವಸ್ತುಗಳ ಬೆಲೆ ಏಕೆ ನಿರಂತರವಾಗಿ ಏರುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ಅಕ್ಕಿಯ ಪೂರೈಕೆ ಬೇಡಿಕೆಗೆ ತಕ್ಕಂತೆ ಇಲ್ಲದಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಅಕ್ಕಿ ಗಿರಣಿ ಮಾಲೀಕ ಭರತ್ ತಿಳಿಸಿದ್ದಾರೆ.

26 ಕೆ.ಜಿ. ಅಕ್ಕಿ ಪ್ಯಾಕೆಟ್‌ ಬೆಲೆ ಈಗ ರೂ.250–300ರಷ್ಟು ಹೆಚ್ಚಾಗಿದ್ದು, ಮುಂದಿನ ವಾರವೂ ಇದೇ ಬೆಲೆ ಮುಂದುವರಿಯುತ್ತದೆಯೇ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com