

ಬೆಂಗಳೂರು: ಕರ್ನಾಟಕದ ಪದವಿಪೂರ್ವ (PU) ಮತ್ತು ಪದವಿ ಕಾಲೇಜುಗಳಲ್ಲಿ ಸುಮಾರು 37 ವರ್ಷಗಳ ಸುದೀರ್ಘ ನಿಷೇಧದ ಬಳಿಕ ವಿದ್ಯಾರ್ಥಿ ಸಂಘದ (ಯೂನಿಯನ್) ಚುನಾವಣೆಗಳನ್ನು ಮರುಸೃಷ್ಟಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ನಿರ್ಧರಿಸಿದೆ. ಈ ಬಗ್ಗೆ, ವಿಕಾಸಸೌಧದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, "ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಜೆನ್ಝೀ (Gen Z) ತಲೆಮಾರಿನ ಚುನಾವಣೆಗಳನ್ನು ಮರುಜಾರಿಗೊಳಿಸಲಾಗುತ್ತಿದೆ" ಎಂದು ತಿಳಿಸಿದರು.
37 ವರ್ಷಗಳ ಬಳಿಕ ವಿದ್ಯಾರ್ಥಿ ಚುನಾವಣೆ
ಕಾಲೇಜು ಕ್ಯಾಂಪಸ್ಗಳಲ್ಲಿ ಹೆಚ್ಚುತ್ತಿದ್ದ ಹಿಂಸಾಚಾರ, ಗೂಂಡಾಗಿರಿ ಮತ್ತು ರಾಜಕೀಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ 1989ರಲ್ಲಿ ಆಗಿನ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಆದರೆ, ಪ್ರಸ್ತುತ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು, ದೀರ್ಘಕಾಲದ ನಿಷೇಧವನ್ನು ತೆರವುಗೊಳಿಸಿ ಇದೇ ಶೈಕ್ಷಣಿಕ ವರ್ಷದಿಂದಲೇ ಹಂತಹಂತವಾಗಿ ಚುನಾವಣೆ ನಡೆಸಲು ಮುಂದಾಗಿದೆ. ಈ ಬಗ್ಗೆ ಮುಂದಿನ 15 ದಿನಗಳ ಒಳಗಾಗಿ ಇದಕ್ಕೆ ಸಂಬಂಧಿಸಿದ ಅಧಿಕೃತ ಸರ್ಕಾರಿ ಆದೇಶ ಹೊರಬೀಳಲಿದೆ.
ಚುನಾವಣೆ ನಡೆಯುವ ಹಂತಗಳು:
ಮೊದಲ ಹಂತ: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆಗಳು ಜರುಗಲಿವೆ.
ಎರಡನೇ ಹಂತ: ಮೊದಲ ಹಂತದ ಯಶಸ್ಸನ್ನು ನೋಡಿಕೊಂಡು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಇದನ್ನು ವಿಸ್ತರಿಸಲಾಗುವುದು. ತದನಂತರ ಪ್ರತಿ ವರ್ಷವೂ ಏಕಕಾಲಕ್ಕೆ ಚುನಾವಣೆಗಳು ನಡೆಯಲಿವೆ.
ಕ್ಯಾಂಪಸ್ ರಾಜಕೀಯಕ್ಕೆ ಬ್ರೇಕ್
ಚುನಾವಣೆಯ ನೆಪದಲ್ಲಿ ಕಾಲೇಜುಗಳಲ್ಲಿ ಗಲಾಟೆ ಅಥವಾ ರಾಜಕೀಯ ಪ್ರಭಾವ ಉಂಟಾಗದಂತೆ ತಡೆಯಲು ಸಚಿವ ಶರಣಪ್ರಕಾಶ ಪಾಟೀಲ್ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಅವುಗಳು,
ರಾಜಕೀಯ ಸಂಘಟನೆಗಳ ನಿಷೇಧ: ಸ್ಪರ್ಧಿಸುವ ವಿದ್ಯಾರ್ಥಿಗಳು ಯಾವುದೇ ರಾಜಕೀಯ ಪಕ್ಷಗಳ ವಿದ್ಯಾರ್ಥಿ ಘಟನೆಗಳಾದ ABVP, NSUI, SFI, AIDSO ಮುಂತಾದ ಯಾವುದೇ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರಬಾರದು. ಅದರಂತೆ, ರಾಜಕೀಯ ಬೆಂಬಲ ಪಡೆದರೆ ಅಭ್ಯರ್ಥಿಗಳನ್ನು ತಕ್ಷಣ ಅನರ್ಹಗೊಳಿಸಲಾಗುವುದು.
ಬಾಹ್ಯ ವ್ಯಕ್ತಿಗಳಿಗೆ ಪ್ರವೇಶವಿಲ್ಲ: ಯಾವುದೇ ರಾಜಕೀಯ ನಾಯಕರು ಅಥವಾ ಹೊರಗಿನ ವ್ಯಕ್ತಿಗಳು ಕಾಲೇಜು ಆವರಣದೊಳಗೆ ಬಂದು ಭಾಷಣ ಮಾಡುವಂತಿಲ್ಲ ಅಥವಾ ಪ್ರಚಾರ ನಡೆಸುವಂತಿಲ್ಲ.
ಮಾತುಕತೆಗೆ ಮಿತಿ: ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕೇವಲ ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಶೈಕ್ಷಣಿಕ ವಿಷಯಗಳ ಬಗ್ಗೆ ಮಾತ್ರ ಮಾತನಾಡಬೇಕು. ಜೊತೆಗೆ, ಯಾವುದೇ ರಾಜಕೀಯ ಸಿದ್ಧಾಂತ ಅಥವಾ ಪಕ್ಷಗಳ ಪರ-ವಿರೋಧ ಚರ್ಚೆಗಳನ್ನು ನಡೆಸುವಂತಿಲ್ಲ.
ಮಹಿಳಾ ಮೀಸಲಾತಿ: ವಿದ್ಯಾರ್ಥಿನಿಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ವಿದ್ಯಾರ್ಥಿ ಸಂಘದ ಕೆಲವು ಪ್ರಮುಖ ಸ್ಥಾನಗಳನ್ನು ಮಹಿಳಾ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ.
ಕಾನೂನು ಕ್ರಮ: ಚುನಾವಣೆಯಲ್ಲಿ ಹಿಂಸಾಚಾರ, ಹಣದ ಬಲ ಅಥವಾ ಗೂಂಡಾಗಿರಿ ಪ್ರವೃತ್ತಿ ತೋರಿದರೆ ಅಂತಹ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.