

ಬೆಳ್ತಂಗಡಿ: 2012ರಲ್ಲಿ ಧರ್ಮಸ್ಥಳದಲ್ಲಿ ಕೊಲೆಯಾದ ಸೌಜನ್ಯಳ ಕುಟುಂಬವನ್ನು ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ಮಾಡಿದ್ದಾರೆ.
ಬುಧವಾರ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಂಗಾಲದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಭಟ್, ಸೌಜನ್ಯಳ ತಾಯಿ ಕುಸುಮಾವತಿ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ಮಾತನಾಡಿದರು.
ಭಟ್ ಅವರು ಕುಟುಂಬದೊಂದಿಗೆ ಸಂವಾದ ನಡೆಸಿ, ಸೌಜನ್ಯ ಕೊಲೆ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು ಎಂದು ಕುಸುಮಾವತಿ 'ಟಿಎನ್ಐಇ' (TNIE)ಗೆ ತಿಳಿಸಿದರು.
ಈ ಹಿಂದೆ ನಮ್ಮನ್ನು ಭೇಟಿಯಾಗಲು ನಡೆಸಿದ ಪ್ರಯತ್ನ ಯಶಸ್ವಿಯಾಗದಿದ್ದರಿಂದ ಈಗ ಭೇಟಿಯಾಗುತ್ತಿರುವುದಾಗಿ ಭಟ್ ನಮಗೆ ತಿಳಿಸಿದರು. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನಮಗೆ ಬೆಂಬಲ ವ್ಯಕ್ತಪಡಿಸಿದರು ಎಂದು ಅವರು ಹೇಳಿದರು. ಭಟ್ ಅವರೊಂದಿಗೆ ಉದ್ಯಮಿ ಸದಾನಂದ ನವಾರ, ಬಾಲಕೃಷ್ಣ ಗೌಡ ಬಿರ್ಮೋಟ್ಟು ಮತ್ತಿತರರು ಇದ್ದರು.
ಸೌಜನ್ಯ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದರು. 2012ರಲ್ಲಿ ಧರ್ಮಸ್ಥಳದ ನಿರ್ಜನ ಪ್ರದೇಶವೊಂದರಲ್ಲಿ ಅವರ ಕೈಗಳನ್ನು ಶಾಲು ಬಳಸಿ ಕಟ್ಟಿ, ಅತ್ಯಾಚಾರ ಮತ್ತು ಕೊಲೆ ಮಾಡಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಈ ಪ್ರಕರಣದ ಏಕೈಕ ಆರೋಪಿಯನ್ನು ಸಿಬಿಐ ನ್ಯಾಯಾಲಯವು ದೋಷಮುಕ್ತಗೊಳಿಸಿದ್ದು, ಪ್ರಕರಣದ ಮರುತನಿಖೆ ನಡೆಸಿ ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಬೇಕೆಂದು ಕುಟುಂಬವು ಆಗ್ರಹಿಸಿದೆ.