

ಹಾಸನ: ಇತ್ತೀಚಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರನ್ನು ಎಲ್ಲಿಂದ ಹಿಡಿದುಕೊಂಡು ಬಂದು ಹಾಸನಕ್ಕೆ ಡಿಸಿ ಮಾಡಿದರು ಎಂದು ಏಕವಚನದಲ್ಲಿ ಮಾತನಾಡಿದ್ದ ಶಾಸಕ ಹೆಚ್.ಡಿ. ರೇವಣ್ಣ ಶನಿವಾರ ಮತ್ತೆ ಕಿಡಿಕಾರಿದ್ದಾರೆ. ಜಿಲ್ಲಾಧಿಕಾರಿ ದಬ್ಬಾಳಿಕೆ ಮಾಡಲಿ ಯಾವ ರೀತಿ ರಿಪೇರಿ ಮಾಡಬೇಕು ಗೊತ್ತಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿ ವೇಳೆ ಗ್ರಾಮ ಪಂಚಾಯ್ತಿ ಚುನಾವಣೆಗೆ ಮೀಸಲು ನಿಗದಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್. ಡಿ. ರೇವಣ್ಣ, ಮೀಸಲು ನಿಗದಿ ಸಂಬಂಧ ಜಿಲ್ಲಾಧಿಕಾರಿ ಯಾಕೆ ತಹಸೀಲ್ದಾರ್ಗೆ ಪತ್ರ ಬರೆದರು? ಅವರಿಂದ ವರದಿ ಪಡೆದ ಬಳಿಕ ಮೀಸಲು ನಿಗದಿ ಬದಲಾವಣೆ ಮಾಡಿದ್ದು ಯಾಕೆ? ಹಾಗೇ ಬದಲಾವಣೆ ಮಾಡುವಾಗ ನಿರ್ದಿಷ್ಟ ಕಾರಣ ನೀಡಿ ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.
ಈ ಜಿಲ್ಲೆಯಲ್ಲಿ ಹೇಗೆ ನಡೀತಾ ಇದೆ ಅಂದ್ರೆ, ಆರು ತಿಂಗಳುಗಳ ಕಾಲ ಎಡಿಸಿ ಇರಲಿಲ್ಲ, ಜಗದೀಶ್ ಅಂತಾ ಬಂದ್ರು ಎರಡೇ ದಿನದಲ್ಲಿ ಹೋದ್ರು, ಒಂದೇ ವಾರದಲ್ಲಿ ರಜೆ ಹಾಕಿ ಹೋದ್ರು. ಸಕಲೇಶಪುರ ಎಸಿ ಒಂದು ತಿಂಗಳೂ ಇರಲಿಲ್ಲ, ವರ್ಗಾವಣೆ ತಗೊಂಡ್ ಹೋದ್ರು. ಹಾಸನದ ಎಡಿಸಿ, ಎಸ್ಎಲ್ ಎಓ, ಸಕಲೇಶಪುರ ಎಸಿ ಎಲ್ಲಾ ಹೋದ್ರು, ಹಲವು ಕಡೆಗಳಲ್ಲಿ ಎರಡು, ಮೂರು ಕಡೆ ಚಾರ್ಜ್ ಹಾಕಿದ್ದಾರೆ. ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ಅವರು ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ಗೊತ್ತಿದೆ ಎಂದು ವಾರ್ನಿಂಗ್ ನೀಡಿದರು.
ಮೀಸಲು ನಿಗದಿಯಾಗಿರುವ ದೃಢೀಕೃತ ಪ್ರತಿ ಕೇಳಿದರೆ ಇನ್ನೂ ಕೊಡ್ತಾ ಇಲ್ಲ. ರೈತರಿಗೆ ತೊಂದರೆ ಕೊಡಲು ನಾನು ಬಿಡಲ್ಲ. ನಾನು ಡಿಸಿ ಆಫೀಸ್ಗೆ ಹೋಗಿದ್ನೋ ಇಲ್ಲವೋ ಅನ್ನೋದನ್ನ ಹೇಳಲಿ. ಸೋಮವಾರದ (ಆ.31) ಒಳಗೆ ಮೀಸಲು ಬದಲಾವಣೆ ಆಗದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ 7.35 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಇದೆ. 14 ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿದೆ. ಬಿತ್ತಿದ ಬೆಳೆ ಬಹುತೇಕ ನಾಶವಾಗಿದೆ. ರಾಗಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬೇಲೂರು, ಆಲೂರು ತಾಲೂಕುಗಳನ್ನು ಬರ ಪಟ್ಟಿಗೆ ಯಾಕೆ ಸೇರಿಸಿಲ್ಲ. ಜಿಲ್ಲೆಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎನ್ನುವಂತಾಗಿದೆ.ನಾನು ಹಳ್ಳಿ ಭಾಷೆಯಲ್ಲಿ ಹೇಳಿದ್ರೆ ಅವರು ಬೈತಾರೆ ಅಂತಾ ಹೇಳ್ತಾರೆ ಎಂದರು.