ಕೊಟ್ಟೂರು 'ತ್ರಿವಳಿ ಮರ್ಡರ್' ಕೇಸ್ ಗೆ ಬಿಗ್ ಟ್ವಿಸ್ಟ್!
ಕೊಟ್ಟೂರು: ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಮಗನಿಂದಲೇ ತಂದೆ, ತಾಯಿ ಹಾಗೂ ತಂಗಿಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹಂತಕ ಅಕ್ಷಯ್ ಕಳ್ಳಾಟದ ಮೂಲಕ ತನಿಖೆ ದಿಕ್ಕನ್ನು ತಪ್ಪಿಸಲು ಯತ್ನಿಸಿರುವುದು ಬಯಲಾಗಿದೆ.
ಮೊದಲಿಗೆ ತಂಗಿ ಅಂತರ್ಜಾತಿಯ ಹುಡುಗನೊಂದಿಗೆ ಸಂಬಂಧ ಬೆಳೆಸಿ ಮೂರು ತಿಂಗಳ ಗರ್ಭಿಣಿ ಆಗಿದ್ದರಿಂದ ಮಾರ್ಯಾದೆಗೆ ಅಂಜಿ ಗರ್ಭಪಾತ ಮಾಡಿಸಲು ಒತ್ತಡ ಹಾಕಿದ್ದ. ಆದರೆ, ಇದಕ್ಕೆ ಪೋಷಕರು ಒಪ್ಪದಿದ್ದಾಗ ಮೂವರನ್ನು ಕೊಲೆ ಮಾಡಿ ದೃಶ್ಯಂ ಸಿನಿಮಾ ಸ್ಟೈಲಿನಲ್ಲಿ ಮನೆಯ ಹಾಲ್ ನಲ್ಲಿ ಗುಂಡಿ ತೋಡಿ ಹೂತ್ತಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿತ್ತು. ಆದರೆ ಇದೀಗ ಹಣದ ವಿಚಾರಕ್ಕಾಗಿ ಕೊಲೆಯಾಗಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಪೊಲೀಸರ ತನಿಖೆ ವೇಳೆ ಆರೋಪಿ ಅಕ್ಷಯ್ ಸಾಕಷ್ಟು ಸುಳ್ಳು ಹೇಳಿರೋದು ಬಯಲಾಗಿದೆ. ಬರೋಬ್ಬರಿ 1.20 ಕೋಟಿ ಎಫ್ ಡಿ ಹಣದ ಬಗ್ಗೆ ಮಾಹಿತಿ ಪತ್ತೆಯಾಗಿದೆ. ಆರೋಪಿ ಅಕ್ಷಯ್, ತಂಗಿ ವಿಚಾರಕ್ಕೆ ತಂದೆ ತಾಯಿ ಜೊತೆಗೆ ಜಗಳ ಮಾಡಿರಲಿಲ್ಲ. ಬದಲಿಗೆ ಬ್ಯಾಂಕ್ನಲ್ಲಿ ತಂದೆ ಇಟ್ಟಿದ್ದ ಬರೋಬ್ಬರಿ 1.20 ಕೋಟಿ ಎಫ್ ಡಿ ಹಣದ ವಿಚಾರಕ್ಕೆ ಗಲಾಟೆ ನಡೆದಿದ್ದು, ಮೂವರನ್ನು ಕೊಂದಿದ್ದಾನೆ ಎನ್ನುವುದು ತಿಳಿದುಬಂದಿದೆ.
ಕುಡಿತದ ಚಟಕ್ಕೆ ಬಿದ್ದಿದ್ದ ಹಂತಕ ಅಕ್ಷಯ್, ಹಣಕಾಸಿನ ವಿಚಾರಕ್ಕೆ ಮಾತ್ರವಲ್ಲದೇ ತಂಗಿಯ ಹೆಸರಲ್ಲಿ ತಂದೆ ಎಫ್ಡಿ ಇಟ್ಟಿದ್ದ ಹಣದ ಬಗ್ಗೆಯೂ ಮನಸ್ತಾಪ ಹೊಂದಿದ್ದ ಎನ್ನಲಾಗಿದೆ. ಮಗಳ ವಿದ್ಯಾಭ್ಯಾಸಕ್ಕೆಂದೇ ಅಕ್ಷಯ್ ತಂದೆ ಐವತ್ತು ಲಕ್ಷ ಹಣ ಎಫ್ಡಿ ಮಾಡಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.
ಇದೇ ಹಣದ ವಿಚಾರದ ಬಗ್ಗೆ ಅಕ್ಷಯ್ ಮಾವನ ಬಳಿ ಚರ್ಚೆ ಮಾಡಿದ್ದನು. ಹೆಚ್ಚು ಹಣದಾಸೆಗೆ ಅಳಿಯ ಅಕ್ಷಯ್ಗೆ ಮಾವ ವಸಂತನೇ ಕೊಲೆಯ ಐಡಿಯಾ ಕೊಟ್ಟಿದ್ದಾನೆ ಎನ್ನಲಾಗಿದ್ದು,ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಎಲ್ಲಾ ಆಯಾಮದಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಂಗಿಯ ಪ್ರಿಯಕರನನ್ನೂ ಕೊಲೆ ಮಾಡಿರಬಹುದು ಅನ್ನೋ ಅನುಮಾನ ವ್ಯಕ್ತವಾಗಿದೆ.

