

ಬೆಂಗಳೂರು: ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ತೀವ್ರ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ಮನೋವೈದ್ಯರಿಂದ ಕೌನ್ಸೆಲಿಂಗ್ಗೆ ಒಳಗಾಗಿದ್ದರು ಎಂಬುದು ವಿಶೇಷ ತನಿಖಾ ತಂಡ (SIT)ತನಿಖೆ ವೇಳೆ ತಿಳಿದುಬಂದಿದೆ. ರಾಯ್ ಆತ್ಮಹತ್ಯೆಗೂ ಮುನ್ನಾ ಜಯನಗರದಲ್ಲಿ ಮನೋವೈದ್ಯರನ್ನು ಭೇಟಿಯಾಗಿದ್ದರು ಎನ್ನಲಾಗಿದೆ.
ಎಸ್ಐಟಿ ಅಧಿಕಾರಿಗಳು ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ರಾಯ್ ಅವರ ಕೊಠಡಿ ಧ್ವನಿ ನಿರೋಧಕ ( soundproof) ಆಗಿತ್ತು. ಶುಕ್ರವಾರ ಮಧ್ಯಾಹ್ನ 3.15ರ ಸುಮಾರಿಗೆ ರಾಯ್ ಗುಂಡು ಹಾರಿಸಿಕೊಂಡಾಗ, ಕಚೇರಿಯಲ್ಲಿದ್ದ ಅವರ ಯಾವುದೇ ಉದ್ಯೋಗಿಗಳಿಗೆ ಗುಂಡಿನ ಸದ್ದು ಕೇಳಿಸಿಲ್ಲ.
ಅಪರಾಧ ನಡೆದ ಸ್ಥಳದಲ್ಲಿದ್ದ ಐಟಿ ಅಧಿಕಾರಿಗಳ ತಂಡವನ್ನು ಎಸ್ಐಟಿ ವಿಚಾರಣೆ ನಡೆಸಿದೆ ಎಂದು ವರದಿಯಾಗಿದೆ. ತನಿಖಾಧಿಕಾರಿಯಿಂದ ಅನುಮತಿ ಪಡೆಯದೆ ನಗರ ಬಿಟ್ಟು ಹೋಗದಂತೆ ಐಟಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕಾನ್ಫಿಡೆಂಟ್ ಗ್ರೂಪ್ ಸಿಬ್ಬಂದಿ ಮತ್ತು ರಾಯ್ ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ಎಸ್ಐಟಿ ದಾಖಲಿಸಿಕೊಳ್ಳುತ್ತಿದೆ. ರಾಯ್ ಅವರಿಗೆ ಯಾವುದೇ ಬೆದರಿಕೆ ಇತ್ತೇ ಎಂಬುದನ್ನು ತಿಳಿಯಲು ಕುಟುಂಬದವರನ್ನು ವಿಚಾರಣೆ ಮಾಡಲಾಗುತ್ತಿದೆ. ಪ್ರಕರಣದ ದೂರುದಾರ ಕಾನ್ಫಿಡೆಂಟ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಟಿಎ ಜೋಸೆಫ್ ಅವರ ಹೇಳಿಕೆಗಳನ್ನು ಸಹ ದಾಖಲಿಸಿಕೊಳ್ಳಲಾಗುತ್ತಿದೆ.
ಅನಗತ್ಯ ಊಹಾಪೋಹ: ಗೃಹ ಸಚಿವ ಪರಮೇಶ್ವರ್
ಆತ್ಮಹತ್ಯೆ ಪ್ರಕರಣದಲ್ಲಿ ಅನಗತ್ಯ ವದಂತಿ ಹರಡಬಾರದು ಎಂದು ಗೃಹ ಸಚಿವ ಜಿ.ಪರಮೇಶ್ವರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರಾಯ್ ಅವರ ನಿಕಟವರ್ತಿಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅಂತಹ ಊಹಾಪೋಹಗಳನ್ನು ತಡೆಯಲು ಸರ್ಕಾರ ಎಸ್ಐಟಿ ರಚಿಸಿದೆ. ಆತ್ಮಹತ್ಯೆಯಲ್ಲಿ ಯಾರದ್ದಾದರೂ ಪಾತ್ರವಿದ್ದರೆ ಎಸ್ಐಟಿ ವರದಿಯಲ್ಲಿ ಬೆಳಕಿಗೆ ಬರಲಿದೆ ಎಂದರು.
ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಎಸ್ಐಟಿಯನ್ನು ಸರ್ಕಾರ ಶನಿವಾರ ರಚಿಸಿದ್ದು, ಜಂಟಿ ಆಯುಕ್ತ (ಪಶ್ಚಿಮ) ಸಿ ವಂಶಿ ಕೃಷ್ಣ ಅದರ ಮುಖ್ಯಸ್ಥರಾಗಿದ್ದಾರೆ.
Advertisement