ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾಂಸ ಪತ್ತೆ: ಭಕ್ತರ ಭಾರೀ ಆಕ್ರೋಶ, ಪೊಲೀಸ್ ತನಿಖೆ
ಬಳ್ಳಾರಿ: ಕರ್ನಾಟಕದ ಬಳ್ಳಾರಿಯಲ್ಲಿ ಶುಕ್ರವಾರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ನಗರದ ನಾಗಲಕೇರಿ ಪ್ರದೇಶದ ಪ್ರಸಿದ್ಧ ಬಾಲಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾಂಸದ ಚೀಲ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಪ್ಲಾಸ್ಟಿಕ್ ಕವರ್ನಲ್ಲಿ ತಂದಿದ್ದ ಮಾಂಸವನ್ನು ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಗರುಡಗಂಬದ ಬಳಿ ಎಸೆಯಲಾಗಿದ್ದು, ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರ ಬೆಳಿಗ್ಗೆ 5:30 ರ ಸುಮಾರಿಗೆ ದೇವಸ್ಥಾನಕ್ಕೆ ಆಗಮಿಸಿದ ಅರ್ಚಕರು , ಪ್ಲಾಸ್ಟಿಕ್ ಕವರ್ನಲ್ಲಿ ಮಾಂಸದ ತುಂಡುಗಳನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ, ನೂರಾರು ಭಕ್ತರು ದೇವಸ್ಥಾನದ ಬಳಿ ಜಮಾಯಿಸಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.
ಮಾಂಸ ಪತ್ತೆಯಾದ ನಂತರ, ದೇವಾಲಯದ ಅರ್ಚಕರು ದೂರು ದಾಖಲಿಸಲು ನಿರ್ಧರಿಸಿದ್ದಾರೆ, ಆದರೆ ಸ್ಥಳೀಯ ಬಿಜೆಪಿ ನಾಯಕರು ಮತ್ತು ಹಿಂದೂ ಪರ ಸಂಘಟನೆಗಳು ಘಟನೆಯ ಬಗ್ಗೆ ಪಾರದರ್ಶಕ ತನಿಖೆಗೆ ಒತ್ತಾಯಿಸಿವೆ.
ಬಿಜೆಪಿ ಬಳ್ಳಾರಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಇದು "ದುಷ್ಕರ್ಮಿಗಳ ಕೃತ್ಯ" ಎಂದು ಹೇಳಿದರು. ಸ್ಥಳೀಯರು ದೇವಾಲಯದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಅದರ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಹೇಳಿದರು. ಸ್ಥಳದ ಬಳಿ ಜಮಾಯಿಸಿದ್ದ ಗುಂಪುಗಳ ವಿರೋಧದ ಬಗ್ಗೆಯೂ ಚರ್ಚೆಗಳು ನಡೆದವು.
ಅಶಾಂತಿ ಸೃಷ್ಟಿಗೆ ಯತ್ನ
ದೇವಸ್ಥಾನದ ಪ್ರಾಂಗಣದಲ್ಲಿ ಮಾಂಸ ಪತ್ತೆಯಾದ ಘಟನೆಯು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದೆ ಎಂದು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ.
ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳ ಮುಖಂಡರ ಪ್ರಕಾರ, ಇದು ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸಲು ದುಷ್ಕರ್ಮಿಗಳು ನಡೆಸಿರುವ ಕೃತ್ಯವಾಗಿದೆ. ಪತ್ತೆಯಾದ ಮಾಂಸವು ಗೋಮಾಂಸದ ತುಂಡುಗಳೆಂದು ಹೇಳಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಘಟನೆ ನಡೆದಿರುವ ಕುರಿತು ತನಿಖೆ ಕೈಗೊಂಡಿದ್ದಾರೆ.
ಹಿಂದೂಪರ ಸಂಘಟನೆಗಳ ಮುಖಂಡರು ನೀಡಿರುವ ಹೇಳಿಕೆ ಪ್ರಕಾರ, 'ಇದು ಬೀದಿ ನಾಯಿಗಳು ತಂದು ಹಾಕಿದಲ್ಲ, ನಾಯಿಗಳು ಮಾಂಸದ ಕವರ್ ಅನ್ನು ಅಷ್ಟು ನೀಟಾಗಿ ತಂದು ಇಡಲು ಸಾಧ್ಯವಿಲ್ಲ' ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಹಿಂದೂಪರ ಸಂಘಟನೆಗಳ ಆಕ್ರೋಶ
ಇನ್ನು ಈ ಘಟನೆಯ ಕುರಿತು 24 ಗಂಟೆಗಳ ಒಳಗಾಗಿ ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಗಳು ಪೊಲೀಸರನ್ನು ಒತ್ತಾಯಿಸಿದ್ದಾರೆ. ಇನ್ನು ಕೆಲವು ಸ್ಥಳಿಯರು ಇದು ಮನುಷ್ಯರು ಮಾಡಿದ ಕೃತ್ಯ ಅಲ್ಲ.
ನಾವು 40-45 ವರ್ಷದಿಂದ ನೋಡ್ತಿದ್ದೇವೆ. ಎಲ್ಲರೂ ಪ್ರತೀ ದಿನ ಪೂಜೆ ಮಾಡ್ತೇವೆ. ಇದು ಐತಿಹಾಸಿಕ ದೇವಸ್ಥಾನವಾಗಿದೆ. ಪ್ರತೀ ವರ್ಷ ರಾಮನವಮಿ ಸೇರಿದಂತೆ ಎಲ್ಲಾ ಹಬ್ಬ ಆಚರಣೆ ಮಾಡ್ತೇವೆ. ಈ ಮಾಂಸವನ್ನು ನಾಯಿ ಅಥವಾ ಬೆಕ್ಕು ತಂದು ಹಾಕಿರಬಹುದು. ಈ ಬಗ್ಗೆ ಸೂಕ್ತ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ಬಂದೋಬಸ್ತ್
ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ದೇವಾಲಯದ ಬಳಿ ಇರುವ ಪಿಸ್ತಾ ಹೌಸ್ ಎಂಬ ಮಾಂಸಾಹಾರಿ ರೆಸ್ಟೋರೆಂಟ್ ತೆರೆದ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿದ್ದು, ಅಲ್ಲಿಂದ ಮಾಂಸವನ್ನು ತರಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಆದಾಗ್ಯೂ, ಅಧಿಕಾರಿಗಳು ಈ ಸಂಪರ್ಕವನ್ನು ದೃಢಪಡಿಸಿಲ್ಲ.
ಬಳ್ಳಾರಿ ವಲಯ ಇನ್ಸ್ಪೆಕ್ಟರ್ ಜನರಲ್ ಪಿ.ಎಸ್. ಹರ್ಷ ಈ ಬಗ್ಗೆ ಮಾತನಾಡಿ, "ದೇವಾಲಯದಲ್ಲಿ ಮಾಂಸವನ್ನು ಹಾಕಲಾಗಿದೆ. ವಿಷಯವನ್ನು ವೈಭವೀಕರಿಸಬೇಡಿ; ಸತ್ಯವನ್ನು ಪರಿಶೀಲಿಸಲಾಗುತ್ತಿದೆ. ವಿಷಯವು ತುಂಬಾ ಚಿಕ್ಕದಾಗಿದೆ... ಅದನ್ನು ದೊಡ್ಡದಾಗಿಸಬೇಡಿ. ನಾವು ಕ್ರಿಮಿನಲ್ ಪ್ರಕರಣವನ್ನು ದಾಖಲಿಸುತ್ತಿದ್ದೇವೆ. ನಾವು ಪಾರದರ್ಶಕ ತನಿಖೆ ನಡೆಸುತ್ತಿದ್ದೇವೆ.
ಇದನ್ನು ಬ್ಯಾನರ್ ಸಮಸ್ಯೆಗೆ ಲಿಂಕ್ ಮಾಡಬೇಡಿ. ನಾವು ಪಾರದರ್ಶಕ ತನಿಖೆ ನಡೆಸುತ್ತಿದ್ದೇವೆ. ಯಾವುದೇ ಸಮಸ್ಯೆ ಇಲ್ಲ. ಯಾರನ್ನೂ ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ... ಘಟನೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದರು.

