

ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ದರ ನಿಗದಿ ಯಾರು ಮಾಡುತ್ತಾರೆ? ಎಂಬ ವಿಷಯವಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಆರೋಪ–ಪ್ರತ್ಯಾರೋಪ ಮತ್ತೆ ಭುಗಿಲೆದ್ದಿದೆ.
ರಾಜ್ಯ ಸರ್ಕಾರ ದರ ನಿಗದಿ ತನ್ನ ಅಧಿಕಾರ ವ್ಯಾಪ್ತಿಗೆ ಹೊರತಾಗಿದೆ ಎಂದು ಹೇಳುತ್ತಿದ್ದರೆ, ಬಿಜೆಪಿ ಮತ್ತು ಕೇಂದ್ರ ಸರ್ಕಾರದಪ್ರತಿನಿಧಿಗಳು ದರ ನಿಗದಿ ಹೊಣೆಗಾರಿಕೆ ರಾಜ್ಯ ಸರ್ಕಾರದ್ದೇ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಶೇ.105 ದರ ಏರಿಕೆ ಜಾರಿಗೊಂಡಿದ್ದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಹಸ್ತಕ್ಷೇಪದ ಬಳಿಕ ಅದನ್ನು ಶೇ.71ಕ್ಕೆ ಪರಿಷ್ಕರಿಸಿ ಇಳಿಕೆ ಮಾಡಲಾಗಿತ್ತು. ಇದೀಗ ಮತ್ತೆ ದರ ಏರಿಕೆ ಮಾಡಲಾಗಿದೆ.
ಸಂಸದ ಪಿಸಿ ಮೋಹನ್ ಅವರು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲದ ಕಾರಣ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ್ದಾರೆ. ಕಳೆದ ಬಾರಿ ಶೇ.71, ಈಗ ಶೇ.5ರಷ್ಟು ಏರಿಕೆ ಮಾಡಿದ್ದಾರೆಂದು ಟೀಕಿಸಿದ್ದಾರೆ.
ಬಿಎಂಆರ್ ಸಿಎಲ್ 10 ಸಾವಿರ ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿತ್ತು. ಆದರೆ, ಬಿಎಂಆರ್ ಸಿಎಲ್ ಗೆ ರಾಜ್ಯ ಸರ್ಕಾರ ಅನುದಾನ ನೀಡಲಿಲ್ಲ. ಶಕ್ತಿ ಯೋಜನೆಗೆ ಹಣ ತುಂಬಲು ಮೆಟ್ರೋ ಪ್ರಯಾಣ ದರ ಏರಿಕೆ ಮಾಡತ್ತಿದ್ದಾರೆ. ಸರ್ಕಾರದ ಬಳಿ ಹಣವಿಲ್ಲ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಮೆಟ್ರೋ ಪ್ರಯಾಣ ದರ ಏರಿಕೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೆಟ್ರೋ ಕಾರ್ಯಾಚರಣೆ ಮೆಟ್ರೋ ರೈಲ್ವೇಸ್ ಕಾಯ್ದೆ 2002 ಅಡಿಯಲ್ಲಿ ಬರುತ್ತದೆ. ಆದರೆ ದರ ಪರಿಷ್ಕರಣೆ ಕೇಂದ್ರದಿಂದ ಸ್ವಯಂಚಾಲಿತವಾಗಿ ಜಾರಿಯಾಗುವುದಿಲ್ಲ.ರಾಜ್ಯ ಸರ್ಕಾರದ ಮನವಿ ಬಂದ ಬಳಿಕವೇ ಕೇಂದ್ರ ಸರ್ಕಾರ ಭಾಡಾ ನಿಗದಿ ಸಮಿತಿ (FFC) ರಚಿಸುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸರ್ಕಾರದ ಪಾರದರ್ಶಕತೆಯನ್ನು ಪ್ರಶ್ನಿಸಿದ ಅವರು, ಈ ಹಿಂದೆ FFC ವರದಿಯನ್ನು ಏಳು ತಿಂಗಳ ಕಾಲ ತಡೆಹಿಡಿಯಲಾಗಿತ್ತು. ನ್ಯಾಯಾಲಯದ ಹಸ್ತಕ್ಷೇಪದ ನಂತರವೇ ಬಿಡುಗಡೆ ಮಾಡಲಾಗಿತ್ತು. BMRCL ಮಂಡಳಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಮತದಾನದಲ್ಲಿ ಬಹುಮತ ಇದೆ. ಸರ್ಕಾರ ಬಯಸಿದ್ದರೆ ದರ ಏರಿಕೆ ತಡೆಯಬಹುದಿತ್ತು ಎಂದು ಆರೋಪಿಸಿದ್ದಾರೆ.
ಇನ್ಫೋಸಿಸ್ ಮಾಜಿ CFO ಮೋಹನ್ದಾಸ್ ಪೈ ಅವರೂ ಕೂಡ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. “ಮೆಟ್ರೋ ಸಾರ್ವಜನಿಕ ಉಪಯೋಗ ಸೇವೆ. ಜನರು ದ್ವಿಚಕ್ರ ವಾಹನ ಬಳಸದೆ ಸಾರ್ವಜನಿಕ ಸಾರಿಗೆ ಬಳಸಲು ಕಡಿಮೆ ದರ ಇರಬೇಕು. ದರ ಹೆಚ್ಚಿಸಿದರೆ ಸಂಚಾರ ಗೊಂದಲ ಹೆಚ್ಚುತ್ತದೆ ಎಂದು ಹೇಳಿದ್ದಾರೆ.
ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ನೀಡುತ್ತಿರುವಾಗ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಮೆಟ್ರೋದಲ್ಲೇಕೆ ದರ ಹೆಚ್ಚಿಸಿದ್ದಾರೆ? ಇದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ತಪ್ಪು ನಿರ್ಧಾರ. ಕೆಟ್ಟ ನಿರ್ವಹಣೆಯಿಂದ ವೆಚ್ಚ ಹೆಚ್ಚಾಗಿದೆ, ಅದರ ಬೆಲೆಯನ್ನು ನಾಗರಿಕರು ತೆರುವಂತಾಗುತ್ತಿದೆ. ಇದಕ್ಕು ಜವಾಬ್ದಾರಾರು ಎಂದು ಪ್ರಶ್ನಿಸಿದ್ದಾರೆ.
Advertisement