

ಕುಣಿಗಲ್: ವಿಚ್ಛೇದನ ನೀಡದೆ 2ನೇ ಮದುವೆಯಾಗುತ್ತಿದ್ದಾಗ ಸ್ವತಃ ಪತ್ನಿಯೇ ಕಲ್ಯಾಣಮಂಟಪ್ಪಕ್ಕೆ ನುಗ್ಗಿ ತನ್ನ ಗಂಡನ ಮಾನವನ್ನು ಹರಾಜು ಹಾಕಿದ ಘಟನೆಯೊಂದು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಎಡೆಯೂರಿನಲ್ಲಿ ಭಾನುವಾರ ನಡೆದಿದೆ.
ಬೆಂಗಳೂರಿನ ರಾಜರಾಜೇಶ್ವರಿನಗರ ನಿವಾಸಿ ಹರಿಪ್ರಸಾದ್ ತನ್ನ ಪತ್ನಿ ಲೇಪಾಕ್ಷಿಗೆ ವಿಚ್ಛೇದನ ನೀಡದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಯುವತಿಯೊಬ್ಬಳೊಂದಿಗೆ 2ನೇ ಮದುವೆ ಮಾಡಿಕೊಳ್ಳುತ್ತಿದ್ದ.
ವಿವಾಹ ದಿನವೇ ಎಡೆ ಯೂರಿನ ಕಲ್ಯಾಣ ಮಂಟಪಕ್ಕೆ ವಕೀಲರು ಹಾಗೂ ಪೊಲೀಸರೊಂದಿಗೆ ಬಂದ ಲೇಪಾಕ್ಷಿ ಮದುವೆಯನ್ನು ತಡೆದಿದ್ದಾರೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಹರೀಶ್ ಪ್ರಸಾದ್ ಎಂಬಾತ ತನ್ನ ಬಾಲ್ಯದ ಗೆಳತಿ ಲೇಪಾಕ್ಷಿಯನ್ನು ಸುಮಾರು 11 ವರ್ಷಗಳ ಹಿಂದೆ ವಿವಾಹವಾಗಿದ್ದಾನೆ. ಆಗ ಲೇಪಾಕ್ಷಿಗೆ 18 ವರ್ಷ ಪೂರ್ಣವಾಗಿರಲಿಲ್ಲ. ನಂತರ ಆಕೆಗೆ 18 ವರ್ಷವಾದ ಬಳಿಕ ಬಂಧು-ಮಿತ್ರರ ಸಮ್ಮುಖದಲ್ಲಿ ಮದುವೆಯಾಗಿ, 10 ವರ್ಷ ಸಂಸಾರ ನಡೆಸಿದ್ದಾನೆ.
ದಿನ ಕಳೆದಂತೆ ಗಂಡನ ಮನೆಯವರು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದು, ಹರಿಪ್ರಸಾದ್ಗೆ ಅಕ್ರಮ ಸಂಬಂಧಗಳಿವೆ ಎಂದು ಲೇಪಾಕ್ಷಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಕೌಟುಂಬಿಕ ನ್ಯಾಯಾಲಯದಲ್ಲಿ ಪತ್ನಿಯೊಂದಿಗೆ ಪುನಃ ಜೀವನ ನಡೆಸುವುದಾಗಿ ಹರೀಶ್ ಒಪ್ಪಿಕೊಂಡಿದ್ದಾನೆ.
ಏತನ್ಮಧ್ಯೆ, ಪತ್ನಿಗೆ ತಿಳಿಯದಂತೆ ಮಂಡ್ಯದ ಮಳವಳ್ಳಿ ತಾಲ್ಲೂಕಿನ ನಿಟ್ಟೂರಿನ ಪುಣ್ಯಶ್ರೀ ಜೊತೆ 2ನೇ ಮದುವೆಗೆ ಮುಂದಾಗಿದ್ದಾನೆ. ಈ ವಿಚಾರ ತಿಳಿದ ಲೇಪಾಕ್ಷಿಯವರು ಮಂಗಳಸೂತ್ರ ಕಟ್ಟಲು ಸಿದ್ಧವಾಗಿದ್ದ ಕ್ಷಣದಲ್ಲೇ ವಕೀಲರು ಹಾಗೂ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ನುಗ್ಗಿ, ಮದುವೆ ತಡೆದಿದ್ದಾರೆ.
ಬಳಿಕ ಪೊಲೀಸರು ಹರಿಪ್ರಸಾದ್ ನನ್ನು ಠಾಣೆಗೆ ಕರೆದೊಯ್ದಿದ್ದು, ಇದೇ ವೇಳೆ ಮಧುವಿನ ತಾಯಿ ಕೂಡ ಅಮೃತೂರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹರೀಶ್ ತನ್ನ ಜಾತಿ ಮತ್ತು ಮೊದಲ ಮದುವೆಯ ವಿಷಯವನ್ನು ಮುಚ್ಚಿಟ್ಟು ಮದುವೆಗೆ ಒಪ್ಪಿಸಿದ್ದ ಎಂದು ಆರೋಪಿಸಿದ್ದಾರೆ.
ಇನ್ನು ಪ್ರಕರಣದ ದೂರುದಾರರು ಹಾಗೂ ಆರೋಪಿಗಳು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯವರಾಗಿರುವುದರಿಂದ ಎರಡೂ ದೂರುಗಳನ್ನು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
Advertisement