ಬೆಂಗಳೂರು: ಚಿನ್ನಾಭರಣ ದರೋಡೆ ಪ್ರಕರಣ ಬೇಧಿಸಲು ನೆರವಾದ ಮೊಬೈಲ್ ಫೋನ್
ಬೆಂಗಳೂರು: ಜನವರಿ 27 ರಂದು ಹಾಡಹಗಲೇ ಆಭರಣ ಅಂಗಡಿಯಲ್ಲಿ ಬಂದೂಕು ತೋರಿಸಿ ದರೋಡೆ ಮಾಡಿದ್ದ ತಂಡವನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬ ಸ್ಥಳದಿಂದ ಪರಾರಿಯಾಗುವಾಗ ತನ್ನ ಮೊಬೈಲ್ ಫೋನ್ ಅನ್ನು ಕೆಳಗೆ ಬೀಳಿಸಿ ಹೋಗಿದ್ದ. ಪೊಲೀಸರು ರಾಜಸ್ಥಾನದ ಐದು ಜನರನ್ನು ಬಂಧಿಸಿ 9.1 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬೀದಿ ವ್ಯಾಪಾರಿ ಅಂಕಿತ್ ನಾಥ್ (30), ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಅನೂಪ್ ಸಿಂಗ್ (30), ಆಭರಣ ಅಂಗಡಿಯಲ್ಲಿ ಕೆಲಸ ಮಾಡುವ ರವಿ ರಾವ್ (28), ಮಾಣಿ ಅನೂಪ್ ರಾಮ್ (23) ಮತ್ತು ನಿರ್ಮಾಣ ಕೆಲಸಗಾರ ಅರುಣ್ (31) ಎಂದು ಗುರುತಿಸಲಾಗಿದೆ. ಇವರೆಲ್ಲರೂ ರಾಜಸ್ಥಾನ ಮೂಲದವರು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಜನವರಿ 27 ರ ಸಂಜೆ ದಾಸನಪುರದ ಮುಖ್ಯ ರಸ್ತೆಯ ಬಳಿಯ ರಾಮದೇವ್ ಜ್ಯುವೆಲ್ಲರ್ಸ್ಗೆ ನುಗ್ಗಿದ ಆರೋಪಿಗಳು ಆಭರಣ ಅಂಗಡಿ ಮಾಲೀಕರ ಇಬ್ಬರು ಪುತ್ರರಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ಚಿನ್ನದ ಉಂಗುರಗಳು, ಇತರ ಕೆಲವು ಆಭರಣಗಳು ಮತ್ತು 50,000 ರೂ. ನಗದು ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತನಿಖೆಯ ಸಮಯದಲ್ಲಿ, ಪೊಲೀಸರು ಸ್ಥಳದಿಂದ ಪರಾರಿಯಾಗುತ್ತಿದ್ದಾಗ ಅನೂಪ್ ಸಿಂಗ್ ಬೀಳಿಸಿದ್ದ ಫೋನ್ ಕಂಡುಕೊಂಡರು. ಇದರಿಂದ ಆತನನ್ನು ಬಂಧಿಸಲು ಕಾರಣವಾಯಿತು. ವಿಚಾರಣೆಯ ಸಮಯದಲ್ಲಿ, ಅವನು ಇತರ ಆರೋಪಿಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದನು.
ದಾಸನಾಪುರದಲ್ಲಿ ವಾಸಿಸುತ್ತಿದ್ದ ಅಂಕಿತ್ ಸಮೋಸಾ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದನೆಂದು ಹೆಚ್ಚಿನ ತನಿಖೆಯಲ್ಲಿ ತಿಳಿದುಬಂದಿದೆ. ರಾತ್ರೋರಾತ್ರಿ ಶ್ರೀಮಂತನಾಗುವ ಕನಸು ಕಂಡಿದ್ದ ಅವನು ಆಭರಣ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಒಂದು ತಿಂಗಳು ಅಂಗಡಿಯ ಮೇಲೆ ನಿಗಾ ಇಟ್ಟಿದ್ದನು ಎನ್ನಲಾಗಿದೆ. ಕೊತ್ತನೂರಿನಲ್ಲಿ ವಾಸಿಸುತ್ತಿದ್ದ ಅನೂಪ್ ಸಿಂಗ್ ಜೊತೆ ಸೇರಿ ದರೋಡೆ ಪ್ಲಾನ್ ಹಂಚಿಕೊಂಡನು. ನಂತರ ಈ ಜೋಡಿ ರಾಜಸ್ಥಾನದ ಇತರ ಸಹಚರರನ್ನು ಸಂಪರ್ಕಿಸಿ ಯೋಜನೆಯನ್ನು ಕಾರ್ಯಗತಗೊಳಿಸಲು ನಗರಕ್ಕೆ ಬರಲು ಕೇಳಿಕೊಂಡಿದ್ದರು.

