

ಹಾಸನ: ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ಕಾಣೆಯಾಗಿರುವ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಲ್ಕೆರೆ ಬಳಿ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿ ಪ್ರಿಯಾಂಕಾ (28) ನಾಪತ್ತೆಯಾದ ಮಹಿಳೆ.
ಈಕೆ ನಾಪತ್ತೆಯಾದ ಸ್ಥಳದಲ್ಲಿ ಅವರ ಬಟ್ಟೆಗಳು, ಚಪ್ಪಲಿ ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿವೆ. ಈಕೆಯನ್ನು ಯಾರೋ ಕೊಲೆ ಮಾಡಿ ಸಮೀಪದಲ್ಲಿರುವ ಕೆರೆಗೆ ಶವ ಎಸೆದಿರುವ ಅನುಮಾನದ ಮೇರೆಗೆ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸದ್ಯ ಪೊಲೀಸರು ಪ್ರಸ್ತುತ ಎಲ್ಲಾ ತಾಂತ್ರಿಕ ವಿವರಗಳನ್ನು ಕಲೆಹಾಕುತ್ತಿರುವುದಾಗಿ ಎಸ್ಪಿ ಶುಭಾನ್ವಿತಾ ಮಾಹಿತಿ ನೀಡಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಪ್ರಿಯಾಂಕ ಯಲಿಯೂರು ಗ್ರಾಮದ ರುದ್ರೇಶ್ ಅವರೊಂದಿಗೆ ವಿವಾಹವಾಗಿದ್ದು, ಒಬ್ಬ ಗಂಡು ಮಗನಿದ್ದಾನೆ. ಫೆಬ್ರವರಿ 12ರಂದು ಚಿಕ್ಕಮಗಳೂರಿನ ಮದುವೆ ಕಾರ್ಯಕ್ರಮಕ್ಕೆ ಪ್ರಿಯಾಂಕ ಆಗಮಿಸಿದ್ದರು.
ಪ್ರಿಯಾಂಕ ಮೈ ಮೇಲೆ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಇದ್ದವು. ಒಡವೆ ಸಮೇತ ಪ್ರಿಯಾಂಕಾ ನಾಪತ್ತೆಯಾಗಿದ್ದರು. ಫೆಬ್ರವರಿ 12ರ ರಾತ್ರಿ 8 ಗಂಟೆಗೆ ಪ್ರಿಯಾಂಕಾ ಮಿಸ್ಸಿಂಗ್ ಆಗಿದ್ದಾರೆ. ಫೆಬ್ರವರಿ 12 ರ ರಾತ್ರಿ 7.30 ರ ಸುಮಾರಿಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿ ಕೊನೆಯ ಭಾರಿಗೆ ಪ್ರಿಯಾಂಕಾ ಮಾತನಾಡಿದ್ದಾರೆ. ಆದಾದ ಬಳಿಕ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ. ಯಾರೋ ದುಷ್ಕರ್ಮಿಗಳು ಪ್ರಿಯಾಂಕಾರನ್ನು ಕೊಲೆ ಮಾಡಿ ಕಲ್ಕೆರೆ ಗ್ರಾಮದ ಕೆರೆಗೆ ಶವ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಶುಕ್ರವಾರ ರುದ್ರೇಶ್ ಬೇಲೂರು ಪೊಲೀಸರಿಗೆ ಕಂಪ್ಲೆಂಟ್ ಕೊಡಲು ಬಂದಿದ್ದು, ಅರೇಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ ಎಂದು ಕಳುಹಿಸಿದ್ದಾರೆ. ನಂತರ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿದೆ.ಪ್ರಿಯಾಂಕ ಫೋನ್ ಕಡೆಯದಾಗಿ ಕಲ್ಕೆರೆ ಸಮೀಪವೇ ಸ್ವಿಚ್ ಆಫ್ ಆಗಿದ್ದು, ಆ ಮಾರ್ಗದ ಎಲ್ಲಾ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಿಯಾಂಕ ದಿಢೀರ್ ಕಣ್ಮೆರೆಯಿಂದ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.
Advertisement