

ಶಿವಮೊಗ್ಗ: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ (ಕೆಎಸ್ಸಿಎ) ಶನಿವಾರ ಸರ್ಕಾರವು ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ 37,000 ಕೋಟಿ ರೂ. ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ ಮಾರ್ಚ್ 5 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್ಸಿಎ ಅಧ್ಯಕ್ಷ ಆರ್. ಮಂಜುನಾಥ್ ಅವರು, 'ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಆದರೆ ಶಾಂತಿಯುತ ಪ್ರತಿಭಟನೆ ನಡೆಸಲು ಯೋಜಿಸುತ್ತಿರುವುದಾಗಿ ಹೇಳಿದರು.
ಅಂತೆಯೇ ಪ್ರಾಥಮಿಕ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಮಾತನಾಡುತ್ತಾ, 'ಸರ್ಕಾರವನ್ನು ಮನವೊಲಿಸಲು ಗುತ್ತಿಗೆದಾರರ ಕುಟುಂಬಗಳು ಸಹ ಪ್ರತಿಭಟನೆ ನಡೆಸಲಿವೆ' ಎಂದು ಹೇಳಿದರು.
"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 37,000 ಕೋಟಿ ರೂ. ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಸರ್ಕಾರ ನಿರಾಸಕ್ತಿ ವಹಿಸಿದರೆ, ರಾಜ್ಯಾದ್ಯಂತ ಗುತ್ತಿಗೆದಾರರು ಕೆಲಸವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಾರೆ" ಎಂದು ಅವರು ಹೇಳಿದರು.
ಸಂಘವು ಸರ್ಕಾರಕ್ಕೆ 100 ಪುಟಗಳ ಜ್ಞಾಪಕ ಪತ್ರವನ್ನು ಸಲ್ಲಿಸಿದೆ ಮತ್ತು ಸಂಬಂಧಪಟ್ಟ ಸಚಿವರು ಅದನ್ನು ಚರ್ಚಿಸಲು ಸಭೆಗಳನ್ನು ಕರೆದಿದ್ದಾರೆ. ಆದರೆ ಸಿಎಂ ಈ ವಿಷಯದ ಬಗ್ಗೆ ಇನ್ನೂ ಮೌನ ಮುರಿದಿಲ್ಲ.
ಇನ್ನು ರಾಜ್ಯದಲ್ಲಿ ಅನೇಕ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿದ್ದಾರೆ. ಸಂಕಷ್ಟದಲ್ಲಿರುವ ಗುತ್ತಿಗೆದಾರರು ತಮ್ಮ ಸಂಗಾತಿಗಳು ಮತ್ತು ಇತರ ಕುಟುಂಬ ಸದಸ್ಯರಿಗೆ ಸೇರಿದ ಆಭರಣಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೆಲಸಗಳು ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಒತ್ತೆ ಇಟ್ಟಿದ್ದಾರೆ.
ಇತರ ರಾಜ್ಯಗಳು ತಮ್ಮ ಗುತ್ತಿಗೆದಾರರ ಕುಂದುಕೊರತೆಗಳನ್ನು ಆಲಿಸಿದರೂ, ಕರ್ನಾಟಕ ಸರ್ಕಾರ ಅಷ್ಟೇನೂ ಕಾಳಜಿ ವಹಿಸುತ್ತಿಲ್ಲ ಎಂದು ಮಂಜುನಾಥ್ ಹೇಳಿದರು. ಸಂಘದ ಕಾರ್ಯಾಧ್ಯಕ್ಷ ಕೆ.ಎಸ್. ಶಾಂತೇ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು.
Advertisement