

ಬೆಂಗಳೂರು: ಬೆಂಗಳೂರಿನ ಬಿಡದಿಯ ಖಾಸಗಿ ಅಂತರರಾಷ್ಟ್ರೀಯ ಶಾಲೆಯ 37 ವರ್ಷದ ಭಾಷಾ ಶಿಕ್ಷಕಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.
ತನ್ನ ಸಾವಿಗೆ ಪ್ರಾಂಶುಪಾಲರು ಮತ್ತು ಇನ್ನೊಬ್ಬ ಶಿಕ್ಷಕಿ ಕಾರಣ ಎಂದು ಡೆತ್ ನೋಟ್ ಬರೆದು ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಶಿಕ್ಷಕಿಯ ಪತಿ, ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲರು ಮತ್ತು ಮತ್ತೊಬ್ಬ ಶಿಕ್ಷಕಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಾಂಶುಪಾಲ ಪ್ರಶಾಂತ್ ಎಲ್ ಅವರನ್ನು ಬಂಧಿಸಿದ್ದಾರೆ. ಆದರೆ ಶಿಕ್ಷಕಿಯ ಪಾತ್ರ ದೃಢಪಡಿಸಲು ಸಾಧ್ಯವಾಗದ ಕಾರಣ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಭಾಷಾ ಶಿಕ್ಷಕಿ ಸರಸ್ವತಿ ಅವರು ಶುಕ್ರವಾರ ಮಧ್ಯಾಹ್ನ 3.50 ರಿಂದ 4.35 ರ ನಡುವೆ ಬಿಡದಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಶಿಕ್ಷಕಿಯ ಮಗ ಕೂಡ ಅದೇ ಶಾಲೆಯಲ್ಲಿ ಓದುತ್ತಿದ್ದ. ಕುಟುಂಬ ಕಾರ್ಯದ ಕಾರಣ ಮೃತ ಶಿಕ್ಷಕಿಯ ಮಗ ಹೋಮ್ ವರ್ಕ್ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಆತನ ತರಗತಿ ಶಿಕ್ಷಕಿ ಆತನಿಗೆ ಹೊಡೆದಿದ್ದು, ದೇಹದಾದ್ಯಂತ ಗಾಯಗಳಾಗಿದ್ದವು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸರಸ್ವತಿ ತನ್ನ ಮಗನ ತರಗತಿ ಶಿಕ್ಷಕಿ ಮತ್ತು ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ, ಅವರು ಅವಮಾನಿಸಿದ್ದಾರೆ ಎಂದು ಹೇಳಲಾಗುತ್ತದೆ. ಇದರಿಂದ ಬೇಸತ್ತ ಮಹಿಳೆ ಸೀಲಿಂಗ್ ಫ್ಯಾನ್ಗೆ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ 3.30 ರ ಸುಮಾರಿಗೆ, ಸಂತ್ರಸ್ತೆ ಶಿಕ್ಷಕಿ, ತನ್ನ ಪತಿ ವಿನೋದ್ ಕುಮಾರ್ಗೆ ಕರೆ ಮಾಡಿ, ತಾನು ಯಾವುದೇ ತಪ್ಪು ಮಾಡದಿದ್ದರೂ, ಪ್ರಾಂಶುಪಾಲರು ತನ್ನನ್ನು ನಿಂದಿಸಿ ಅವಮಾನಿಸಿದ್ದರಿಂದ ಬೇಸರಗೊಂಡಿರುವುದಾಗಿ ತಿಳಿಸಿದ್ದಾಳೆ. ಈ ವಳೆ ಪತಿ, ತರಗತಿ ಮುಗಿಸಿ ಹಿಂತಿರುಗುವುದಾಗಿ ಪತ್ನಿಗೆ ತಿಳಿಸಿದ್ದಾರೆ.
ಮನೆಗೆ ಧಾವಿಸಿದ ನಂತರ, ಪತಿ ಬಾಗಿಲು ಒಡೆದು ನೋಡಿದಾಗ ಪತ್ನಿ ಸೀರೆಯಿಂದ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಅವರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು ಮತ್ತು ವೈದ್ಯರು ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಅಧಿಕಾರಿಯೊಬ್ಬರು, “ಮನೆಯನ್ನು ಪರಿಶೀಲಿಸುವಾಗ, ಪ್ರಶಾಂತ್ ಮತ್ತು ತರಗತಿ ಶಿಕ್ಷಕಿ, ಆಕೆಯ ಸಾವಿಗೆ ಕಾರಣ ಎಂದು ಬರೆದಿರುವ ಡೆತ್ ನೋಟ್ ಕಂಡುಬಂದಿದೆ. ಪ್ರಾಂಶುಪಾಲರು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಅವಮಾನಿಸಿದ್ದಾರೆ ಮತ್ತು ಶಾಲಾ ಸಿಬ್ಬಂದಿಯ ಮುಂದೆ ಎರಡು ಬಾರಿ ಅವಮಾನಿಸಿದ್ದಾರೆ ಎಂದು ಮೃತ ಮಹಿಳೆ ಆರೋಪಿಸಿದ್ದಾರೆ.
ಬಿಎನ್ಎಸ್ ಸೆಕ್ಷನ್ 108 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಾಂಶುಪಾಲರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement