24 ಗಂಟೆ ಕಾರ್ಯನಿರ್ವಹಿಸುತ್ತಿರುವ ಬಾರ್'ಗಳು: ಸಾಮಾಜಿಕ ಜೀವನಕ್ಕೆ ಧಕ್ಕೆ, ಕ್ರಮಕ್ಕೆ BJP ಶಾಸಕ ಒತ್ತಾಯ

ರಾಜ್ಯದಲ್ಲಿ ಅನುಮತಿತ ಸಮಯವನ್ನು ಮೀರಿ ಅನೇಕ ಬಾರ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಬಾರ್‌ಗಳು 24 ಗಂಟೆಗಳ ಕಾಲ ತೆರೆದಿರುತ್ತವೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದ ಹಲವು ಮದ್ಯ ಅಂಗಡಿ ಹಾಗೂ ಬಾರ್‌ಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಮೂಲಕ ಅಬಕಾರಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹಿಸಿದೆ.

ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು, ರಾಜ್ಯದಲ್ಲಿ ಅಬಕಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಆದಾಯ ಸಂಗ್ರಹವು ಸಾಮಾಜಿಕ ಹಿತಾಸಕ್ತಿಗೆ ಧಕ್ಕೆಯಾಗಬಾರದು. ಬೆಳಗಿನ ಸಮಯ ಪ್ರತೀ ಕುಟುಂಬಕ್ಕೂ ಅತ್ಯಂತ ಪ್ರಮುಖ ಸಮಯ. ಮಕ್ಕಳು ಶಾಲೆಗೆ ಸಿದ್ಧಗೊಳ್ಳುವ ಸಮಯ, ಗೃಹಿಣಿಯರು ಮನೆಯ ಕೆಲಸಗಳಲ್ಲಿ ತೊಡಗಿರುವ ವೇಳೆ, ಮದ್ಯ ಅಂಗಡಿಗಳ ಮುಂದೆ ಪುರುಷರು ಮತ್ತು ಯುವಕರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ನೆರೆಹೊರೆಯ ಶಾಂತಿಗೆ ಭಂಗ ಉಂಟುಮಾಡುತ್ತವೆ ಹಾಗೂ ಕುಟುಂಬ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ರಾಜ್ಯದಲ್ಲಿ ಅನುಮತಿತ ಸಮಯವನ್ನು ಮೀರಿ ಅನೇಕ ಬಾರ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಬಾರ್‌ಗಳು 24 ಗಂಟೆಗಳ ಕಾಲ ತೆರೆದಿರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

File photo
ಬೈರತಿ ವಿರುದ್ಧ ಅವಹೇಳನಕಾರಿ ಹೇಳಿಕೆ: BJP ಶಾಸಕ ಸುರೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ, ಮನೆ ಮುಂದೆ ಪೋಸ್ಟರ್ ಅಂಟಿಸಿ ಪ್ರತಿಭಟನೆ

“ಒನ್ ವಾರ್ಡ್ ವಾಕ್ ಎ ಡೇ” ಕಾರ್ಯಕ್ರಮದ ವೇಳೆ ನನ್ನ ಕ್ಷೇತ್ರದಲ್ಲಿ ಬೆಳಿಗ್ಗೆ 6.30ಕ್ಕೆ ಬಾರ್ ವೊಂದು ಕಾರ್ಯನಿರ್ವಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಕೂಡಲೇ ಅದನ್ನು ಬಂದ್ ಮಾಡಿಸಲಾಯಿತು. ನಿಯಮಗಳ ಬಗ್ಗೆ ಅಧಿಕಾರಿಗಳು ಮತ್ತು ಬಾರ್ ಮಾಲೀಕರು ಅರಿವಿಲ್ಲದಂತೆ ವರ್ತಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮದ್ಯಾಸಕ್ತಿ ಕುಟುಂಬಗಳ ಮೇಲೆ ಬೀರುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಕುರಿತು ಗಮನ ಸೆಳೆದಿರುವ ಅವರು, ಮಧ್ಯಮ ವರ್ಗ ಹಾಗೂ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಮಹಿಳೆಯರು ಇದರಿಂದ ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ಕುಟುಂಬಗಳ ಹಣಕಾಸು ಹಾಗೂ ಮಾನಸಿಕ ಸ್ಥಿತಿಗೆ ಇದು ಭಾರೀ ಹೊಡೆತ ನೀಡುತ್ತಿದೆ. ರಾಜ್ಯ ಸರ್ಕಾರಕ್ಕೆ ದೊರೆಯುವ ಆದಾಯಕ್ಕಿಂತ ಕುಟುಂಬಗಳ ಸಂಕಷ್ಟವೇ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮದ್ಯಾಸಕ್ತಿಯಿಂದ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳು, ವಿಶೇಷವಾಗಿ ಗೃಹಿಣಿಯರು ಬೀದಿಗಿಳಿದು ಪ್ರತಿಭಟನೆ ನಡೆಸುವ ಪರಿಸ್ಥಿತಿ ಉಂಟಾಗಬಹುದು. ಹೀಗಾಗಿ ಅಬಕಾರಿ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಸರ್ಕಾರ ಹಾಗೂ ಅಧಿಕಾರಿಗಳು ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com