

ಬೆಂಗಳೂರು: ಖಾಸಗಿ ಡಯಾಗ್ನೋಸ್ಟಿಕ್ ಸಂಸ್ಥೆಯೊಂದು 2019ರಿಂದ 143 ಕೋಟಿ ರೂ.ಬಾಕಿ ಪಾವತಿ ಆಗಿಲ್ಲ ಎಂದು ಆರೋಪಿಸಿ ಸೇವೆ ಸ್ಥಗಿತಗೊಳಿಸಿರುವುದರಿಂದ ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ CT ಮತ್ತು MRI ಸ್ಕ್ಯಾನ್ ಸೇವೆಗಳು ವ್ಯತ್ಯಯಗೊಂಡಿವೆ.
ಫೆ.18ರಿಂದ ಸೇವೆ ಬಂದ್ ಆಗಿದ್ದು, ಇದರಿಂದ ನೂರಾರು ರೋಗಿಗಳು ಆಸ್ಪತ್ರೆಗಳ ಮುಂದೆ ಅಸಹಾಯಕರಾಗಿ ನಿಲ್ಲುವಂತಾಗಿದೆ.
ಈ ನದುವೆ ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ಸರಿಯಾದ ಪರಿಶೀಲನೆ ನಂತರವೇ ಹಣ ಬಿಡುಗಡೆ ಮಾಡಲಾಗುವುದು. ಪ್ರತಿ ಪ್ರಕರಣದ ಪರಿಶೀಲನೆ ಇಲ್ಲದೆ ಸಾರ್ವಜನಿಕ ಹಣ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಅವರು, ಆರೋಗ್ಯ ಇಲಾಖೆ ಕಾರ್ಯ ಸ್ಥಗಿತಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಾರ್ವಜನಿಕ–ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 13 ಸರ್ಕಾರಿ ಆಸ್ಪತ್ರೆಗಳಿಗೆ ಈ ವ್ಯತ್ಯಯ ಪರಿಣಾಮ ಬೀರಿದೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ರೋಗಿಗಳನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಪಟ್ಟಿಯಲ್ಲಿರುವ ಖಾಸಗಿ ಕೇಂದ್ರಗಳು ಮತ್ತು ಸಮೀಪದ ಸ್ಕ್ಯಾನ್ ಕೇಂದ್ರಗಳಿಗೆ ರೆಫರ್ ಮಾಡಲಾಗುತ್ತಿದೆ. ಉಳಿದ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ ಬ್ಯಾಕ್ಅಪ್ ವ್ಯವಸ್ಥೆ ಕಲ್ಪಿಸಲಾಗುವುದು. ಅರ್ಹ ರೋಗಿಗಳಿಗೆ ಉಚಿತ ಸ್ಕ್ಯಾನ್ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಅತಿಯಾದ ಸ್ಕ್ಯಾನ್ ಬಿಲ್ಲಿಂಗ್ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ವೈದ್ಯರ ಪ್ರಮಾಣಪತ್ರ ಹಾಗೂ ಸ್ಕ್ಯಾನ್ ಪ್ರೋಟೋಕಾಲ್ ಕಡ್ಡಾಯಗೊಳಿಸಲಾಗಿದೆ. ಇದರ ಪರಿಣಾಮ CT ಸ್ಕ್ಯಾನ್ ವೆಚ್ಚದಲ್ಲಿ ಶೇ.76 ಮತ್ತು MRI ವೆಚ್ಚದಲ್ಲಿ ಶೇ.64ರಷ್ಟು ಕಡಿತವಾಗಿದ್ದು, ತಿಂಗಳಿಗೆ ಸುಮಾರು ರೂ.18 ಕೋಟಿ ಉಳಿತಾಯವಾಗುತ್ತಿದೆ. ಕಳೆದ 18 ತಿಂಗಳಲ್ಲಿ ರೂ.200 ಕೋಟಿ ಕ್ಕೂ ಹೆಚ್ಚು ಉಳಿತಾಯವಾಗಿದೆ ಎಂದು ಹೇಳಿದರು.
ಹಿಂದಿನ ದಿನಗಳಲ್ಲಿ ಬಿಲ್ಲಿಂಗ್ ವ್ಯವಸ್ಥೆ ನಿಯಂತ್ರಣವಿಲ್ಲದೆ ನಡೆಯುತ್ತಿದ್ದುದರಿಂದ ಅತಿಯಾದ ಪಾವತಿ ಆಗಿತ್ತು. ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ನಿಧಿಗಳ ವಿಳಂಬದ ನಡುವೆಯೂ ರಾಜ್ಯ ಸರ್ಕಾರ ಸ್ವಂತ ಸಂಪನ್ಮೂಲಗಳಿಂದ ಎಲ್ಲಾ ಆರೋಗ್ಯ ಯೋಜನೆಗಳಿಗೆ ಹಣ ಒದಗಿಸುತ್ತಿದೆ ಎಂದು ಹೇಳಿದರು.
Advertisement