ಗಬ್ಬೆದ್ದು ನಾರುತ್ತಿದೆ ಮೆಜೆಸ್ಟಿಕ್‌ ಬಸ್ ನಿಲ್ದಾಣ: ಪಾದಚಾರಿ ಮಾರ್ಗಗಳಲ್ಲಿ ದುರ್ನಾತ; ಎಲೆಲ್ಲೂ ಗುಟ್ಕಾ– ಪಾನ್ ಉಗುಳಿದ ಕಲೆ, ಪ್ರಯಾಣಿಕರ ಆಕ್ರೋಶ

ಮೆಜೆಸ್ಟಿಕ್ ಕೇವಲ ಒಂದು ಬಸ್ ನಿಲ್ದಾಣವಲ್ಲ, ಅದು ಬೆಂಗಳೂರು ನಗರ ಪ್ರವೇಶಿಸುವವರಿಗೆ ಪ್ರಮುಖ ದ್ವಾರ. ಇಲ್ಲಿ ಕಾಣುವ ಅಸ್ವಚ್ಛತೆ ನಗರ ಸಂಸ್ಕೃತಿ ಮತ್ತು ನಾಗರಿಕ ಶಿಸ್ತಿನ ಪ್ರತಿಬಿಂಬವಾಗುತ್ತದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರು ನಗರಕ್ಕೆ ಬರುವವರಿಗೆ ಮೊದಲ ಸ್ವಾಗತ ನೀಡುವ ಸ್ಥಳ ಎಂದರೆ ಅದು ಕೇಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್). ರೈಲು, ಮೆಟ್ರೋ, ಬಸ್—all-in-one ಟ್ರಾನ್ಸ್‌ಪೋರ್ಟ್ ಹಬ್ ಆಗಿರುವ ಈ ಪ್ರದೇಶ, ನಗರದ ಪ್ರತಿಬಿಂಬವೆಂದೇ ಹೇಳಬಹುದು. ಆದರೆ, ನಗರದ ಹೃದಯ ಭಾಗವಾಗಿರುವ ಈ ಪ್ರದೇಶದಲ್ಲಿಯೇ ಅಸ್ವಚ್ಛತೆ, ದುರ್ವಾಸನೆ ಮತ್ತು ನಾಗರಿಕ ಶಿಸ್ತಿನ ಕೊರತೆ ಕಂಡು ಬರುತ್ತಿದ್ದು, ಇದು ಗಾರ್ಡನ್ ಸಿಟಿ ಹೆಸರಿಗೆ ಧಕ್ಕೆ ತರುತ್ತಿದೆ.

ಮೆಜೆಸ್ಟಿಕ್‌ನ ಬಿಎಂಟಿಸಿ ನಿರ್ಗಮನ ದ್ವಾರದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ, ಮೆಟ್ರೋ ನಿರ್ಗಮನದ ಎದುರಿನ ಸ್ಕೈವಾಕ್ ಬಳಿ ಗುಟ್ಕಾ ಕಲೆಗಳು ಕಂಡು ಬಂದಿದ್ದು, ಮೂತ್ರ ವಿಸರ್ಜನೆಯಿಂದಾಗಿ ದುರ್ನಾತ ಹೊಡೆಯುತ್ತಿದೆ.

ದೂರದಿಂದ ಸ್ವಚ್ಛವಾಗಿ ಕಾಣುವ ಪಾದಚಾರಿ ಮಾರ್ಗಗಳು ಹತ್ತಿರ ಬಂದಾಗ ದುರ್ವಾಸನೆ ಹೊಡೆಯುತ್ತವೆ. ಬಸ್ ನಿಲ್ದಾಣದಿಂದ ಕೆಎಸ್ಆರ್ ವೃತ್ತದವರೆಗೆ ಮತ್ತು ಮೆಟ್ರೋ ನಿಲ್ದಾಣದ ನಿರ್ಗಮನದವರೆಗಿನ ಪ್ರದೇಶದಲ್ಲಿ ಅನೈರ್ಮಲ್ಯ ನಿರಂತರವಾಗಿ ಕಂಡು ಬರುತ್ತವೆ.

ಈ ಪಾದಚಾರಿ ಮಾರ್ಗಗಳಲ್ಲಿ ನಡೆಯುವಾಗ ಸಾರ್ವಜನಿಕ ಶೌಚಾಲಯದ ಬಳಿ ನಡೆಯುವ ಅನುಭವವಾಗುತ್ತಿದೆ ಪ್ರಯಾಣಿಕರು ಮತ್ತು ಪಾದಚಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಇಳಿದು ರೈಲು ನಿಲ್ದಾಣದತ್ತ ಹೋಗುತ್ತಿದ್ದ ಪ್ರಯಾಣಿಕ ಜೆ. ನಥಾನಿಯಲ್ ಎಂಬುವವರು ಮಾತನಾಡಿ, ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸಾರ್ವಜನಿಕ ಶೌಚಾಲಯದ ಬಳಿ ನಡೆದಂತೆ ಭಾಸವಾಯಿತು. ಆಶ್ಚರ್ಯಕರ ವಿಚಾರವೆಂದರೆ ಅದು ಶೌಚಾಲಯವಿರುವ ಪ್ರದೇಶವಲ್ಲ, ಜನರು ಬಸ್ ನಿಲ್ದಾಣದಿಂದ ಹೊರಬರಲು ಬಳಸುವ ಪಾದಚಾರಿ ಮಾರ್ಗ ಎಂದು ಹೇಳಿದ್ದಾರೆ.

File photo
ಮೆಜೆಸ್ಟಿಕ್​​​​ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಬ್​ಅರ್ಬನ್ ರೈಲು ಯೋಜನೆಗೆ ಗ್ರೀನ್ ಸಿಗ್ನಲ್!

ಮೆಟ್ರೋ ನಿಲ್ದಾಣದಿಂದ ಆಟೋ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಶ್ರೀ ದೀಪಾಂಜಲಿ ಅವರು ಮಾತನಾಡಿ, ಸ್ಕೈವಾಕ್ ಇಳಿದ ನಂತರ, ಪಾದಚಾರಿ ಮಾರ್ಗದಲ್ಲಿ ನಡೆಯುವುದೇ ಅತ್ಯಂತ ಕಠಿಣಕರ ಟಾಸ್ಕ್. ಎಲ್ಲೆಡೆ ಗುಟ್ಕಾ ಉಗುಳಿರುವ ಕಲೆಗಳು, ಮೂತ್ರದ ದುರ್ನಾತ ಹೊಡೆಯುತ್ತದೆ ಎಂದು ತಿಳಿಸಿದ್ದಾರೆ.

ನಿರ್ವಹಣೆಯ ಹೊಣೆ ಹೊತ್ತಿರುವ ಅಧಿಕಾರಿಗಳು ಮಾತನಾಡಿ, ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಸುತ್ತಮುತ್ತಲಿನ ಎಲ್ಲಾ ಶೌಚಾಲಯಗಳನ್ನು ಉಚಿತಗೊಳಿಸಲಾಗಿದೆ. ಸುಮಾರು 4–5 ಸಾರ್ವಜನಿಕ ಶೌಚಾಲಯಗಳು ಲಭ್ಯವಿದ್ದು, ಸೌಲಭ್ಯ ಕೊರತೆ ಇಲ್ಲ. ನಿಜವಾದ ಸಮಸ್ಯೆ ಇರುವುದು ಜನರ ವರ್ತನೆಯಲ್ಲಿ ಎಂದು ಹೇಳಿದ್ದಾರೆ.

ಮೆಜೆಸ್ಟಿಕ್ ಕೇವಲ ಒಂದು ಬಸ್ ನಿಲ್ದಾಣವಲ್ಲ, ಅದು ಬೆಂಗಳೂರು ನಗರ ಪ್ರವೇಶಿಸುವವರಿಗೆ ಪ್ರಮುಖ ದ್ವಾರ. ಇಲ್ಲಿ ಕಾಣುವ ಅಸ್ವಚ್ಛತೆ ನಗರ ಸಂಸ್ಕೃತಿ ಮತ್ತು ನಾಗರಿಕ ಶಿಸ್ತಿನ ಪ್ರತಿಬಿಂಬವಾಗುತ್ತದೆ. ಐಟಿ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಹೃದಯದಲ್ಲೇ ಈ ರೀತಿಯ ಪರಿಸ್ಥಿತಿ ನಗರ ಇಮೇಜ್‌ಗೆ ಧಕ್ಕೆ ತರುತ್ತದೆ.

ಅಸ್ವಚ್ಛತೆ ಸಮಸ್ಯೆಗೆ ಅಧಿಕಾರಿಗಳು ಮಾತ್ರವಲ್ಲ, ನಾಗರಿಕರೂ ಕೂಡ ಹೊಣೆಗಾರರಾಗುತ್ತಾರೆ. ಸ್ವಚ್ಛ ಶೌಚಾಲಯ ಬಳಕೆ, ಗುಟ್ಕಾ ಉಗುಳುವ ಅಭ್ಯಾಸ ತ್ಯಜನೆ, ಸಾರ್ವಜನಿಕ ಸ್ಥಳಗಳ ಮೇಲೆ ಗೌರವ—ಇವೆಲ್ಲ ನಾಗರಿಕ ಶಿಸ್ತಿನ ಮೂಲಭೂತ ಅಂಶಗಳಾಗಿವೆ.

ನಗರದ ಅಭಿವೃದ್ಧಿ ಕೇವಲ ಐಟಿ ಪಾರ್ಕ್, ಮೆಟ್ರೋ ರೈಲು ಅಥವಾ ಫ್ಲೈಓವರ್‌ಗಳಿಂದ ಮಾತ್ರ ಸಾಧ್ಯವಿಲ್ಲ. ಸ್ವಚ್ಛತೆ, ಶಿಸ್ತು ಮತ್ತು ನಾಗರಿಕ ಸಂಸ್ಕೃತಿ ಕೂಡ ನಗರದ ಪ್ರಗತಿಯ ಪ್ರಮುಖ ಅಂಶಗಳಾಗಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಹೃದಯ ಭಾಗವಾಗಿರುವ ಮೆಜೆಸ್ಟಿಕ್ ಸ್ವಚ್ಛವಾದರೆ, ಬೆಂಗಳೂರು ನಿಜವಾಗಿ ಜಾಗತಿಕ ನಗರವಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com