

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಸಿ ಬಳಿಯಲಾಗಿದೆ ಎಂಬ ಆರೋಪಗಳ ಬಗ್ಗೆ ಬೆಳಗಾವಿ ನಗರ ಪೊಲೀಸರು ಸ್ಪಷ್ಟನೆ ನೀಡಿದ್ದು, ಪ್ರತಿಮೆಗೆ ಯಾರು ಮಸಿ ಬಳಿದಿಲ್ಲ. ಬದಲಿಗೆ ಮರದಿಂದ ದ್ರವ ಪದಾರ್ಥ ಬಿದ್ದಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಮಾಹಿತಿ ನೀಡಿದ್ದು, ಫೆಬ್ರವರಿ 19ರಂದು ಪೀರನವಾಡಿ ಸಮೀಪದ ರಾಯಣ್ಣ ಪ್ರತಿಮೆಯ ಮೇಲೆ ಕಪ್ಪು ಮಸಿ ಬಳಿದಿದ್ದಾರೆಂಬುದರ ಬಗ್ಗೆ ಇಲಾಖೆ ಮಾಹಿತಿ ಬಂದಿತ್ತು. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಘಟನೆಯ ಹಿನ್ನೆಲೆಯಲ್ಲಿ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಫೆಬ್ರವರಿ 18ರ ಸಂಜೆಯಿಂದ ಫೆಬ್ರವರಿ 19ರ ಬೆಳಿಗ್ಗೆ 7 ಗಂಟೆಯವರೆಗೆ ಯಾವುದೇ ವ್ಯಕ್ತಿ ಪ್ರತಿಮೆಯ ಬಳಿ ಬಂದು ಮಸಿ ಎರಚಿದ ದೃಶ್ಯ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಮೆಯ ಮೇಲಿನ ಕಲೆಗಳು, ಸಮೀಪದ ರಸ್ತೆ ಮೇಲ್ಮೈ ಮತ್ತು ಹತ್ತಿರದ ಮರದ ಎಲೆಗಳ ಮೇಲೆ ಕಂಡುಬಂದ ಅಂಟುವ ಪದಾರ್ಥದ ಮಾದರಿಗಳನ್ನು ಪ್ರಾದೇಶಿಕ ಫಾರೆನ್ಸಿಕ್ ವಿಜ್ಞಾನ ಪ್ರಯೋಗಾಲಯ (RFSL)ಗೆ ಕಳುಹಿಸಲಾಗಿತ್ತು. ಪ್ರಯೋಗಾಲಯ ವರದಿಯಲ್ಲಿ ಅದು ಸಸ್ಯ ಮೂಲದ ಮಸಿ ಎಂದು ವರದಿ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಜನರು ಊಹಾಪೋಹಗಳಿಗೆ ಕಿವಿಗೊಡದೆ, ಶಾಂತಿ ಕಾಪಾಡಬೇಕು ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
Advertisement