

ಬೆಂಗಳೂರು: ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸೋದರ ಅಳಿಯ ಅನಿರುದ್ಧ್ ರಮೇಶ್ ಅವರ ಪತ್ತೆಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ಸಹಾಯ ಕೋರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಭಾಸ್ಕರ್ ರಾವ್ ಅವರು, ಅನಿರುದ್ಧ್ ದಕ್ಷಿಣ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹನುಮಂತನಗರದಲ್ಲಿ ವಾಸವಿದ್ದರು. ಅವರು ಸುಮಾರು 6 ಅಡಿ 2 ಇಂಚು ಎತ್ತರದವರು ಹಾಗೂ ಶಾಂತ ಸ್ವಭಾವದ ವ್ಯಕ್ತಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ಸೋದರಳಿಯ ಎಲ್ಲಿದ್ದಾನೆಂಬುದು ಇನ್ನೂ ತಿಳಿದಿಲ್ಲ. ಸಾಮಾಜಿಕ ಜಾಲತಾಣ ವ್ಯಾಪ್ತಿ ಬಹಳ ದೊಡ್ಡದಿದ್ದು, ಹೀಗಾಗಿ, ಸಹಾಯ ಕೋರಲಾಗಿದೆ ಎಂದು ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.
ಅನಿರುದ್ಧ್ ನಾಪತ್ತೆಯಾಗುವ ವೇಳೆ ಖಾತೆಯಿಂದ ರೂ.9,000 ಡ್ರಾ ಆಗಿದೆ. ಅದನ್ನು ಹೊರತುಪಡಿಸಿದರೆ ಆತನ ವಾಹನ, ಕ್ರೆಡಿಟ್ ಕಾರ್ಡ್, ಮೊಬೈಲ್ ಫೋನ್ ಕೂಡ ತೆಗೆದುಕೊಂಡು ಹೋಗಿಲ್ಲ. ಯಾವುದೇ ಪತ್ರ ಕೂಡ ಬರೆದಿಲ್ಲ ಎಂದು ಹೇಳಿದ್ದಾರೆ.
ಅನಿರುದ್ಧ್ ಅವರ ಸಹೋದರಿ ಅಪೂರ್ವ ಅವಿನಾಶ್ ಮಾತನಾಡಿ, ಫೆಬ್ರವರಿ 17 ರಂದು ನಾಪತ್ತೆ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ದೂರಿನ ಪ್ರಕಾರ, ಅನಿರುದ್ಧ್ ಜಯನಗರದ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಫೆಬ್ರವರಿ 16 ರಂದು ಸಂಜೆ 4.45 ರಿಂದ 5 ಗಂಟೆಯ ನಡುವೆ ತಮ್ಮ ಕೆಲಸದ ಸ್ಥಳದಿಂದ ಹೊರಬಂದ ನಂತರ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅನಿರುದ್ಧ್ ತಮ್ಮ ಲ್ಯಾಪ್ಟಾಪ್ ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅನಿರುದ್ಧ ಅವರು ತಮ್ಮ ಕಾಲೇಜು ಬಳಿ ಕಾಣೆಯಾದ ಕಾರಣ ಪ್ರಕರಣವನ್ನು ತಿಲಕ್ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ
Advertisement