

ಮೈಸೂರು: ಮೈಸೂರು ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಕೊಯಂಬತ್ತೂರಿಗೆ ತೆರಳುವ ಅಂತರ್ರಾಜ್ಯ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಓರ್ವ ವ್ಯಕ್ತಿ ಮತ್ತು ಸಾರಿಗೆ ಅಧಿಕಾರಿಗಳ ನಡುವೆ ದೊಡ್ಡ ಜಟಾಪಟಿಯೇ ನಡೆದಿದೆ.
ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ, ಈ ವ್ಯಕ್ತಿ ತನ್ನನ್ನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಹೈಡ್ರಾಮಾ ನಡೆಸಿದ್ದಾನೆ. ಚಾಮರಾಜನಗರಕ್ಕೆ ಪ್ರತ್ಯೇಕ ಬಸ್ ಇದ್ದರೂ, ಈ ವ್ಯಕ್ತಿ ಕೊಯಂಬತ್ತೂರು ಬಸ್ಸಿನಲ್ಲಿ ರಿಸರ್ವ್ ಸೀಟ್'ನಲ್ಲಿ ಕುಳಿತಿದ್ದೂ ಅಲ್ಲದೆ, ಸಿಬ್ಬಂದಿ ಹಾಗೂ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆತ ಬಸ್ ಸಿಬ್ಬಂದಿಗೆ ಅವಮಾನಕಾರಿ ಪದಗಳನ್ನು ಬಳಸಿದ್ದು, “ನಾನು ಪೊಲೀಸ್ ಅಧಿಕಾರಿ, ನೀವು KSRTC ಸಿಬ್ಬಂದಿ ನನಗೆ ಏನೂ ಮಾಡುವುದಕ್ಕೆ ಆಗಲ್ಲ” ಎಂದು ದರ್ಪ ತೋರಿದ್ದಾನೆಂದು ಹೇಳಿದ್ದಾರೆ. ಅಲ್ಲದೆ, ಪ್ರಯಾಣಿಕರೊಂದಿಗೆ ಕೂಡ ಜಗಳವಾಡಿ, ಅಶ್ಲೀಲ ಭಾಷೆ ಬಳಸಿದ ಎಂದು ಹೇಳಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಆತ ಸರ್ಕಾರಿ ನೌಕರ ಅಥವಾ ಪೊಲೀಸ್ ಅಧಿಕಾರಿಯಾಗಿದ್ದರೆ ಶಿಸ್ತು ಮತ್ತು ನಡವಳಿಕೆ ಅತ್ಯಂತ ಮುಖ್ಯ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಈ ವ್ಯಕ್ತಿಯ ಗುರುತು ಮತ್ತು ಪೊಲೀಸ್ ಅಧಿಕಾರಿಯಾಗಿರುವುದರ ಕುರಿತು ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು KSRTC ಸಿಬ್ಬಂದಿ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ
ಆರೋಪಿ ಪ್ರಯಾಣಿಕನ ಸ್ಪಷ್ಟನೆ
ಇನ್ನು ಸಾರಿಗೆ ಇಲಾಖೆ ಅಧಿಕಾರಿಗಳ ಆರೋಪಗಳಿಗೆ ಆರೋಪಿ ಪ್ರಯಾಣಿಕ ಸಿದ್ದೇಗೌಡ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, 'ಮೈಸೂರಿನ TC ಷರೀಫ್ ರವರು ದಿನಾಂಕ 23-02-2026 ರಂದು ಬೆಳಿಗ್ಗೆ 7.30ಕ್ಕೆ ಮೈಸೂರು - ಕೊಯಮತ್ತೂರು ಬಸ್ ಸಂಖ್ಯೆ KA 09 f 5496 ಬಸ್ ನಲ್ಲಿ Unreserved ಸೀಟ್ ನಲ್ಲಿ ಕೂತಿದ್ದ ನನ್ನನು ಎದ್ದು ನಿಂತು ಪ್ರಯಾಣಿಸು ಎಂದು ಹೇಳುವ ಅಧಿಕಾರ e ಅಧಿಕಾರಿಗೆ ಕೊಟ್ಟವರು ಯಾರು.?
ಒಬ್ಬ ಪ್ರಯಾಣಿಕನ ಮೇಲೆ e ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕೇಳಲು ಬಂದ ಸಹ ಪ್ರಯಾಣಿಕನಿಗೆ ಕೆಟ್ಟದಾಗಿ ಬೈದು, ತಳ್ಳಿ ಹಲ್ಲೆ ಮಾಡಿರುತ್ತಾರೆ ಎಂದು ಹೇಳಿದ್ದಾರೆ.
ಅಲ್ಲದೆ ತಾವು ರೆಕಾರ್ಡ್ ಮಾಡಿದ ವಿಡಿಯೋವನ್ನೂ ಕೂಡ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
Advertisement