

ಬೆಂಗಳೂರು: ಸತತ ಎರಡನೇ ದಿನವೂ ತಮ್ಮ ಪ್ರಯಾಣ ಯೋಜನೆಗಳಿಗೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿ ಖಾಸಗಿ ವಿಮಾನಯಾನ ಸಂಸ್ಥೆ ವಿರುದ್ಧ ನೇಪಾಳಕ್ಕೆ ತೆರಳಿದ್ದ ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಗುರುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನಿಂದ ಕಠ್ಮಂಡುವಿಗೆ ವಿಮಾನ ತೆರಳಿದೆ. ಆದಾಗ್ಯೂ, ಪ್ರಯಾಣಿಕರಿಗೆ ಏನಾಯಿತು ಎಂಬುದನ್ನು ಸ್ಪಷ್ಟವಾಗಿ ತಿಳಿಸದೆ ಕಠ್ಮಂಡುವಿನಲ್ಲಿ ಲ್ಯಾಂಡ್ ಆಗದೆ ವಾಪಸ್ಸಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಶುಕ್ರವಾರ ಬೆಳಿಗ್ಗೆ ಅದೇ ವಿಮಾನ ಮತ್ತೆ ಟೇಕ್ ಆಫ್ ಆಗಿದೆ.
ಆದರೂ ಮತ್ತೊಮ್ಮೆ ಕಠ್ಮಂಡುವಿನಲ್ಲಿ ಲ್ಯಾಂಡಿಂಗ್ ಮಾಡದೆ ಲಖನೌ ಕಡೆಗೆ ತಿರುಗಿಸಲಾಗಿದೆ. ಲಖನೌದಲ್ಲಿ ಲ್ಯಾಂಡಿಂಗ್ ಆದ ನಂತರ ಹಲವು ಗಂಟೆಗಳ ಕಾಲ ವಿಮಾನದೊಳಗೆ ಕುಳಿತುಕೊಳ್ಳುವಂತೆ ಮಾಡಲಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂಕ್ತ ಮಾಹಿತಿ ನೀಡದೆ ವಿಮಾನದಲ್ಲಿಯೇ ಎರಡು ಗಂಟೆಗಳ ಕಾಲ ನಮ್ಮನ್ನು ಕೂರಿಸಲಾಯಿತು. ತಾಳ್ಮೆ ಕಳೆದುಕೊಂಡ ಪ್ರಯಾಣಿಕರು ವಿಮಾನದೊಳಗೆ ಪ್ರತಿಭಟನೆ ನಡೆಸಿದ ನಂತರ ಬೆಂಗಳೂರಿಗೆ ಕರೆತರಲಾಯಿತು ಎಂದು ಪ್ರಯಾಣಿಕರೊಬ್ಬರು ಹೇಳಿದರು.
ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದ ವಲಸೆ ಪ್ರದೇಶದಲ್ಲಿ ( immigration area) ಪ್ರತಿಭಟನೆ ನಡೆಸಿದರು. ವಿಮಾನಯಾನ ಸಂಸ್ಥೆ ಸಮನ್ವಯತೆ ಕೊರತೆಯಿಂದ ಒಟ್ಟಾರೇ 30 ಗಂಟೆ ಸಮಯವನ್ನು ಹಾಳು ಮಾಡಲಾಗಿದೆ. ನೇಪಾಳ ಟ್ರಿಪ್ ವ್ಯರ್ಥವಾಗಿದೆ. ತುಂಬಾ ಆರ್ಥಿಕ ನಷ್ಟ ಹೊಂದಿರುವುದಾಗಿ ಮತ್ತೋರ್ವ ಪ್ರಯಾಣಿಕರು ಅಳಲು ತೋಡಿಕೊಂಡರು.
ಮಧ್ಯಪ್ರವೇಶಿಸಿದ ಸಿಐಎಸ್ ಎಫ್ ಸಿಬ್ಬಂದಿ, ಪ್ರಯಾಣಿಕರ ಪ್ರತಿಭಟನೆ ತೀವ್ರವಾಗದಂತೆ ಪ್ರಯತ್ನಿಸಿದರು. ಆದಾಗ್ಯೂ, ಅನೇಕ ಮಂದಿ ತಮ್ಮ ಹಣವನ್ನು ವಾಪಸ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸುಮಾರು 40ಕ್ಕೂ ಹೆಚ್ಚು ಕನ್ನಡಿಗ ಪ್ರಯಾಣಿಕರು ಈ ವಿಮಾನದಲ್ಲಿದ್ದರು. ವಿಮಾನಯಾನ ಸಂಸ್ಥೆ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದೆ ತಮ್ಮ ಧೀರ್ಘ ಅವಧಿಯ ನೇಪಾಳ ಪ್ರವಾಸಕ್ಕೆ ಅಡ್ಡಿಯಾಯಿತು ಎಂದು ಕನ್ನಡಿಗ ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
Advertisement