

ಬಳ್ಳಾರಿ: ಬಳ್ಳಾರಿಯಲ್ಲಿರುವ ಬಿಜೆಪಿ ನಾಯಕ ಜನಾರ್ಧನ ರೆಡ್ಡಿ ಅವರ ಮಾಡೆಲ್ ಹೌಸ್ ಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಳ್ಳಾರಿ ನಗರದ ಬೆಳಗಲ್ಲು ರಸ್ತೆಯ ಜಿ.ಸ್ಕ್ವೆಯರ್ಗೆ ಸಂಬಂಧಿಸಿದ ಲೇಔಟ್ ನಲ್ಲಿ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಅವರು ನಿರ್ಮಿಸಿದ್ದ ಮಾಡೆಲ್ ಮನೆಗೆ ನಿನ್ನೆ ಸಂಜೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಜಿ ಸ್ಕ್ವೆಯರ್ ಸೈಟ್ ಇಂಜಿಯರ್ ರಿಜ್ವಾನ್ ಮತ್ತು ಮಾಡೆಲ್ ಹೌಸ್ ಮತ್ತು ಲೇಔಟ್ ಸೂಪರ್ ವೈಸರ್ ಇಮ್ರಾನ್ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಈ ಲೇಔಟ್ ನಲ್ಲಿ ನಿವೇಶನ ಖರೀದಿ ಮಾಡುವವರು ಮನೆ ನಿರ್ಮಿಸಲು 60*60 ನಿವೇಶನದಲ್ಲಿ ಮಾದರಿ(ಮಾಡೆಲ್) ಮನೆ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಸಹ ನೀಡಿರಲಿಲ್ಲ. ನಿನ್ನೆ ಸಂಜೆ ಕೆಲ ದುಷ್ಕರ್ಮಿಗಳು ಈ ಮನೆಗೆ ಬೆಂಕಿಹಚ್ಚಿದ್ದಾರೆ. ದೂರದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ಗಳು ಬರುವ ವೇಳೆಗೆ ಅವರು ಪರಾರಿಯಾಗಿದ್ದಾರೆ.
ವಿಚಾರ ತಿಳಿದು ಅಗ್ನಿ ಶಾಮಕ ವಾಹನ ಬಂದು ನಂದಿಸುವ ವೇಳೆಗೆ ಮನೆ ಬಹುತೇಕ ಸುಟ್ಟು ಹೋಗಿತ್ತು. ಘಟನಾ ಸ್ಥಳಕ್ಕೆ ಎಸ್ಪಿ ಸುಮನ್ ಪೆನ್ನೇಕರ್, ಎಎಸ್ಪಿ ರವಿಕುಮಾರ್ ಸೇರಿದಂತೆ ಪೊಲೀಸರು ಆಗಮಿಸಿ ಪರಿಶೀಲಿಸಿದರು. ಫೋರೆನ್ಸಿಕ್ ತಂಡ ಸಹ ಬಂದಿತ್ತು. ಪೆಟ್ರೋಲ್ ಅಥವಾ ಡಿಸೇಲ್ ಬಳಸಲಾಗಿದೆಯಾ? ಬೆಂಕಿ ಹೇಗೆ ಹತ್ತಿರಬಹುದು ಎನ್ನುವ ಬಗ್ಗೆ ಮಾಹಿತಿಯನ್ನು ಅದು ಸಂಗ್ರಹಿಸಿತು.
ರೀಲ್ಸ್ಗಾಗಿ ಬೆಂಕಿ ಹಚ್ಚಿದ ಹುಡುಗರು!
ನಿನ್ನೆ ಸಂಜೆ ನಗೆದ ಬೆಳಗಲ್ಲು ರಸ್ತೆಯಲ್ಲಿನ ಜಿ.ಸ್ಕ್ವೆಯರ್ ಲೇ ಔಟ್ ನಲ್ಲಿನ ಜನಾರ್ದನರೆಡ್ಡಿ, ಶ್ರೀರಾಮುಲುಗೆ ಸೇರಿದ ಮಾದರಿ ಮನೆಗೆ ಬೆಂಕಿ ಹಚ್ಚಿದ್ದು ರೀಲ್ಸ್ ಮಾಡಲು ಹೋದ ಹುಡುಗರಿಂದ ಎಂದು ಎಸ್ಪಿ ಡಾ.ಸುಮನ್ ಡಿ. ಪೆನ್ನೆಕರ್ ಹೇಳಿದ್ದಾರೆ.
ಯುವಕರ ಗುಂಪು ರೀಲ್ಸ್ ಹಾಗೂ ಪೋಟೋ ಶೂಟ್ ಮಾಡಲು ಈ ಕೃತ್ಯ ಎಸಗಿದೆಂದು ಪ್ರಾಥಮಿಕ ತನಿಖೆಯಲ್ಲಿ ನಮಗೆ ತಿಳಿದು ಬಂದಿರೋದಾಗಿ ಎಸ್ಪಿ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಂಟು ಜನರನ್ನು ವಶಕ್ಕೆ ಪಡೆದಿದ್ದೇವೆ.
ಅವರಲ್ಲಿ ಆರು ಜನ ಅಪ್ರಾಪ್ತರು. ಇಬ್ಬರು ಮೇಜರ್ ಇದ್ದಾರೆ. ವಶಕ್ಕೆ ಪಡೆದವರ ಮೊಬೈಲ್ ನಲ್ಲಿ ನಮಗೆ ರೀಲ್ಸ್ ಹಾಗು ಪೋಟೋ ಸಿಕ್ಕಿವೆ. ಅಲ್ಲೇಯೇ ಬಿದ್ದಿದ್ದ ಬೆಂಕಿ ಪಟ್ಟಣದಿಂದ ಬಾಲಕನೊಬ್ಬ ಗೊತ್ತಿಲ್ಲದೇ ವಸ್ತುವೊಂದಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ತಿಳಿಸಿದ್ದಾರೆ.
ಪಾಳು ಬಿದ್ದಿದ್ದ ಮನೆ
ಬೆಂಕಿಗೆ ಆಹುತಿಯಾದ ಈ ಮನೆ ಅನೇಕ ವರ್ಷಗಳಿಂದ ಹಾಳು ಬಿದ್ದಿತ್ತು. ಮನೆಗೆ ಸೆಕ್ಯೂರಿಟಿ ಇಲ್ಲ, ಸಿಸಿ ಟಿವಿ ಇಲ್ಲ. ಇದರಲ್ಲಿ ಫ್ರಿಡ್ಜ್, ಟಿವಿ, ಸೋಫಾ ಏನು ಇರಲಿಲ್ಲ.ನಾವಿನ್ನೂ ಆಳವಾಗಿ ತನಿಖೆ ಮಾಡುತ್ತಿದ್ದೇವೆ. ಸದ್ಯಕ್ಕೆ ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿಲ್ಲ ಅನ್ನೋದು ಗೊತ್ತಾಗಿದೆ. ತನಿಖೆ ಶುರು ಮಾಡಿದ್ದೇವೆ ಎಂದಿದ್ದಾರೆ.
ಭರತ್ ರೆಡ್ಡಿ ಕೈವಾಡ?
ಬ್ಯಾನರ್ ಗಲಾಟೆ, ಫೈರಿಂಗ್ ಪ್ರಕರಣದ ಬಿಸಿ ಅರುವ ಮುನ್ನವೇ ನಿನ್ನೆ ಜಿ ಸ್ಕ್ವೆಯರ್ ಲೇಔಟ್ ನಲ್ಲಿರೋ ಜನಾರ್ದನ ರೆಡ್ಡಿ ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ್ದರಲ್ಲಿ ನಗರದ ಶಾಸಕ ನಾರಾ ಭರತ್ ರೆಡ್ಡಿ ಕೈವಾಡ ಇದೆಂದು ಜನಾರ್ದನರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಸಹೋದರರು ಆರೋಪಿಸಿದ್ದಾರೆ.
ಭರತ್ ರೆಡ್ಡಿ ಜನವರಿ 1 ರಂದು ಅವಂಬಾವಿಯ ನಮ್ಮಮನೆಗೆ ಬಂದು ಬ್ಯಾನರ್ ಗಲಾಟೆ ವಿಚಾರದಲ್ಲಿ ನಾನು ಮನಸ್ಸು ಮಾಡಿದ್ದರೆ ನಿಮ್ಮ ಮನೆಯನ್ನು ಸುಟ್ಟು ಹಾಕುವೆ ಎಂದು ಹೇಳಿದ್ದ. ನಾವು ವಾಸ ಮಾಡಿರುವ ಮನೆ ಸುಡಲು ಆಗದ ಕಾರಣ ನಮಗೆ ಸೇರಿದ ಈ ಮನೆ ಸುಟ್ಟಿದ್ದಾನೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಘಟನೆಯನ್ನು ಖಂಡಿಸಿ ನಿನ್ನೆ ರಾತ್ರಿ ನಗರ ಗಡಗಿ ಚೆನ್ನಪ್ಪ ಸರ್ಕಲ್ನಲ್ಲಿ ಸೋಮಶೇಖರ್ ರೆಡ್ಡಿ, ಸಣ್ಣ ಫಕ್ಕೀರಪ್ಪ ಮೊದಲಾದವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
Advertisement