

ಬೆಂಗಳೂರು: ಮಹಾಲಕ್ಷ್ಮಿ ಅವಹೇಳನಕಾರಿ ಹೇಳಿಕೆ ನೀಡಿ. ಧರ್ಮಕ್ಕೆ ಧಕ್ಕೆ ತರುವಂತೆ ಮಾತನಾಡಿದ್ದ ಸಂಖ್ಯಾಶಾಸ್ತ್ರಜ್ಞ, ಜ್ಯೋತಿಷಿ ಹಾಗೂ ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಆರ್ಯವರ್ಧನ್ ಅಲಿಯಾಸ್ ಆರ್ಯವರ್ಧನ್ ಗುರೂಜಿ ವಿರುದ್ಧ ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ನಾಟಕ ಗೋವು ರಕ್ಷಕರ ಸೇನೆಯ ಸಂಸ್ಥಾಪಕ-ಅಧ್ಯಕ್ಷ ಎಸ್.ಜಿ. ಸುಮನ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ, ವಿ.ವಿ.ಪುರಂ ಉಪವಿಭಾಗದ ಶಂಕರಪುರ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಆರ್ಯವರ್ಧನ್ ಗುರೂಜಿ ಖಾಸಗಿ ಸಾಮಾಜಿಕ ಜಾಲತಾಣದ ಸಂದರ್ಶನವೊಂದರಲ್ಲಿ ಮಹಿಳೆಯರು ಹಾಗೂ ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, "ಮಹಾಲಕ್ಷ್ಮಿ ದೇವಿಯು ಗುದದ್ವಾರದಲ್ಲಿ ನೆಲೆಸಿದ್ದಾಳೆ, ಅದನ್ನು ಪೂಜಿಸಬೇಕು" ಎಂಬ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹೇಳಿಕೆ ಮಹಿಳೆಯರ ಘನತೆಗೆ ಧಕ್ಕೆ ತರುವುದರ ಜೊತೆಗೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಹಾಗೂ ಸಮಾಜದಲ್ಲಿ ಧಾರ್ಮಿಕ ವೈಮನಸ್ಸು ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ದೂರುದಾರರ ಹೇಳಿಕೆ ದಾಖಲಿಸಿಕೊಂಡು, ಆರ್ಯವರ್ಧನ್ ನೀಡಿರುವುದಾಗಿ ಹೇಳಲಾದ ವಿಡಿಯೊವನ್ನು ಪರಿಶೀಲಿಸಿದ್ದಾರೆ.
ಬಳಿಕ ಸಂಬಂಧಪಟ್ಟ ಕಾನೂನು ತಜ್ಞರಿಂದ ಕಾನೂನು ಅಭಿಪ್ರಾಯ ಪಡೆದು, ದೂರು, ವಿಡಿಯೊ ಸಾಕ್ಷ್ಯ ಮತ್ತು ಕಾನೂನು ಅಭಿಪ್ರಾಯದ ಆಧಾರದ ಮೇಲೆ ಆರ್ಯವರ್ಧನ್ ಗುರೂಜಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆಯನ್ನು ಶಂಕರಪುರ ಪೊಲೀಸರು ಮುಂದುವರಿಸಿದ್ದಾರೆ.