ಮಂಗಳೂರು: ರಾಜ್ಯದ ಮೊದಲ ಒಣ ತ್ಯಾಜ್ಯದಿಂದ ಇಂಧನ ಪೆಲ್ಲೆಟ್‌ ತಯಾರಿಸುವ ಘಟಕ ಆರಂಭ

ಮರುಬಳಕೆ ಮಾಡಲು ಸಾಧ್ಯವಾಗದ ಒಣ ತ್ಯಾಜ್ಯವನ್ನು ಪರ್ಯಾಯ ಕೈಗಾರಿಕಾ ಇಂಧನವಾಗಿ ರೂಪಾಂತರಿಸುವ ಮೂಲಕ, ಅದನ್ನು ವಿಲೇವಾರಿ ಮಾಡಲು ನೂರಾರು ಕಿಲೋಮೀಟರ್‌ಗಳಷ್ಟು ದೂರ ಸಾಗಿಸುವ ಅಗತ್ಯವನ್ನು ಈ ಯೋಜನೆ ಕಡಿಮೆ ಮಾಡಲಿದೆ.
The dry waste-to-fuel pellet manufacturing plant near Mangaluru
ಮಂಗಳೂರಿನ ಸಮೀಪದ ಒಣ ತ್ಯಾಜ್ಯದಿಂದ ಇಂಧನ ಉಂಡೆ ತಯಾರಿಸುವ ಘಟಕ
Updated on

ಮಂಗಳೂರು: ಕರ್ನಾಟಕದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಂಗಳೂರಿನ ಸಮೀಪದ ಕೆಮ್ರಾಲ್‌ನಲ್ಲಿ ಒಣ ತ್ಯಾಜ್ಯವನ್ನು ಇಂಧನ ಪೆಲ್ಲೆಟ್‌ಗಳಾಗಿ ಪರಿವರ್ತಿಸುವ ಘಟಕವನ್ನು ಸ್ಥಾಪಿಸಿದೆ.

ಮರುಬಳಕೆ ಮಾಡಲು ಸಾಧ್ಯವಾಗದ ಒಣ ತ್ಯಾಜ್ಯವನ್ನು ಪರ್ಯಾಯ ಕೈಗಾರಿಕಾ ಇಂಧನವಾಗಿ ರೂಪಾಂತರಿಸುವ ಮೂಲಕ, ಅದನ್ನು ವಿಲೇವಾರಿ ಮಾಡಲು ನೂರಾರು ಕಿಲೋಮೀಟರ್‌ಗಳಷ್ಟು ದೂರ ಸಾಗಿಸುವ ಅಗತ್ಯವನ್ನು ಈ ಯೋಜನೆ ಕಡಿಮೆ ಮಾಡಲಿದೆ.

ಈ ಘಟಕವು ಇದುವರೆಗೆ ಬಳಕೆಗೆ ಬಾರದ ತ್ಯಾಜ್ಯಗಳಾದ ಹಳೆಯ ಬಟ್ಟೆಗಳು, ಪಾದರಕ್ಷೆಗಳು, ಏಕಬಳಕೆಯ ಪ್ಲಾಸ್ಟಿಕ್‌ಗಳು ಹಾಗೂ ಇತರ ಮರುಬಳಕೆ ಸಾಧ್ಯವಿಲ್ಲದ ಒಣ ತ್ಯಾಜ್ಯಗಳನ್ನು ಸಂಸ್ಕರಿಸಿ, ಕೈಗಾರಿಕಾ ಬಾಯ್ಲರ್‌ಗಳಲ್ಲಿ ಬಳಸುವ ರಿಫ್ಯೂಸ್ ಡೆರೈವ್ಡ್ ಫ್ಯುಯೆಲ್ (RDF) ಪೆಲ್ಲೆಟ್‌ಗಳಾಗಿ ಪರಿವರ್ತಿಸುತ್ತದೆ. ಈ ಯೋಜನೆಯನ್ನು ಎರಡು ವಾರಗಳ ಹಿಂದೆ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಆರಂಭಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ ಕರ್ಬಾರಿ ಅವರ ಪ್ರಕಾರ, ಮಹಾರಾಷ್ಟ್ರದಲ್ಲಿರುವ ಇದೇ ಮಾದರಿಯ ಘಟಕಕ್ಕೆ ಅಧ್ಯಯನ ಭೇಟಿ ನೀಡಿದ ಬಳಿಕ ಈ ಯೋಜನೆ ರೂಪಿಸಲಾಯಿತು.

ಪುಲ್ವರೈಸರ್ ಮತ್ತು ಪೆಲ್ಲೆಟೈಸರ್ ಸೇರಿದಂತೆ ಅಗತ್ಯ ಯಂತ್ರೋಪಕರಣಗಳಿಗೆ ಸುಮಾರು 50 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದು, ಕೆಮ್ರಾಲ್‌ನಲ್ಲಿದ್ದ ಒಣ ತ್ಯಾಜ್ಯ ಸಂಸ್ಕರಣಾ ಶೆಡ್ ನ್ನು ಈ ಘಟಕಕ್ಕೆ ತಕ್ಕಂತೆ ಮೇಲ್ದರ್ಜೆಗೇರಿಸಲಾಗಿದೆ.

ಕಲ್ಲಿದ್ದಲಿಗೆ ಪರ್ಯಾಯವಾಗುವ ಹೆಚ್ಚಿನ ಉಷ್ಣಾಂಶದ ಪೆಲ್ಲೆಟ್‌ಗಳು

ಯಾವುದೇ ಆರ್ ಡಿಎಫ್ ತ್ಯಾಜ್ಯವನ್ನು ಪುಡಿಮಾಡಿ, ಹೆಚ್ಚಿನ ಉಷ್ಣಾಂಶ ಮೌಲ್ಯ ಹೊಂದಿರುವ ಪೆಲ್ಲೆಟ್‌ಗಳಾಗಿ ಪರಿವರ್ತಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ಇವು ಕೈಗಾರಿಕಾ ಬಾಯ್ಲರ್‌ಗಳಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಸಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ತಿಳಿಸಿದ್ದಾರೆ.

ಉತ್ಪಾದನೆಯಾಗುವ ಪೆಲ್ಲೆಟ್‌ಗಳಿಗೆ ಖಚಿತ ಮಾರುಕಟ್ಟೆ ಕಲ್ಪಿಸಲು, ಯಂತ್ರೋಪಕರಣ ಪೂರೈಸಿದ ಪುಣೆ ಮೂಲದ ಕಂಪನಿಯೊಂದಿಗೆ ಜಿಲ್ಲಾ ಪಂಚಾಯಿತಿ ಒಪ್ಪಂದ ಮಾಡಿಕೊಂಡಿದೆ. ಅದರಂತೆ, ಕಂಪನಿ ಪ್ರತಿ ತಿಂಗಳು ಒಮ್ಮೆ ಪ್ರತಿ ಕೆ.ಜಿಗೆ 5 ರೂಪಾಯಿ ದರದಲ್ಲಿ ಪೆಲ್ಲೆಟ್‌ಗಳನ್ನು ಮರುಖರೀದಿಸಲಿದೆ.

ಪ್ರಾಯೋಗಿಕ ಹಂತದಲ್ಲಿರುವ ಈ ಘಟಕವು ದಿನಕ್ಕೆ ಎರಡು ಟನ್ RDF ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ತಿಂಗಳಿಗೆ 25 ದಿನ ಕಾರ್ಯನಿರ್ವಹಿಸಿದರೆ ಸುಮಾರು 50 ಟನ್ ಪೆಲ್ಲೆಟ್‌ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಪ್ರಸ್ತುತ ಈ ಘಟಕವು ಯಡಪಡಾವು ಮಟೀರಿಯಲ್ ರಿಕವರಿ ಫೆಸಿಲಿಟಿ (MRF)ಯಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಸಂಸ್ಕರಿಸುತ್ತಿದೆ. ಈ ಕೇಂದ್ರದಲ್ಲಿ ತಿಂಗಳಿಗೆ ಸುಮಾರು 50 ಟನ್ ಒಣ ತ್ಯಾಜ್ಯ ಉತ್ಪತ್ತಿಯಾಗುತ್ತದೆ.

The dry waste-to-fuel pellet manufacturing plant near Mangaluru
ತಂದೆಗೆ ಪಾರ್ಶ್ವವಾಯು: ರೋಗಿಗಳ ಜೀವನವನ್ನೇ ಬದಲಾಯಿಸುವ ಉಪಕರಣ ಕಂಡುಹಿಡಿದ ಹೈದರಾಬಾದ್ ಎಂಜಿನಿಯರಿಂಗ್ ವಿದ್ಯಾರ್ಥಿ

ಈ ಘಟಕವನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರ್ದಬ್ಬು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ನಿರ್ವಹಿಸುತ್ತಿದ್ದು, ಐವರಿಗೆ ಉದ್ಯೋಗ ಒದಗಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಯಡಪಡಾವು, ಉಜಿರೆ, ಕೆದಂಬಾಡಿ ಹಾಗೂ ನಾರಿಕೊಂಬುಗಳಲ್ಲಿ ನಾಲ್ಕು ತ್ಯಾಜ್ಯ ವಸ್ತು ಮರುಪಡೆಯುವಿಕೆ ಕೇಂದ್ರ MRF ಕೇಂದ್ರಗಳಿದ್ದು, ಒಟ್ಟಾರೆ ದಿನಕ್ಕೆ 31 ಟನ್ ಒಣ ತ್ಯಾಜ್ಯವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಇದರಲ್ಲಿ ಸುಮಾರು ಅರ್ಧದಷ್ಟು ಆರ್ ಡಿಎಫ್ ತ್ಯಾಜ್ಯವೇ ಆಗಿರುವುದರಿಂದ, ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಇನ್ನಷ್ಟು ಪೆಲ್ಲೆಟ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ.

ಇದುವರೆಗೆ ಈ MRF ಕೇಂದ್ರಗಳಿಂದ ಸಂಗ್ರಹವಾಗುತ್ತಿದ್ದ ಮರುಬಳಕೆ ಸಾಧ್ಯವಿಲ್ಲದ ತ್ಯಾಜ್ಯವನ್ನು ಸಹ-ಸಂಸ್ಕರಣೆಗಾಗಿ ಬೆಳಗಾವಿ ಮತ್ತು ಕಲಬುರಗಿಯ ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿತ್ತು. ಇದಕ್ಕೆ ಪ್ರತಿ ಲಾರಿ ಸಾಗಣೆಗೆ ಸುಮಾರು 48 ಸಾವಿರ ರೂಪಾಯಿ ವೆಚ್ಚವಾಗುತ್ತಿತ್ತು.

ಕೆಮ್ರಾಲ್ ಘಟಕದಿಂದ ಈ ಸಾಗಾಣಿಕೆ ವೆಚ್ಚ ಗಣನೀಯವಾಗಿ ಕಡಿಮೆಯಾಗುವುದರ ಜೊತೆಗೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಉತ್ತೇಜನ ಸಿಗಲಿದ್ದು, ಜೀವಾಶ್ಮ ಇಂಧನಗಳ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ ಎಂದು ಕರ್ಬಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com