

ಚಿಕ್ಕಬಳ್ಳಾಪುರ: ತಮ್ಮ ರಾಷ್ಟ್ರೀಯತೆಗೆ ಸಂಬಂಧಿಸಿದ ಸತ್ಯಾಂಶಗಳನ್ನು ಮರೆಮಾಚಿ ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿ ಪಡೆದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಂಗಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಫರಾ ನಾಜ್ ಮತ್ತು ಆಕೆಯ ಮಗ ಮೊಹಮ್ಮದ್ ಫರ್ದೀನ್ ಎಂದು ಗುರುತಿಸಲಾದ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ವಿದೇಶಿಯರ ಕಾಯ್ದೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಪಾಕಿಸ್ತಾನಿ ಪ್ರಜೆಗಳಾದ ಫರಾ ನಾಜ್ ಮತ್ತು ಅವರ ಮಗ ಮೊಹಮ್ಮದ್ ಫರ್ದೀನ್ ಅವರು ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ವಿಶ್ವಾಸಾರ್ಹ ಮೂಲಗಳಿಂದ ಲಭ್ಯವಾಗಿತ್ತು' ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ಕೆಲಸ ಮಾಡುತ್ತಿದ್ದ ಬಾಗೇಪಲ್ಲಿ ಮೂಲದ ಮೊಹಮ್ಮದ್ ಅಯೂಬ್ ಖಾನ್ ಅವರು, ಅಲ್ಲಿಯೇ ಪಾಕಿಸ್ತಾನದ ಪ್ರಜೆ ಫರಾ ನಾಜ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ನಾಲ್ವರು ಮಕ್ಕಳಿದ್ದು, ಅವರ ಪೈಕಿ ಮೊಹಮ್ಮದ್ ಫರ್ದೀನ್ ಪಾಕಿಸ್ತಾನದಲ್ಲಿ ಜನಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಫರಾ ನಾಜ್ ಮತ್ತು ಮೊಹಮ್ಮದ್ ಫರ್ದೀನ್ ಪಾಕಿಸ್ತಾನಿ ಪ್ರಜೆಗಳಾಗಿದ್ದರೆ, ಮೊಹಮ್ಮದ್ ಅಯೂಬ್ ಖಾನ್ ಮತ್ತು ಆ ದಂಪತಿಯ ಇತರ ಮೂವರು ಮಕ್ಕಳು ಭಾರತೀಯ ಪ್ರಜೆಗಳಾಗಿದ್ದಾರೆ . ಕುಟುಂಬವು ಸದ್ಯ ಬಾಗೇಪಲ್ಲಿಯಲ್ಲಿ ವಾಸಿಸುತ್ತಿದೆ ಎಂದು ಅಧಿಕಾರಿ ತಿಳಿಸಿದರು.
ಚಿಕ್ಕಬಳ್ಳಾಪುರ ಪೊಲೀಸರು ಸ್ಪಷ್ಟನೆ ಕೇಳಿದ ನಂತರ, ಜಿಲ್ಲಾಧಿಕಾರಿ ದಾಖಲೆಗಳನ್ನು ಪರಿಶೀಲಿಸಿ, 'ರಾಷ್ಟ್ರೀಯತೆಗೆ ಸಂಬಂಧಿಸಿದ ವಾಸ್ತವಿಕ ಸಂಗತಿಗಳನ್ನು ಮುಚ್ಚಿಡುವ ಮೂಲಕ ಪಡಿತರ ಚೀಟಿಯನ್ನು ಪಡೆಯಲಾಗಿದೆ' ಎಂದು ರದ್ದುಪಡಿಸಿದರು. ಮತದಾರರ ಗುರುತಿನ ಚೀಟಿಯನ್ನು ಸಹ ಸಕ್ಷಮ ಪ್ರಾಧಿಕಾರ ರದ್ದುಗೊಳಿಸಿದೆ ಎಂದು ಎಸ್ಪಿ ಹೇಳಿದರು.
'ಬಾಗೇಪಲ್ಲಿಯ ತಹಸೀಲ್ದಾರ್ ನೀಡಿದ ದೂರಿನ ಆಧಾರದ ಮೇಲೆ, ಇಬ್ಬರೂ ಆರೋಪಿಗಳಾದ ಫರಾ ನಾಜ್ ಮತ್ತು ಮೊಹಮ್ಮದ್ ಫರ್ದೀನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ ಮತ್ತು ಮುಂದಿನ ತನಿಖೆ ನಡೆಯುತ್ತಿದೆ' ಎಂದು ಎಸ್ಪಿ ತಿಳಿಸಿದರು.