

ಮಂಗಳೂರು: ಮಂಗಳೂರು ನಗರ ಪೊಲೀಸರು ಸೋಮವಾರ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ಮತ್ತು ಕೆಪಿಟಿ ಬಳಿಯ ಎರಡು ವಿಭಿನ್ನ ನಿರ್ಮಾಣ ಸ್ಥಳಗಳಲ್ಲಿದ್ದ ನಾಲ್ವರು ಅಪ್ರಾಪ್ತರು ಸೇರಿದಂತೆ 11 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.
ಕಳೆದ ಜುಲೈ 10 ರಂದು, ಸುರತ್ಕಲ್ ಪೊಲೀಸರು ಸುರತ್ಕಲ್ನ ಮುಕ್ಕದಲ್ಲಿರುವ ನಿರ್ಮಾಣ ಸ್ಥಳದಲ್ಲಿ ಎಂಟು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದರು. ಇಂದು ಮತ್ತೆ 11 ಜನರನ್ನು ಬಂಧಿಸಿದ್ದು, ಬಂಧಿತರ ಬಾಂಗ್ಲಾದೇಶಿಯರ ಸಂಖ್ಯೆ 19ಕ್ಕೆ ಏರಿದೆ.
ಇಂದು ಬಂಧಿಸಲ್ಪಟ್ಟವರಲ್ಲಿ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ಮೊಹಮ್ಮದ್ ಇಮ್ರಾನ್ ಅಲಿ(17), ಮೊಹಮ್ಮದ್ ಕೌಸರ್ ಅಲಿ(21), ಮೊಹಮ್ಮದ್ ನೂರ್ ಅಮೀನ್ (34), ಮೊಹಮ್ಮದ್ ನಹಿದುಲ್ ಇಸ್ಲಾಂ (22), ಮೊಹಮ್ಮದ್ ಹುಮಾಯೋನ್ ಕೋಬಿರ್ (22), ಮೊಹಮ್ಮದ್ ರೊಮ್ಜನ್ ಅಲಿ (23), ಮೊಹಮ್ಮದ್ ರೆಹಾದ್ ಅಲಿ (17), ಮೊಹಮ್ಮದ್ ಜಕರಿಯಾ ಅಲಿ (16), ಮೊಹಮ್ಮದ್ ಅಬ್ದುಲ್ ರೆಹಮಾನ್ ರಾಯಲ್ (19), ಮೊಹಮ್ಮದ್ ಇಸ್ರಾಫಿಲ್ ಅಲಿ (15) ಮತ್ತು ಮೊಹಮ್ಮದ್ ನೋಯಾನ್(24) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಈ ಕಾರ್ಮಿಕರಲ್ಲಿ ಕೆಲವರು ಕಳೆದ ಐದು ತಿಂಗಳಿನಿಂದ ಮಂಗಳೂರಿನಲ್ಲಿ ವಾಸಿಸುತ್ತಿದ್ದರೆ, ಇನ್ನು ಕೆಲವರು ಸುಮಾರು ಮೂರು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದರು.
ಪಶ್ಚಿಮ ಬಂಗಾಳದ ಮಧ್ಯವರ್ತಿಯೊಬ್ಬರು, ಭಾರತದ ಇತರ ರಾಜ್ಯಗಳ ಕೆಲವು ಭಾರತೀಯ ಕಾರ್ಮಿಕರೊಂದಿಗೆ ಮಂಗಳೂರಿಗೆ ಕರೆತಂದಿದ್ದಾರೆ. ಈಗ ಆ ಮಧ್ಯವರ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಅವರನ್ನು ಬಂಧಿಸಲು ಮತ್ತು ಗಡೀಪಾರು ಮಾಡುವ ಆದೇಶಕ್ಕಾಗಿ FRRO ಗೆ ವರದಿಯನ್ನು ಕಳುಹಿಸಲಾಗುವುದು ಮತ್ತು ದಾಖಲೆಗಳ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಬಂಧಿತರು ಮುರ್ಷಿದಾಬಾದ್ ಮೂಲಕ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಮಾನ್ಯ ಭಾರತೀಯ ಗುರುತಿನ ದಾಖಲೆಗಳನ್ನು ಹೊಂದಿಲ್ಲ ಮತ್ತು ಕೆಲವರು ನಕಲಿ ದಾಖಲೆಗಳನ್ನು ಹೊಂದಿದ್ದಾರೆ ಎಂದು ಡಿಸಿಪಿ ಮಿಥುನ್ ಎಚ್ಎನ್ ತಿಳಿಸಿದ್ದಾರೆ.