

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬೈಕ್ ಮೆಕ್ಯಾನಿಕ್ ಒಬ್ಬರ ಕೊಲೆ ಪ್ರಕರಣವನ್ನು ಭೇದಿಸಿದ್ದು, 48 ವರ್ಷದ ಕೊಲೆಗೀಡಾದ ವ್ಯಕ್ತಿಯ ಜೇಬಿನಲ್ಲಿ ಸಿಕ್ಕ ಬೈಕ್ ಮೆಕ್ಯಾನಿಕ್ ಅಂಗಡಿಯ ವಿಸಿಟಿಂಗ್ ಕಾರ್ಡ್ ಆರೋಪಿಗಳನ್ನು ಗುರುತಿಸಲು ಸಹಾಯ ಮಾಡಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದ್ದು, ಹೆತ್ತ ತಂದೆಯನ್ನೇ ಕೊಲೆ ಮಾಡಿದ ಮಗ ಹಾಗೂ ಅವರ ಅಳಿಯನನ್ನು ಬಂಧಿಸಲಾಗಿದೆ.
ಮೃತನನ್ನು ತಮಿಳುನಾಡು ಮೂಲದ ಬೊಮ್ಮನಹಳ್ಳಿ ನಿವಾಸಿ ರಫೀಕ್(48) ಎಂದು ಗುರುತಿಸಲಾಗಿದ್ದು, ಹೊಸೂರು ರಸ್ತೆಯ ಅಂಗಡಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.
ಮದ್ಯಪಾನ ವ್ಯಸನಿಯಾಗಿದ್ದ ರಫೀಕ್ ನನ್ನು, ಬೈಕ್ ಟ್ಯಾಕ್ಸಿ ಕ್ಯಾಪ್ಟನ್ ಆಗಿರುವ ಅವರ ಮಗ ಸೈಯದ್ ಶಾರುಕ್(26) ಮತ್ತು ಆಟೋರಿಕ್ಷಾ ಚಾಲಕನಾಗಿರುವ ಅಳಿಯ ಶಾಹಿನ್ ಶಾ(36) ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಜುಲೈ 4 ರಂದು, ಸ್ಥಳೀಯ ನಿವಾಸಿಗಳು ಸಿಂಗಸಂದ್ರ ಸರೋವರದ ಬಳಿಯ ವಿಟ್ಟಸಂದ್ರ ಗ್ರಾಮದ ಅಪಾರ್ಟ್ಮೆಂಟ್ನ ಹಿಂದಿನ ನೀಲಗಿರಿ ತೋಪಿನ ಬಳಿ ಅಪರಿಚಿತ ವ್ಯಕ್ತಿಯ ಶವ ಬಿದ್ದಿರುವುದನ್ನು ನೋಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದರು. ಮೃತನ ಕುತ್ತಿಗೆಯಲ್ಲಿ ರಕ್ತಸ್ರಾವದ ಗಾಯಗಳು ಮತ್ತು ಕತ್ತು ಹಿಸುಕಿದ ಗುರುತುಗಳು ಕಂಡುಬಂದಿದ್ದು, ಕೊಲೆಯ ಅನುಮಾನವನ್ನು ಹುಟ್ಟುಹಾಕಿತ್ತು. ದೇಹದ ಮೇಲೆ ಯಾವುದೇ ಗಾಯದ ಗುರುತು ಇಲ್ಲದ ಕಾರಣ ಮತ್ತು ಯಾವುದೇ ದೂರು ದಾಖಲಾಗದ ಕಾರಣ, ಆರಂಭದಲ್ಲಿ ತನಿಖೆ ದೊಡ್ಡ ಸವಾಲಾಗಿತ್ತು. ಆದಾಗ್ಯೂ, ಮೃತನ ಜೇಬಿನಲ್ಲಿ ಪತ್ತೆಯಾದ ಬೈಕ್ ಮೆಕ್ಯಾನಿಕ್ ಅಂಗಡಿಯ ವಿಸಿಟಿಂಗ್ ಕಾರ್ಡ್, ಆರೋಪಿಗಳನ್ನು ಗುರುತಿಸುವಲ್ಲಿ ನಿರ್ಣಾಯಕ ಸುಳಿವು ನೀಡಿತು.
ಪೊಲೀಸ್ ತಂಡವು ಹೊಸೂರು ರಸ್ತೆಯಲ್ಲಿರುವ ಮೆಕ್ಯಾನಿಕ್ ಅಂಗಡಿಗೆ ಭೇಟಿ ನೀಡಿದಾಗ ಮೃತನು ಅಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ನಂತರ ಅಧಿಕಾರಿಗಳು ಬೊಮ್ಮನಹಳ್ಳಿಯಲ್ಲಿರುವ ಅವರ ನಿವಾಸದ ವಿಳಾಸವನ್ನು ಪತ್ತೆಹಚ್ಚಿ ಅವರ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಜುಲೈ 3 ರಂದು ರಫಿಯನ್ನು ಅವರ ಮಗ ಮತ್ತು ಅಳಿಯ, ಕುಡಿತ ಬಿಡಿಸಲು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿದ್ದಾರೆ ಎಂದು ಕುಟುಂಬ ಹೇಳಿದೆ. ನಂತರ ಪೊಲೀಸರು ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ರಫೀಕ್, ಕಳೆದ ಎಂಟು ವರ್ಷಗಳಿಂದ ಮದ್ಯದ ಚಟಕ್ಕೆ ದಾಸನಾಗಿದ್ದು, ಮಾದಕ ವ್ಯಸನಿಯಾಗಿದ್ದರಿಂದ ಅವರ ಕುಟುಂಬದಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಹೇಳಿದ್ದಾರೆ. ಈ ಹಿಂದೆ ಅವರು ಸುಮಾರು ಮೂರು ತಿಂಗಳ ಕಾಲ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಮನೆಗೆ ಹಿಂದಿರುಗಿದ ನಂತರ ಮತ್ತೆ ಮದ್ಯಪಾನವನ್ನು ಮುಂದುವರಿಸಿದನು.
ಜುಲೈ 3 ರಂದು, ಮನೆಯಲ್ಲಿ ಮತ್ತೆ ಜಗಳವಾಗಿದೆ. ಮರುದಿನ, ಮದ್ಯದ ಅಮಲಿನಲ್ಲಿದ್ದ ಆರೋಪಿಗಳು, ಮನೆಯಲ್ಲಿದ್ದ ರಫೀಕ್ ಮೇಲೆ ಹಲ್ಲೆ ನಡೆಸಿ, ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿ ಶಾಹಿನ್ ಶಾ ಆಟೋದಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ.
ದಾರಿಯಲ್ಲಿ ಹೋಗುವಾಗ, ಆಟೋರಿಕ್ಷಾದೊಳಗೆ ಮತ್ತೆ ಜಗಳವಾಗಿದ್ದು, ಗಲಾಟೆಯ ಸಮಯದಲ್ಲಿ, ಶಾಹಿನ್ ಶಾ ವಾಹನದೊಳಗೆ ಇರಿಸಲಾಗಿದ್ದ ಹಗ್ಗವನ್ನು ಬಳಸಿ ರಫೀಕ್ ಅವರ ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಆರೋಪಿಗಳು ಶವವನ್ನು ಸಿಂಗಸಂದ್ರ ಬಳಿಯ ನೀಲಗಿರಿ ತೋಪಿನಲ್ಲಿ ಬಿಸಾಕಿ, ಸಾಕ್ಷ್ಯಗಳನ್ನು ನಾಶಮಾಡಲು ಯತ್ನಿಸಿದ್ದಾರೆ.