

ಬೆಂಗಳೂರು: ಪೂರ್ವ ಬೆಂಗಳೂರಿನ 500 ಎಕರೆ ವ್ಯಾಪ್ತಿಯ ಎಲೆ ಮಲ್ಲಪ್ಪ ಶೆಟ್ಟಿ ಕೆರೆ, ಇದುವರೆಗೆ ಸಣ್ಣ ನೀರಾವರಿ (Minor Irrigation) ಇಲಾಖೆಯ ವ್ಯಾಪ್ತಿಯಲ್ಲಿದ್ದು, ಶೀಘ್ರದಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ವರ್ಗಾವಣೆಯಾಗಲಿದೆ. ಇಲಾಖೆಯ ಎಂಜಿನಿಯರ್ಗಳ ಪ್ರಕಾರ, ಹಣದ ಕೊರತೆಯೇ ಈ ವರ್ಗಾವಣೆಗೆ ಪ್ರಮುಖ ಕಾರಣವಾಗಿದೆ. ಕೆರೆಯ ಪುನಶ್ಚೇತನ, ಭದ್ರತೆ, ಬೇಲಿ ನಿರ್ಮಾಣ ಹಾಗೂ ವಾರ್ಷಿಕ ನಿರ್ವಹಣೆಗೆ ಕನಿಷ್ಠ 20 ಕೋಟಿ ರೂಪಾಯಿ ಅಗತ್ಯವಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ನಿರ್ದೇಶನದಂತೆ ಕೆರೆಯ ಸುತ್ತ 9 ಕಿ.ಮೀ. ಚೈನ್-ಲಿಂಕ್ ಬೇಲಿ ನಿರ್ಮಾಣ ಕಾರ್ಯ ಆರಂಭಿಸಿದ್ದೇವೆ. ಇದುವರೆಗೆ 7 ಕಿ.ಮೀ. ಪ್ರದೇಶದಲ್ಲಿ ಬೇಲಿ ಅಳವಡಿಸಲಾಗಿದೆ. ಅಪಾರ್ಟ್ಮೆಂಟ್ ಸಂಕೀರ್ಣಕ್ಕೆ ಹೋಗುವ ಪ್ರವೇಶ ರಸ್ತೆ ಕೆರೆಯ ಮೂಲಕ ಹಾದುಹೋಗಿದ್ದು, ಈ ಸಂಬಂಧ ಬಿಲ್ಡರ್ ಒಬ್ಬರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ಜಲಮೂಲದ ನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿ ಮತ್ತು ಯಂತ್ರೋಪಕರಣಗಳು ಜಿಬಿಎ ಬಳಿ ಇರುವುದರಿಂದ ಕೆರೆಯನ್ನು ಅದಕ್ಕೆ ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಪತ್ರವ್ಯವಹಾರ ಆರಂಭವಾಗಿದೆ ಎಂದು ಇಲಾಖೆಯ ಎಂಜಿನಿಯರ್ ತಿಳಿಸಿದರು.
ಜೂನ್ನಲ್ಲೇ ಈ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. ಆದರೆ, ಬಿಬಿಎಂಪಿಯ ಹಿರಿಯ ಕೆರೆ ಎಂಜಿನಿಯರ್ , ಈಗಾಗಲೇ ಬಜೆಟ್ ಅಂತಿಮಗೊಂಡಿರುವುದರಿಂದ, ಕೆರೆಯ ಅಭಿವೃದ್ಧಿಗೆ ಅಗತ್ಯವಿರುವ ವೆಚ್ಚವನ್ನು ಸಣ್ಣ ನೀರಾವರಿ ಇಲಾಖೆಯೂ ಹಂಚಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಹೋರಾಟಗಾರ ಜಗನ್ ಕುಮಾರ್, ಕೆರೆ ಮತ್ತು ಅದರ ಪರಿಸರದ ಸಮಸ್ಯೆಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಗಮನಕ್ಕೆ ತಂದ ಬಳಿಕ ಎನ್ಜಿಟಿ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು.
ಕೆರೆಯ ಸಮೀಪ ತ್ಯಾಜ್ಯ ಮತ್ತು ಕಸವನ್ನು ಸುರಿಯುವುದರಿಂದ ಹೂಳು ನಿರ್ಮಾಣವಾಗಿ ಅದು ಕೆರೆಗೆ ಸೇರುತ್ತಿದೆ. ಜೊತೆಗೆ, ಒಳಚರಂಡಿ ಶುದ್ಧೀಕರಣ ಘಟಕದಿಂದ (ಎಸ್ಟಿಪಿ) ಹೊರಬರುವ ನೀರೂ ಕೆರೆಗೆ ಹರಿಯುತ್ತಿದೆ ಎಂದು ಜಗನ್ ಕುಮಾರ್ ಹೇಳಿದರು.
ಕೆರೆಯ ಭೂಮಿಯ ಒಂದು ಭಾಗ ಈಗಾಗಲೇ ಅತಿಕ್ರಮಣಕ್ಕೊಳಗಾಗಿದ್ದು, ಈಗ ಅದರ ಬಫರ್ ವಲಯಗಳ ಮೇಲೂ ಅತಿಕ್ರಮಣ ನಡೆಯುತ್ತಿದೆ. ಕೆರೆಯ ಸುತ್ತಮುತ್ತ ವಸತಿ ಬಡಾವಣೆಗಳು ಹಾಗೂ ಮದ್ಯದಂಗಡಿಗಳು ನಿರ್ಮಾಣವಾಗಿವೆ ಎಂದು ಅವರು ಆರೋಪಿಸಿದರು. ಎನ್ಜಿಟಿ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಅವರು ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸ್ಮಶಾನಕ್ಕೆ ಪ್ರವೇಶ ರಸ್ತೆ ಕಲ್ಪಿಸುವ ನೆಪದಲ್ಲಿ, ಕೆರೆಯ ಸುತ್ತಲಿನ ಅನಧಿಕೃತ ಬಡಾವಣೆಗಳಿಗೆ ರಸ್ತೆ ನಿರ್ಮಿಸಲು ಬಿಲ್ಡರ್ಗಳ ಲಾಬಿ ಪ್ರಯತ್ನಿಸುತ್ತಿದೆ ಎಂದು ಜಗನ್ ಕುಮಾರ್ ಆರೋಪಿಸಿದರು.
ಕೆರೆ ಹೋರಾಟಗಾರ ಬಾಲಾಜಿ ರಘೋತ್ತಮ, ಈ ಕೆರೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿದರೆ ಅದು ಬೆಂಗಳೂರಿನ ಎರಡನೇ ಪಕ್ಷಿಧಾಮವಾಗಿ ರೂಪುಗೊಳ್ಳುವ ಸಾಮರ್ಥ್ಯ ಹೊಂದಿದೆ ಎಂದರು.
ಪಕ್ಷಿ ವೀಕ್ಷಕರು ಈ ಕೆರೆಯಲ್ಲಿ ನಾರ್ದರ್ನ್ ಶೊವೆಲರ್, ಎಗ್ರೆಟ್, ಗ್ಲಾಸಿ ಐಬಿಸ್, ಯುರೇಷಿಯನ್ ಕೂಟ್, ಯುರೇಷಿಯನ್ ಮೂರ್ಹೆನ್, ಲಿಟಲ್ ಗ್ರೀಬ್, ಗ್ರೇ-ಹೆಡೆಡ್ ಸ್ವಾಂಪ್ಹೆನ್, ಪೈಡ್ ಕಿಂಗ್ಫಿಷರ್, ಏಷ್ಯನ್ ಗ್ರೀನ್ ಬೀ-ಈಟರ್ ಹಾಗೂ ಗೋಲ್ಡನ್ ಓರಿಯೊಲ್ ಸೇರಿದಂತೆ ಹಲವು ಅಪರೂಪದ ಪಕ್ಷಿ ಪ್ರಭೇದಗಳನ್ನು ಗುರುತಿಸಿದ್ದಾರೆ.