

ತುಮಕೂರು: ಪಕ್ಕದ ರಾಜ್ಯ ಆಂಧ್ರ ಪ್ರದೇಶದಲ್ಲಿ ಮತ್ತೆ ಮಹಾಮಾರಿ ಕೊರೋನಾ ಅಬ್ಬರ ಹೆಚ್ಚುತ್ತಿದ್ದು, ಕೋವಿಡ್ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತ ರಾಜ್ಯದ ಗಡಿಭಾಗದಲ್ಲೂ ಕೊರೋನಾ ಭೀತಿ ಸೃಷ್ಟಿಯಾಗಿದೆ.
ಪಕ್ಕದ ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವುದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಗಡಿಯಲ್ಲಿ ಕಟ್ಟು ನಿಟ್ಟಿನ ನಿಗಾ ವಹಿಸುತ್ತಿದೆ. ಪಾವಗಡ ಮತ್ತು ಆಂಧ್ರದ 8 ಗಡಿ ಮಾರ್ಗಗಳಲ್ಲಿ ಕೋವಿಡ್ ತಪಾಸಣೆ ಮಾಡಲಾಗುತ್ತಿದ್ದು, ಅಗತ್ಯ ಚಿಕಿತ್ಸಾ ಕೇಂದ್ರಗಳನ್ನ ಸಹ ಈಗಾಗಲೇ ತೆರೆಯಲಾಗಿದೆ.
ಆಂಧ್ರ ಪ್ರದೇಶದ ಇಲಾಖೆಯ ಮಾಹಿತಿ ಪ್ರಕಾರ ಇಂದು ನಾಲ್ವರು ಕೊರೋನಾದಿಂದ ಮೃತಪಟ್ಟಿದ್ದಾರೆ. ಕಡಬದಲ್ಲೇ ಮೂವರು ಮೃತಪಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಗಡಿ ಭಾಗಿವಾದ ಪಾವಗಡದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.
ಕಳೆದ ಎರಡು ದಿನಗಳಿಂದ ಪಾವಗಡ ಗಡಿಭಾಗದಲ್ಲಿ ಆರೋಗ್ಯ ಅಧಿಕಾರಿಗಳು ಅಲರ್ಟ್ ಆಗಿದ್ದು, ಪಾವಗಡ-ಆಂಧ್ರದ 8 ಗಡಿ ಮಾರ್ಗಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ನಾಗಲಮಡಿಕೆ, ಕೊಡಮಡುಗು, ವಳ್ಳೂರಿ ಸೇರಿದಂತೆ 8 ಕಡೆ ಚೆಕ್ಪೊಸ್ಟ್ ನಿರ್ಮಿಸಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪ್ರಯಾಣಿಕರ ತಪಾಸಣೆ ಜೊತೆಗೆ ಪ್ರಯಾಣದ ವಿವರ ಸಂಗ್ರಹಿಸಲಾಗುತ್ತಿದೆ.
ಇನ್ನು ಆಂಧ್ರ-ಪಾವಗಡಕ್ಕೆ ಬರುವ ರಸ್ತೆ ಮಾರ್ಗದಲ್ಲಿ ಆರೋಗ್ಯ ಸಿಬ್ಬಂದಿ ಸಹಿತ ಆಶಾ ಕಾರ್ಯಕರ್ತಯರನ್ನು ನಿಯೋಜಿಸಲಾಗಿದೆ. ಯಾವುದೇ ಹಂತದಲ್ಲೂ ರಾಜ್ಯಕ್ಕೆ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಧಿಕಾರಿಗಳು ಇನ್ನು 11 ದಿನಗಳ ಕಾಲ ಪ್ರಯಾಣಿಕರ ತಪಾಸಣೆ ಹಾಗೂ ಮಾಹಿತಿ ಸಂಗ್ರಹ ಮುಂದುವರಿಸಲಿದ್ದಾರೆ.
ಕಳೆದ ಎರಡು ದಿನಗಳಿಂದ ಗಡಿಯಲ್ಲಿ ನಿರಂತರ ಪರಿಶೀಲನೆ ನಡೆಯುತಿದ್ದು, ಈವರೆಗೂ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಪಾವಗಡ ತಾಲೂಕಾಸ್ಪತ್ರೆಯಲ್ಲಿ ಜಿಲ್ಲಾಡಳಿತ ಕೋವಿಡ್ ಕೇರ್ ಸೆಂಟರ್ ಸಹ ತೆರೆಯಲಾಗಿದೆ. ಅಗತ್ಯ ಹಾಗೂ ತುರ್ತು ಸಂದರ್ಭಕ್ಕೆ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆ ಸಹ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಡಿಸಿಎಂ ಪರಮೇಶ್ವರ ಹೇಳಿದ್ದೇನು?
ಇಂದು ತುಮಕೂರಿನಲ್ಲಿ ಕೋವಿಡ್ ತಪಾಸಣೆ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, ನೆರೆಯ ಅನಂತಪುರದಲ್ಲೂ ಕೋವಿಡ್ಗೆ ಇಬ್ಬರು ಬಲಿಯಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಡೆಂಘೀ, ಚಿಕುನ್ ಗುನ್ಯಾ ವರದಿಯಾಗಿದೆ ಎಂದರು.
ಜನ ಅನಂತಪುರದಿಂದ ನಮ್ಮ ಜಿಲ್ಲೆಗೆ ಬರಬಾರದೆಂದು ಚೆಕ್ಪೋಸ್ಟ್ ಹಾಕಲಾಗಿದೆ. ಆ ರೀತಿ ಯಾರಾದರೂ ಬಂದರೆ ಐಸೋಲೇಟ್ ಮಾಡಲು ಸೂಚಿಸಿದ್ದೇನೆ. ಕಲುಷಿತ ನೀರು ಪೂರೈಸದಂತೆಯೂ ಸೂಚನೆ ನೀಡಲಾಗಿದೆ. ಹಲವು ವರ್ಷಗಳಾದರೂ ನೀರಿನ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲ್ಲ. ಇದರಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಸಮಸ್ಯೆಯಾಗುವ ಸಾಧ್ಯತೆಯಿದೆ. ಹಿಂದೆಲ್ಲಾ ಆ ರೀತಿ ಆಗಿದೆ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಸೂಚಿಸಿದ್ದೇನೆ ಎಂದರು.